ಹಿಂದೂ ಜಾಗರಣ ವೇದಿಕೆಯ ಜಗದೀಶ್ ಕಾರಂತ್ಗೆ ಜಾಮೀನು
ಮಂಗಳೂರು, ಅಕ್ಟೋಬರ್ 01 : ಹಿಂದೂ ಜಾಗರಣ ವೇದಿಕೆಯ ಮಧ್ಯಕ್ಷೇತ್ರಿಯ ಸಂಘಟನಾ ಪ್ರಮುಖ ಜಗದೀಶ್ ಕಾರಂತ್ಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಪುತ್ತೂರು ಎಸ್ಐ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ್ದರಿಂದ ಪೊಲೀಸರು ಅವರನ್ನು ಬಂಧಿಸಿದ್ದರು.
ಸೆಪ್ಟೆಂಬರ್ 15 ರಂದು ಪುತ್ತೂರಿನಲ್ಲಿ ನಡೆದಿದ್ದ ಪ್ರತಿಭಟನಾ ಸಭೆಯಲ್ಲಿ ಜಗದೀಶ್ ಕಾರಂತ್ ಸಂಪ್ಯ ಠಾಣೆಯ ಎಸ್ಐ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಕುರಿತು ಪುತ್ತೂರು ನಗರ ಪೋಲೀಸರು ಕಾರಂತ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದರು.

ಶುಕ್ರವಾರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಜಗದೀಶ್ ಕಾರಂತ್ರನ್ನು ಪೊಲೀಸರು ಬಂಧಿಸಿದ್ದರು. ಶನಿವಾರ ದಕ್ಷಿಣ ಕನ್ನಡ ಜಿಲ್ಲಾ ಅಪರಾಧ ಪತ್ತೆ ದಳದ ಪೋಲೀಸರು ಅವರನ್ನು ಪುತ್ತೂರು ನ್ಯಾಯಾಧೀಶರ ಮನೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.
ಜಗದೀಶ್ ಕಾರಂತರ ಪರ ವಕೀಲರಾದ ಮಹೇಶ್ ಕಜೆ ಅವರು ಬಂಧನದ ಮೊದಲು ಮಾಡಬೇಕಾಗಿದ್ದ ಕಾನೂನು ಪ್ರಕ್ರಿಯೆಗಳನ್ನು ಪೂರೈಸದ ಹಿನ್ನಲೆಯಲ್ಲಿ ಜಾಮೀನು ನೀಡಬೇಕೆಂದು ನ್ಯಾಯಾಧೀಶರನ್ನು ಕೋರಿದರು.
ಸೆಕ್ಷನ್ 41 ರ ಅಡಿ ಆರೋಪಿಗೆ ನೋಟೀಸ್ ಜಾರಿ ಮಾಡುವ ಮೊದಲು ಬಂಧನ ನಡೆಸುವ ಮೂಲಕ ಕಾನೂನ ನಿಯಂತ್ರಣ ಮೀರಿ ವರ್ತಿಸಿರುವುದು, ನ್ಯಾಯಾಲಯಕ್ಕೆ ಸತತ ರಜೆ ಹಾಗೂ ಕಾರಂತರ ಆರೋಗ್ಯ ಸ್ಥಿತಿಯನ್ನು ಗಮನಿಸಿ ನ್ಯಾಯಾಲಯ ಕಾರಂತರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಮುಂದಿನ ವಿಚಾರಣೆಯನ್ನು ಅಕ್ಟೋಬರ್ 3 ಕೈಗೆತ್ತಿಕೊಂಡಿದೆ. ಜಗದೀಶ್ ಕಾರಂತರಿಗೆ ಜಮೀನು ಸಿಕ್ಕ ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಸೇರಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು. ಕಾರಂತ ಪರ ಘೋಷಣೆಗಳನ್ನೂ ಕೂಗಿದರು.












Click it and Unblock the Notifications