ಭಾರತಕ್ಕೆ ಜಾತ್ಯತೀತತೆ ಅವಶ್ಯಕತೆ ಇಲ್ಲ: ಕಲ್ಲಡ್ಕ ಪ್ರಭಾಕರ ಭಟ್
ಮಂಗಳೂರು, ಸೆಪ್ಟೆಂಬರ್ 11: "ನಮ್ಮ ದೇಶಕ್ಕೆ ಜಾತ್ಯತೀತತೆ ಅವಶ್ಯಕತೆ ಇಲ್ಲ" ಎಂದು ಬುಧವಾರ ಮಂಗಳೂರಿನಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅಭಿಪ್ರಾಯಪಟ್ಟಿದ್ದಾರೆ. ಸ್ವಾಮಿ ವಿವೇಕಾನಂದರ ಶಿಕಾಗೋ ಭಾಷಣದ 125ನೇ ವರ್ಷಾಚಾರಣೆ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
"ಜಾತ್ಯತೀತ ಎಂಬ ಪದ ಈಗಾಗಲೇ ದೃಷ್ಟಿಕೋನ ಬದಲಾಯಿಸಿದೆ. ಸೆಕ್ಯುಲರ್ ಎಂದರೆ ಎಲ್ಲದಕ್ಕೂ ಒಪ್ಪಿಕೊಂಡದ್ದು ಎಂದರ್ಥ. ನಮ್ಮ ದೇಶ ಮೊದಲೇ ಎಲ್ಲದಕ್ಕೂ ಒಪ್ಪಿಕೊಂಡಿದೆ. ಓಡೋಡಿ ಬಂದವರಿಗೆ ಆಶ್ರಯ ಕೊಟ್ಟದ್ದು ಭಾರತ" ಎಂದು ಅವರು ಹೇಳಿದರು.

ಪಾರ್ಸಿಗಳಿಗೆ ಆಶ್ರಯ ಕೊಟ್ಟದ್ದು ಭಾರತ. ಪಾರ್ಸಿಗಳ ಸಂಖ್ಯೆ ಭಾರತದಲ್ಲಿರುವುದು ಕೇವಲ 63 ಸಾವಿರ. ಆದರೂ ಪಾರ್ಸಿಗಳು ಅಲ್ಪಸಂಖ್ಯಾತ ಸ್ಥಾನಮಾನವನ್ನು ಕೇಳಿಲ್ಲ. ನಮ್ಮ ದೇಶ ಯಾವತ್ತೂ ಜಾತ್ಯತೀತ ವಿರೋಧಿ ಅಲ್ಲ. ಕಳೆದ 70 ವರ್ಷಗಳಲ್ಲಿ ಹಿಂದೂ ಸಮಾಜ ಸೋತು ಹೋಗಿದೆ ಎಂದ ಅವರು, ಎಲ್ಲರಿಗೂ ಒಳ್ಳೆಯದಾಗಬೇಕು ಎಂಬ ಚಿಂತನೆ ಭಾರತೀಯರದು ಎಂದರು.
ಸಮಸ್ಯೆಗೆ ಓಡಬೇಡಿ, ಸಮಸ್ಯೆಯನ್ನು ಎದುರಿಸಿ ಎಂದು ಪ್ರೇರಣೆ ಕೊಟ್ಟವರು ವಿವೇಕಾನಂದರು ಎಂದು ಅವರು ಹೇಳಿದರು.












Click it and Unblock the Notifications