ಬಿಜೆಪಿಯಲ್ಲಿ ಯಡಿಯೂರಪ್ಪ ಸ್ಥಿತಿ ಪಾಪ ಪಾಂಡುವಂತಾಗಿದೆ: ಐವನ್ ಡಿಸೋಜಾ
ಮಂಗಳೂರು, ಸೆಪ್ಟೆಂಬರ್ 29 : ರಾಜ್ಯ ಬಿಜೆಪಿಯಲ್ಲಿ ಭಿನ್ನ ಮತ , ಅಸಮಾಧಾನ ಭುಗಿಲೆದ್ದಿದ್ದು ಅದನ್ನು ನಿಭಾಯಿಸಲಾಗದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಸ್ಥಿತಿ ಪಾಪ ಪಾಂಡು ಥರ ಆಗಿ ಬಿಟ್ಟಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ವ್ಯಂಗ್ಯ ವಾಡಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೈತ್ರಿ ಸರ್ಕಾರವನ್ನು ಬೀಳಿಸಲು ಬಿಜೆಪಿ ನಾಯಕರು ಭಾರೀ ಪ್ರಯತ್ನ ನಡೆಸಿದ್ದರು ಆದರೆ ಮೈತ್ರಿ ಸರಕಾರದ ಒಗ್ಗಟ್ಟು ಮುರಿಯಲು ಬಿಜೆಪಿ ನಾಯಕರಿಗೆ ಸಾಧ್ಯವಾಗಿಲ್ಲ ಎಂದು ಹೇಳಿದರು.
ಹಣದ, ಅಧಿಕಾರದ ಆಮಿಷ ಒಡ್ಡಿ ಆಪರೇಷನ್ ಕಮಲಕ್ಕೆ ಬಿಜೆಪಿ ನಾಯಕರು ಅವಿರತ ಪ್ರಯತ್ನ ನಡೆಸಿದ್ದರು ಅದರೆ ಯಶಸ್ಸು ಸಿಗಲಿಲ್ಲ ಎಂದು ಅವರು ಹೇಳಿದರು. ರಾಜ್ಯ ಸರ್ಕಾರವನ್ನು ಅಸ್ಥಿರ ಗೊಳಿಸಲು ಮುಂದಾದ ಬಿಜೆಪಿ ನಾಯಕರ ವಿರುದ್ಧವೇ ಪಕ್ಷದೊಳಗೆ ಅಸಮಾಧಾನ ಹೊಗೆಯಾಡ ತೊಡಗಿದೆ. ಬಿಜೆಪಿ ಹಲವಾರು ಭಾಗ ಗಳಾಗಿ ಒಡೆದು ಹೋಳಾಗಿ ಹೋಗಿದೆ. ರಾಜ್ಯಾದ್ಯಕ್ಷ ಯಡಿಯೂರಪ್ಪ ಅವರನ್ನು ಮುಖಂಡರು ನೇರವಾಗಿ ತರಾಟೆಗೆ ತೆಗೆದು ಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು .

ಬಿಜೆಪಿ ಯೊಳಗಿನ ಭಿನ್ನಮತ ವನ್ನು ಶಮನ ಗೊಳಿಸಲಾಗದೇ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪಅವರ ಸ್ಥಿತಿ ಪಾಪ ಪಾಂಡು ಅಂತೆ ಆಗಿದೆ ಎಂದು ವ್ಯಂಗ್ಯ ವಾಡಿದ ಅವರು ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ನಾಲ್ಕು ಬಾರಿ ಪ್ರಯತ್ನಿಸಿ ವಿಫಲವಾಗಿದೆ. ಪ್ರಜಾಪ್ರಭುತ್ವದಲ್ಲಿ ಇದು ಒಳ್ಳೆಯ ಲಕ್ಷಣವಲ್ಲ ಎಂದರು.
ಯಡಿಯೂರಪ್ಪ ಈಗಲೂ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಹಗಲುಕನಸು ಕಾಣುತ್ತಿದ್ದಾರೆ. ಆದರೆ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲು ಬಿಜೆಪಿ ನಾಯಕರೇ ಬಿಡುವುದಿಲ್ಲ. ಈ ಬಗ್ಗೆ ಅರಿವಿಲ್ಲದ ಯಡಿಯೂರಪ್ಪರ ಬಗ್ಗೆ ಕನಿಕರವಿದೆ ಎಂದು ಅವರು ಕುಟುಕಿದರು.











Click it and Unblock the Notifications