ಜೈಲಲ್ಲಿ ಬಾಡೂಟ ನಡೆಸಿದ ಫೋಟೋ ಹಳೆಯದು - ಐವನ್ ಡಿ ಸೋಜಾ
ಮಂಗಳೂರು, ಜುಲೈ 21: ಕಾರಾಗೃಹದಲ್ಲಿ ಖೈದಿಗಳು ಬಾಡೂಟ ನಡೆಸಿದ್ದಾರೆನ್ನಲಾದ ಘಟನೆ ಹಳೆಯದು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾಗಿ ವಿಧಾನ ಪರಿಷತ್ನ ಮುಖ್ಯ ಸಚೇತಕ ಐವನ್ ಡಿಸೋಜಾ ಹೇಳಿದ್ದಾರೆ.
"ಜೈಲಿನಲ್ಲಿ ವಿಚಾರಣಾಧೀನ ಕೈದಿಗಳು ನಡೆಸಿದ್ದಾರೆನ್ನಲಾದ ಬಾಡೂಟದ ಬಗ್ಗೆ ನಾನಿಂದು ಜೈಲಿನ ಪ್ರಭಾರ ಅಧೀಕ್ಷರನ್ನು ಪ್ರಶ್ನಿಸಿದ್ದೇನೆ. ಆ ಫೋಟೋದಲ್ಲಿ ಕಾಣಿಸಿಕೊಂಡಿರುವ ಮೂವರು ಖೈದಿಗಳು ಈಗಾಗಲೇ ಇಲ್ಲಿಂದ ಬಿಡುಗಡೆಗೊಂಡಿದ್ದಾರೆ. ಅದು ಯಾವಾಗ ನಡೆದ ಘಟನೆ ಎಂದು ತಮಗೆ ಗೊತ್ತಿಲ್ಲವೆಂದು ಅಧಿಕಾರಿ ತಿಳಿಸಿದ್ದಾರೆ ," ಎಂದು ಐವನ್ ಡಿಸೋಜಾ ನುಡಿದರು.

"ಹೊಸ ಡಿಜಿ (ಕಾರಾಗೃಹ)ಯಾಗಿ ಎನ್.ಎಸ್. ಮೇಘರಿಕ್ರವರು ಅಧಿಕಾರ ಸ್ವೀಕರಿಸಿದ ಬಳಿಕ ಅವರನ್ನು ಭೇಟಿ ಮಾಡಿ ಇಲ್ಲಿನ ಸಿಬ್ಬಂದಿಗಳ ಕೊರತೆಯನ್ನು ಈಗಾಗಲೇ ಗಮನಕ್ಕೆ ತಂದಿದ್ದೇನೆ. 118
ವಿಚಾರಣಾಧೀನ ಖೈದಿಗಳಿರಬೇಕಾದ ಜೈಲಿನಲ್ಲಿ 418 ಮಂದಿ ಖೈದಿಗಳಿದ್ದಾರೆ. ಇದರಿಂದ ಜೈಲಿನಲ್ಲಿ ಘರ್ಷಣೆಗೆ ಕಾರಣವಾಗುತ್ತಿರುವ ಬಗ್ಗೆಯೂ ಅವರಿಗೆ ತಿಳಿಸಲಾಗಿದೆ. ಅವರು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ," ಎಂದರು.
ನಗರದ ಕೇಂದ್ರ ಕಾರಾಗೃಹದ ಸಮಸ್ಯೆಗಳ ಕುರಿತಂತೆ ಜು. 22ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಹಾಗೂ ಕಾರಾಗೃಹ ಡಿಜಿಯನ್ನು ಭೇಟಿಯಾಗಿ ಚರ್ಚೆ ನಡೆಸುವುದಾಗಿ ವಿಧಾನ ಪರಿಷತ್ನ ಮುಖ್ಯ ಸಚೇತಕ ಐವನ್ ಡಿಸೋಜಾ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಜೈಲಿನ ಒಳಗೆ ನಿಯಮಾವಳಿಗಳನ್ನು ಬಿಟ್ಟು ಕಾರ್ಯಾಚರಣೆ ಮಾಡುತ್ತಿರುವ ಕುರಿತಂತೆ ಭೇಟಿಯ ವೇಳೆ ಜೈಲು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಅವರು ಅಲ್ಲಿನ ಸಂಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಇವೆಲ್ಲವನ್ನೂ ಮುಖ್ಯಮಂತ್ರಿ ಹಾಗೂ ಜೈಲಿನ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.












Click it and Unblock the Notifications