ಮಂಗಳೂರಿನಲ್ಲಿ ಯಕ್ಷದ್ರುವ ಕ್ರೀಡಾಕೂಟಕ್ಕೆ ಚಾಲನೆ
ಮಂಗಳೂರು, ಮೇ 29: ಮಂಗಳೂರಿನ ಯಕ್ಷದ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ವತಿಯಿಂದ ನಡೆಯುವ ಯಕ್ಷದ್ರುವ ಪಟ್ಲ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಯಕ್ಷದ್ರುವ ಕ್ರೀಡಾಕೂಟಕ್ಕೆ ಇಂದು ಚಾಲನೆ ನೀಡಲಾಯಿತು.
ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾದ ಈ ಕ್ರೀಡಾಕೂಟದಲ್ಲಿ ಉತ್ತರಕನ್ನಡ, ದಕ್ಷಿಣ ಕನ್ನಡ, ಮತ್ತು ಶಿವಮೊಗ್ಗ ಸೇರಿದಂತೆ ಸುಮಾರು 24ಕ್ಕೂ ಅಧಿಕ ವೃತ್ತಿಪರ ಮೇಳಗಳ ಕಲಾವಿದರು ಭಾಗವಹಿಸಲಿದ್ದಾರೆ. ಎಲ್ಲರೂ ವಿವಿಧ ಬಣ್ಣದ ಉಡುಪಿನಲ್ಲಿ ಕ್ರೀಡೆಯಲ್ಲಿ ಭಾಗವಹಿಸಲು ತಯಾರಾಗಿದ್ದು ಕ್ರೀಡಾಂಗಣವಿಡೀ ರಂಗುರಂಗಿನಿಂದ ತುಂಬಿಕೊಂಡಿತ್ತು.
ಕಾರ್ಯಕ್ರಮದ ಅಂಗವಾಗಿ ಇಂದು ಬೆಳಿಗ್ಗೆ ಯಕ್ಷಗಾನ ಕಲಾವಿದರಿಂದ ಆಕರ್ಷಕ ಪಥಸಂಚಲನ ನಡೆಯಿತು. ಉದ್ಯಮಿ ಡಾ. ವಿರಾರ್ ಶಂಕರ್ ಬಿ.ಶೆಟ್ಟಿ ಪಥಸಂಚಲನದ ಗೌರವ ರಕ್ಷೆ ಸ್ವೀಕರಿಸಿದರು. ಕಟೀಲು ಆರು ಮೇಳಗಳ ಕಲಾವಿದರು, ಯಕ್ಷಕೌಶಿಕೆ, ಯಕ್ಷಭ್ರಾಮರೀ, ಭ್ರಮರಾಂಬಿಕಾ ಕಟೀಲು, ಯಕ್ಷಾಂಬಿಕಾ ಸುಂಕದಕಟ್ಟೆ, ಸಾಲಿಗ್ರಾಮ ಮೇಳದ ತಂಡ, ಬಪ್ಪನಾಡು ಸಸಿಹಿತ್ಲು, ಬೆಂಕಿನಾಥೇಶ್ವರ ಕಳವಾರು, ಯಕ್ಷಸೌಧ ಎಡನೀರು, ಅಮೃತೇಶ್ವರೀ ಕೋಟ, ಕುತ್ಯಾಳ ಶ್ರೀ ಕೂಡ್ಲು, ಕಮಲಶಿಲೆ ಮೇಳ, ಮಂದರ್ತಿ ಮೇಳದ ತಂಡಗಳು ಕ್ರೀಡಾಂಗಣದಲ್ಲಿ ಹಾಜರಾಗಿದ್ದವು.

ಯಕ್ಷಗಾನ ದಿಗ್ಗಜ ದಿವಂಗತ ಸಿದ್ದಕಟ್ಟೆ ಚೆನ್ನಪ್ಪ ಸಂಸ್ಮರಣ ವೇದಿಕೆಯಲ್ಲಿ ಸಚಿವ ಯುಟಿ ಖಾದರ್ ಜ್ಯೋತಿ ಬೆಳಗಿಸುವುದರ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಇಂದು ಸಂಜೆಯವರೆಗೆ ಕಲಾವಿದರಿಗೆ ವಿವಿಧ ಕ್ರೀಡೆಗಳು ನಡೆಯಲಿದ್ದು ನಂತರ ಬಹುಮಾನ ವಿತರಣೆ ಇರಲಿದೆ. ವೇದಿಕೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್, ಶಾಸಕ ಶ್ರೀದೇವಿ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಎ. ಸದಾನಂದ ಶೆಟ್ಟಿ, ಸಾಯಿರಾಧಾ ಗ್ರೂಪ್ಸ್ ನ ಮನೋಹರ್ ಶೆಟ್ಟಿ, ಬಹು ಮೇಳಗಳ ಸಂಚಾಲಕ ಮತ್ತು ಯಕ್ಷದ್ರುವ ಕ್ರೀಡಾ ಕೂಟದ ಗೌರವಾಧ್ಯಕ್ಷ ಕಿಶನ್ ಹೆಗಡೆ, ನವನೀತ್ ಶೆಟ್ಟಿ ಕದ್ರಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಜೂನ್ 2 ರಂದು ಪಟ್ಲ ಸಂಭ್ರಮ ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ.












Click it and Unblock the Notifications