ನಾರಾಯಣ ಗುರು ಜಯಂತಿ ಜಿಲ್ಲಾ ಮಟ್ಟಕ್ಕೆ ಇಳಿಸಿ ಬಿಜೆಪಿ ಅವಮಾನಿಸಿದೆ: ರಮಾನಾಥ್ ರೈ
ಮಂಗಳೂರು, ಸೆಪ್ಟೆಂಬರ್, 12: ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಬಿಜೆಪಿ ಸರ್ಕಾರ ಜಿಲ್ಲಾ ಮಟ್ಟಕ್ಕೆ ಸೀಮಿತ ಮಾಡಿದೆ. ನಾರಾಯಣ ಗುರುಗಳಿಗೆ ಬಿಜೆಪಿ ಅಪಮಾನ ಮಾಡಿದೆ ಎಂದು ಮಾಜಿ ಸಚಿವ ಬಿ.ರಮಾನಾಥ್ ರೈ ಆರೋಪ ಮಾಡಿದ್ದಾರೆ.
ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಮಾನಾಥ್ ರೈ, ಲೋಕಕ್ಕೆ ಸಮಾನತೆ ಸಾರಿದ ನಾರಾಯಣ ಗುರುಗಳ ಜನ್ಮ ದಿನಾಚರಣೆಯನ್ನು ಜಿಲ್ಲಾ ಮಟ್ಟಕ್ಕೆ ಸರ್ಕಾರ ಸೀಮಿತ ಮಾಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಒಮ್ಮೆಯೂ ನಾರಾಯಣ ಗುರು ಜಯಂತಿಯಲ್ಲಿ ಭಾಗವಹಿಸಿಲ್ಲ. ರಾಜ್ಯ ಸರ್ಕಾರ ನಾರಾಯಣ ಗುರುಗಳಿಗೆ ನಿರಂತರ ಅಪಮಾನ ಮಾಡುತ್ತಿದೆ ಎಂದು ರಮಾನಾಥ್ ರೈ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ವಿರುದ್ಧ ರಮಾನಾಥ್ ರೈ ಆರೋಪವೇನು?
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನ ಮಂದಿರವನ್ನು ಬಂಟ್ವಾಳದಲ್ಲಿ ಮಾಡಿದ್ದೆವು. ಆಗ ಸಿಎಂ ಆಗಿದ್ದ ಸಿದ್ಧರಾಮಯ್ಯನವರು ನಾರಾಯಣ ಗುರು ಜಯಂತಿಯನ್ನು ಸರ್ಕಾರಿ ಹಬ್ಬವಾಗಿ ಮಾಡಿದ್ದರು. ದಾರ್ಶನಿಕರ ಜನ್ಮ ದಿನವನ್ನು ವಿಧಾನಸೌಧದ ಬಾಕ್ವೆಂಟ್ ಹಾಲ್ನಲ್ಲಿ ಮಾಡಬೇಕಿತ್ತು. ಸಿದ್ಧರಾಮಯ್ಯ ಕೂಡ ಬಾಕ್ವೆಂಟ್ ಹಾಲ್ನಲ್ಲಿ ನಾರಾಯಣ ಗುರುಗಳ ಜನ್ಮ ದಿನವನ್ನು ಮಾಡಿದ್ದರು. ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳ ನಡುವೆ ಕಾರ್ಯಕ್ರಮವನ್ನು ಮಾಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ನಾರಾಯಣ ಗುರುಗಳ ಜಯಂತಿಯನ್ನು ಜಿಲ್ಲಾ ಮಟ್ಟಕ್ಕೆ ಸೀಮೀತ ಮಾಡಿದೆ ಎಂದು ರಮಾನಾಥ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಿಂದ ನಾರಾಯಣ ಗುರುಗಳಿಗೆ ಅಪಮಾನ
ಗಣರಾಜ್ಯೋತ್ಸವ ಪರೇಡ್ನಲ್ಲಿ ನಾರಾಯಣ ಗುರುಗಳ ಟ್ಯಾಬ್ಲೋ ನಿರಾಕರಣೆ ಮಾಡಿ ಬಿಜೆಪಿ ಸರ್ಕಾರ ಅವಮಾನ ಮಾಡಿತ್ತು. ಬಳಿಕ ಹತ್ತನೇ ತರಗತಿ ಪಠ್ಯದಲ್ಲಿ ನಾರಾಯಣ ಗುರುಗಳಿಗೆ ಸಂಬಂಧಿಸಿದ ಪಠ್ಯವನ್ನೂ ಕೈ ಬಿಟ್ಟಿತ್ತು. ಜನಸ್ಪಂದನಾ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಹೆಸರನ್ನೂ ಬಿಜೆಪಿ ಮುಖಂಡರು ಹೇಳಿಲ್ಲ. ಕೆಲವು ಜನ ಅಪಮಾನವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನು ಖಂಡಿಸುತ್ತೇನೆ ಎಂದು ಆಕ್ರೋಶ ಹೊರಹಾಕಿದರು.
ಕರಾವಳಿ ಭಾಗದಲ್ಲಿ ನಾರಾಯಣ ಗುರುಗಳಿಗೆ ಅಪಾರ ಬೆಂಬಲಿಗರಿದ್ದಾರೆ. ಯಡಿಯೂರಪ್ಪ ಕೂಡಾ ನಾರಾಯಣ ಗುರು ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಇದರ ಅರ್ಥ ಏನು ಎಂದು ಅವರು ಜನರ ಮುಂದೆ ಹೇಳಬೇಕಾಗಿದೆ. ಹೀಗೆ ಬಿಜೆಪಿ ಸರ್ಕಾರದ ವಿರುದ್ಧ ರಮಾನಾಥ್ ರೈ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications