ಹಮಾಸ್ ಉಗ್ರರನ್ನು ದೇಶ ಪ್ರೇಮಿಗಳು ಎಂದ ಮಂಗಳೂರಿನ ವ್ಯಕ್ತಿ: ವಿಡಿಯೋ ವೈರಲ್
ಮಂಗಳೂರು ಅಕ್ಟೋಬರ್ 14: ಪ್ಯಾಲೇಸ್ತೀನ್ನ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿ ಏಳು ದಿನಗಳು ಕಳೆದಿವೆ. ಯುದ್ಧ ಭೂಮಿಯಲ್ಲಿ ಪ್ರತಿ ದಿನವೂ ನೂರಾರು ಸಾವುಗಳು ಸಂಭವಿಸುತ್ತಿದ್ದು, ಈವರೆಗೂ ಮೂರು ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.
ಇಂತಹ ರಣರಂಗಕ್ಕೆ ಕಾರಣವಾದ ಹಮಾಸ್ ಉಗ್ರರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಮಂಗಳೂರಿನ ಝಾಕಿರ್ ಎಂಬಾತ ವಿಡಿಯೋ ಹರಿಬಿಟ್ಟಿದ್ದಾನೆ. ಮಂಗಳೂರಿನ ಬಂದರು ಪ್ರದೇಶದಲ್ಲಿ ತಾಲಿಬಾನ್ ಎಂಬ ಹೆಸರಿನಲ್ಲಿ ಗುರುತಿಸಿಕೊಳ್ಳುವ ಝಾಕಿರ್ ಹಮಾಸ್ ಉಗ್ರರರನ್ನು ದೇಶ ಪ್ರೇಮಿಗಳು ಎಂದಿದ್ದಾನೆ.

ಹಮಾಸ್ ಉಗ್ರರರ ವಿಜಯಕ್ಕೆ ಪ್ರಾರ್ಥನೆ ಸಲ್ಲಿಸುವಂತೆ ಝಾಕಿರ್ ಕರೆ ನೀಡಿದ್ದು ವಿಶ್ವ ಕಬರಸ್ಥಾನ್ ಸಂಘದ ಸದಸ್ಯರು ಪ್ರತ್ಯೇಕ ಪ್ರಾರ್ಥನೆ ಸಲ್ಲಿಸುವಂತೆ ತಿಳಿಸಿದ್ದಾನೆ. ಅಲ್ಲದೇ ಪ್ಯಾಲೇಸ್ತೀನ್ನ ಹಮಾಸ್ ದೇಶಪ್ರೇಮಿ ಯೋಧರಿಗೆ ಜಯ ಸಿಗಲಿ ಎಂದಿದ್ದಾನೆ.
ಝಾಕಿರ್ನಾ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕವಾಗಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಝಾಕಿರ್ ಹೇಳಿಕೆ ಬಗ್ಗೆ ಹಿಂದೂ ಸಂಘಟನೆಗಳಿಂದಲೂ ಭಾರೀ ವಿರೋಧ ವ್ಯಕ್ತವಾಗಿದ್ದು, ಝಾಕಿರ್ ನನ್ನು ಈ ಕೂಡಲೇ ಬಂಧಿಸುವಂತೆ ಸ್ಥಳೀಯ ಪೊಲೀಸರಿಗೆ ಹಿಂದೂ ಸಂಘಟನೆಗಳು ಒತ್ತಾಯಿಸಿವೆ.
ಹಮಾಸ್ ಉಗ್ರರಿಗೆ ಬೆಂಬಲ-ಝಾಕಿರ್ ಬಂಧನ
ಹಮಾಸ್ ಉಗ್ರರಿಗೆ ಬೆಂಬಲ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ ಮಂಗಳೂರಿನ ಝಾಕಿರ್ನನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಡಿಯೋ ವೈರಲ್ ಬೆನ್ನಲ್ಲೇ ಬಂದರು ಪೊಲೀಸ್ ಠಾಣೆಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರದೀಪ್ ಕುಮಾರ್ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಬಂದರು ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇಸ್ರೇಲ್ನಲ್ಲಿ 12 ಸಾವಿರಕ್ಕೂ ಅಧಿಕ ಕರಾವಳಿ ಕನ್ನಡಿಗರು
ಇನ್ನು ಪ್ಯಾಲೇಸ್ತೀನ್ನ ಹಮಾಸ್ ಉಗ್ರರು ದಾಳಿ ನಡೆಸಿರುವ ಇಸ್ರೇಲ್ನಲ್ಲಿ 12 ಸಾವಿರಕ್ಕೂ ಅಧಿಕ ಕರಾವಳಿ ಕನ್ನಡಿಗರಿದ್ದಾರೆ. ಗಡಿನಾಡು ಕಾಸರಗೋಡಿನ ಗೋವಾದ ಗಡಿಭಾಗ ಕಾರವಾರದವರೆಗೆ ಇಸ್ರೇಲ್ನಲ್ಲಿ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇವರೆಲ್ಲರೂ ಯುದ್ಧ ಪೀಡಿತ ಪ್ರದೇಶದ ಸುತ್ತಮುತ್ತಲೇ ಇದ್ದರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ಇವರಲ್ಲಿ ಶೇಕಡಾ 50ರಷ್ಟು ಮಹಿಳೆಯರೂ ಇದ್ದಾರೆ. 8 ಸಾವಿರಕ್ಕೂಅಧಿಕ ಮಂದಿ ದಕ್ಷಿಣ ಕನ್ನಡದವರೂ ಇದ್ದಾರೆ ಎಂದು ತಿಳಿದು ಬಂದಿದೆ. ಇವರೆಲ್ಲರೂ ಭಾರತದ ಹೋಮ್ ನರ್ಸ್ ಮಾದರಿಯ ಕೇರ್ ಗೀವರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.
ಕಳೆದ 16 ವರ್ಷಗಳಿಂದ ಇಸ್ರೇಲ್ನ ಟಲ್ ಅವೀವ್ನಲ್ಲಿ ಮಂಗಳೂರಿನ ಹೊರವಲಯದ ದಾಮಸ್ ಕಟ್ಟೆಯ ಪ್ರವೀಣ್ ಪಿಂಟೋ ಕುಟುಂಬ ನೆಲೆಸಿದೆ. ಅದೇ ರೀತಿ ಮಂಗಳೂರು ಮೂಲದ ಲೆನಾರ್ಡ್ ಫರ್ನಾಂಡೀಸ್ ಕಳೆದ 14 ವರ್ಷಗಳಿಂದ ಇಸ್ರೇಲ್ ವಾಸಿಯಾಗಿದ್ದಾರೆ. ದೂರವಾಣಿ ಮೂಲಕ ಅವರುಗಳ ಸುರಕ್ಷತೆಯನ್ನು ಕುಟುಂಬ ಖಾತರಿ ಪಡೆಸುತ್ತಿದೆ. ಬಂಕರ್ಗಳಲ್ಲಿ ಇಬ್ಬರೂ ಸುರಕ್ಷಿತವಾಗಿರುವ ಮಾಹಿತಿ ಲಭ್ಯವಾಗಿದೆ. ಮನೆಯಿಂದ ಹೊರ ಬಾರದಂತೆ ಭಾರತೀಯ ರಾಯಭಾರ ಕಚೇರಿ ಸೂಚನೆಯನ್ನು ನೀಡಿದೆ ಎಂದು ತಿಳಿದು ಬಂದಿದೆ.












Click it and Unblock the Notifications