ಟಗ್ನಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಹೆಲಿಕಾಪ್ಟರ್ ಬಳಕೆ
ಮಂಗಳೂರು, ಮೇ 17; ಅರಬ್ಬೀ ಸಮುದ್ರದಲ್ಲಿ ಚಂಡಮಾರತಕ್ಕೆ ಸಿಲುಕಿ, ಕಡಲ ಮಧ್ಯದಲ್ಲಿ ಜೀವನ್ಮರಣ ಹೋರಾಟದಲ್ಲಿರುವ 9 ಮಂದಿ ಕಾರ್ಮಿಕರ ರಕ್ಷಣೆಗೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಭಾರೀ ಅಲೆಗಳ ಕಾರಣದಿಂದ ಕೋಸ್ಟ್ ಗಾರ್ಡ್ ಕಾರ್ಯಾಚರಣೆ ವಿಳಂಬವಾಗುತ್ತಿದ್ದು, ನೌಕಾ ಸೇನೆಯ ಹೆಲಿಕಾಪ್ಟರ್ ಬಳಸಲು ರಾಜ್ಯ ಸರ್ಕಾರ ಚಿಂತನೆ ಮಾಡಿದೆ.
Recommended Video
ಕಾರವಾರದ ಕದಂಬ ನೌಕಾ ನೆಲೆಯಿಂದ ಮಂಗಳೂರಿನ ಕಡಲ ತೀರಕ್ಕೆ ಹೆಲಿಕಾಪ್ಟರ್ ಗಳು ಹಾರಲಿದ್ದು, ಕಡಲ ಅಬ್ಬರದ ನಡುವೆಯೇ ಕಾರ್ಮಿಕರ ರಕ್ಷಣೆಗೆ ಸಿದ್ಧತೆ ಪೂರ್ಣಗೊಂಡಿದೆ. ಟಗ್ನಲ್ಲಿ 9 ಕಾರ್ಮಿಕರು ಸಿಲುಕಿದ್ದು, ಜೀವ ಉಳಿಸುವಂತೆ ಅವರು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಸಮುದ್ರದಲ್ಲಿ ಸಿಲುಕಿಕೊಂಡ ಟಗ್; ರಕ್ಷಣೆಗಾಗಿ ವಿಡಿಯೋದಲ್ಲಿ ಮನವಿ
ಅರಬ್ಬೀ ಸಮುದ್ರದಲ್ಲಿ ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಟಗ್ನಲ್ಲಿದ್ದ ಕಾರ್ಮಿಕರು ಜೀವ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಮನವಿಯಂತೆ ಕಾರವಾರದಿಂದ ನೌಕಾ ಸೇನೆಯ ಹೆಲಿಕಾಪ್ಟರ್ ಗಳು ಮಂಗಳೂರಿನ ಕಡಲ ತೀರಕ್ಕೆ ಬರಲಿದ್ದು, ಹವಾಮಾನ ತಿಳಿಯಾದ ತಕ್ಷಣ ಕಾರ್ಮಿಕರ ರಕ್ಷಣೆ ಮಾಡಲಿದೆ.
ತೌಕ್ತೆ ಚಂಡಮಾರುತ: ಅರಬ್ಬೀ ಸಮುದ್ರದಲ್ಲಿ ಹೆಚ್ಚಾದ ಅಲೆಗಳ ನರ್ತನ
ಕಾಪು ಕಡಲ ಕಿನಾರೆಯಿಂದ 15 ನಾಟೆಕಲ್ ಮೈಲ್ ದೂರದಲ್ಲಿ ಕೋರಮಂಡಲ್ ಎಂಬ ಟಗ್ನಲ್ಲಿ 9 ಕಾರ್ಮಿಕರು ಸಿಲುಕಿದ್ದು ಕಲ್ಲಿನ ನಡುವೆ ಟಗ್ ನಿಂತಿದೆ. ಟಗ್ನಲ್ಲಿದ್ದ ಕಾರ್ಮಿಕರ ರಕ್ಷಣೆಗೆ ಕೋಸ್ಟ್ ಗಾರ್ಡ್ ನೌಕೆ IGS ವರಾಹ ರಕ್ಷಣಾ ಕಾರ್ಯಾಚರಣೆಗೆ ಮುಂದಾದರೂ ಕಡಲ ಅಬ್ಬರ ತಡೆಯುಂಟಯ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ನೌಕಾಪಡೆ ಹೆಲಿಕಾಪ್ಟರ್ ಬಳಸಲು ತೀರ್ಮಾನಿಸಲಾಗಿದೆ.
ಕೋರಮಂಡಲ್ ಟಗ್ ಅಟ್ಲಾಂಟಿಕ್ ಶಿಫ್ಟಿಂಗ್ ಕಂಪೆನಿ ಮಾಲೀಕತ್ವಕ್ಕೆ ಸೇರಿದೆ. ಎಂ. ಆರ್. ಪಿ. ಎಲ್ ಈ ಟಗ್ಗೆ ನೀಡಿದ ಗುತ್ತಿಗೆಯ ಅವಧಿ ಮುಗಿದಿದ್ದು ಆದರೂ ಸಮುದ್ರದಲ್ಲೇ ಲಂಗರು ಹಾಕಿದ್ದವು. ಚಂಡಮಾರುತದ ಸೂಚನೆಯ ಬಳಿಕವೂ ಕಾರ್ಮಿಕರು ಸಮುದ್ರದಲ್ಲೇ ಇದ್ದ ಬಗ್ಗೆ ಎಂ. ಆರ್. ಪಿ. ಎಲ್ ಮತ್ತು ಎನ್ . ಎಂ. ಪಿ. ಟಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ವರದಿ ನೀಡಲು ಸೂಚನೆ ನೀಡಿದ್ದಾರೆ.
'ತೌಕ್ತೆ' ಅವಾಂತರಕ್ಕೆ ನಡುಗಿದ ಕರಾವಳಿ: ಆತಂಕದಲ್ಲಿ ಉತ್ತರ ಕನ್ನಡ ತೀರದ ವಾಸಿಗಳು
ಅಲಾಯನ್ಸ್ ಎಂಬ ಇನ್ನೊಂದು ಟಗ್ ಈಗಾಗಲೇ ಕಡಲಿನಲ್ಲಿ ಮುಳಗಿದ್ದು, ಅವಶೇಷಗಳು ಪಡುಬಿದ್ರೆ ಕಡಲ ಕಿನಾರೆಯಲ್ಲಿ ಗೋಚರವಾಗಿದೆ. ಇದರಲ್ಲಿದ್ದ 8 ಮಂದಿ ಕಾರ್ಮಿಕರ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಮೂರು ಮಂದಿ ಈಜಿಕೊಂಡೇ ದಡ ಸೇರಿದ್ದು, ಮೂವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಶೋಧ ಕಾರ್ಯಾಚರಣೆ ನಡೆದಿದೆ.
ಒಟ್ಟಿನ್ನಲ್ಲಿ ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಅರಬ್ಬೀ ಸಮುದ್ರದಲ್ಲಿ ನಡೆದ ಟಗ್ ದುರಂತಕ್ಕೆ ಕಂಪನಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ. ಆದರೆ ಅಮಾಯಕ ಕಾರ್ಮಿಕರು ಮಾತ್ರ ಚಂಡಮಾರತದ ಭೀಕರತೆಗೆ ಸಾಕ್ಷಿಯಾಗಿರೋದು ಮಾತ್ರ ದುರಂತ.