ಕರ್ನಾಟಕದ ಫಲವತ್ತಾದ ಮಣ್ಣಿಗೆ ತಮಿಳುನಾಡಿನಲ್ಲಿ ಭಾರಿ ಬೇಡಿಕೆ
ಚಾಮರಾಜನಗರ, ಅಕ್ಟೋಬರ್, 22: ಕರ್ನಾಟಕದಿಂದ ಕಾವೇರಿ ನೀರು ಮಾತ್ರವಲ್ಲ, ಫಲವತ್ತಾದ ಮಣ್ಣು ಕೂಡ ಹಣದಾಸೆಗೆ ತಮಿಳುನಾಡಿಗೆ ಬಿಕರಿಯಾಗುತ್ತಿರುವುದು ಇದೀಗ ಬೆಳಕಿಗೆ ಬಂದಿದೆ.
ಚಾಮರಾಜನಗರಕ್ಕೆ ಸುಮಾರು 12 ಕಿಮೀ ದೂರದಲ್ಲಿರುವ ಚಿಕ್ಕಹೊಳೆ ಜಲಾಶಯದಿಂದ ಮಣ್ಣನ್ನು ಜೆಸಿಬಿ ಮೂಲಕ ತೆಗೆದು ಟ್ರ್ಯಾಕ್ಟರ್ನಲ್ಲಿ ತುಂಬಿ ತಮಿಳುನಾಡಿನ ತಾಳವಾಡಿ ಕಡೆಗೆ ಸಾಗಿಸಲಾಗುತ್ತಿದೆ.

ಆದರೆ ಇದು ರಾಜಾರೋಷವಾಗಿ ನಡೆಯುತ್ತಿದ್ದರೂ ಯಾರೂ ತಡೆಯಲು ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಚಿಕ್ಕಹೊಳೆ ಜಲಾಶಯ ಮಳೆಯ ಕೊರತೆಯಿಂದಾಗಿ ತುಂಬಿಲ್ಲ. ಇರುವ ನೀರು ತಳ ಸೇರಿದೆ ಆದ್ದರಿಂದ ಹಿನ್ನೀರಿನ ಫಲವತ್ತಾದ ಮಣ್ಣನ್ನು ಜೆಸಿಬಿಯಿಂದ ಅಗೆದು ತೆಗೆದು ಟ್ರ್ಯಾಕ್ಟರ್ಗಳಿಗೆ ತುಂಬಿಸಿ ಸಾಗಿಸಲಾಗುತ್ತಿದೆ. ಈ ಮಣ್ಣಿಗೆ ತಮಿಳುನಾಡಿನಲ್ಲಿ ಹೆಚ್ಚಿನ ಬೇಡಿಕೆ ಇದೆ ಎನ್ನಲಾಗಿದೆ.

ಈಗಾಗಲೇ ಕೃಷಿ ಮಾಡಿ ಸತ್ವ ಕಳೆದುಕೊಂಡಿರುವ ಅಲ್ಲಿನ ಜಮೀನಿಗೆ ಜಲಾಶಯದ ಫಲವತ್ತಾದ ಮಣ್ಣನ್ನು ಸುರಿದು ಮತ್ತೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಕಾರ್ಯದಲ್ಲಿ ತಮಿಳುನಾಡಿನ ರೈತರು ತೊಡಗಿಸಿಕೊಂಡಿರುವುದರಿಂದ ಮಣ್ಣಿಗೆ ಬೇಡಿಕೆ ಹೆಚ್ಚಾಗಿದೆ.
ಇದನ್ನು ಬಳಸಿಕೊಂಡು ಕೆಲವರು ಜಲಾಶಯದ ಮಣ್ಣನ್ನು ಮಾರಾಟ ಮಾಡುವ ದಂಧೆಗಿಳಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬಹಳಷ್ಟು ಮಂದಿ ಜಲಾಶಯದಿಂದ ಹೂಳು ಎತ್ತಲಾಗುತ್ತಿದೆ ಎಂದು ನಂಬಿದ್ದಾರೆ.

ಆದರೆ ವಾಸ್ತವವೇ ಬೇರೆಯಾಗಿದೆ. ಈ ಸಂಬಂಧ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಇಂಜನೀಯರ್ಗಳು ಮೌನಕ್ಕೆ ಶರಣಾಗಿರುವುದು ಅಚ್ಚರಿ ಮೂಡಿಸಿದೆ ಜತೆಗೆ ಸಂಶಯಕ್ಕೂ ಕಾರಣವಾಗಿದೆ.
ಸ್ಥಳೀಯರ ಪ್ರಕಾರ ದಿನಕ್ಕೆ ಸಾವಿರಾರು ಟ್ರ್ಯಾಕ್ಟರ್ ಮಣ್ಣು ತಮಿಳುನಾಡಿಗೆ ಸೇರುತ್ತಿದೆಯಂತೆ. ಇದಕ್ಕಾಗಿ ಖಾಸಗಿ ಜಮೀನಿನ ಮಾಲೀಕರಿಗೆ ಹಣ ನೀಡಿ ದಾರಿ ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು, ಜಮೀನು ಮಾಲೀಕರು ಪ್ರತಿ ಟ್ರ್ಯಾಕ್ಟರ್ಗೆ ನೂರು ರೂಪಾಯಿಯಂತೆ ಹಣ ಪಡೆಯುತ್ತಿದ್ದಾರೆ ಎಂಬ ಆರೋಪವೂ ಇದೆ.
ಇನ್ನು ಮಣ್ಣು ಸಾಗಿಸುವ ಟ್ರ್ಯಾಕ್ಟರ್ಗಳ ಪೈಕಿ ಹೆಚ್ಚಿನವುಗಳಿಗೆ ನಂಬರ್ ಪ್ಲೇಟ್ನ್ನೇ ಅಳವಡಿಸುತ್ತಿಲ್ಲ. ಇದು ಹಲವು ಸಂಶಯಗಳಿಗೆ ಕಾರಣವಾಗುತ್ತಿದ್ದು, ಜಿಲ್ಲಾಡಳಿತ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications