ಅಕ್ರಮ ಜಾನುವಾರು ಸಾಗಾಟ : ವಿಟ್ಲದಲ್ಲಿ ಭಜರಂಗಿ ಮತ್ತಿಬ್ಬರ ಬಂಧನ
ಮಂಗಳೂರು, ಜುಲೈ 27: ಗೋವುಗಳಿಗೆ ಹಿಂಸೆ ಆಗುವ ರೀತಿಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬ ಭಜರಂಗ ದಳ ಕಾರ್ಯಕರ್ತ ಎಂಬುದು ಬೆಳಕಿಗೆ ಬಂದಿದೆ.
ನಿನ್ನೆ ತಡರಾತ್ರಿ ಖಚಿತ ಮಾಹಿತಿ ಮೇರೆಗೆ ವಿಟ್ಲ ಠಾಣೆಯ ಪೊಲೀಸರು ವಿಟ್ಲದ ಪಡ್ನೂರು ಗ್ರಾಮದ ಕಡಂಬು ಜಂಕ್ಷನ್ ಎಂಬಲ್ಲಿ ವಾಹನ ಒಂದನ್ನು ತಡೆದು ಪರಿಶೀಲನೆ ನಡೆಸಿದಾಗ ಈ ಅಕ್ರಮ ಜಾನುವಾರು ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನದಲ್ಲಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಂಟ್ವಾಳದ ಪಡ್ನೂರು ಗ್ರಾಮದ ಶಶಿ ಕುಮಾರ್ (48) ಮತ್ತು ಅಬ್ದುಲ್ ಹಾರಿಸ್ (21) ಎಂದು ಗುರುತಿಸಲಾಗಿದೆ. ಜಾನುವಾರು ಸಾಗಾಟಕ್ಕೆ ಬಳಸಿದ ವಾಹನ ಹಾಗೂ ಅದರಲ್ಲಿದ್ದ 4 ದನ ಹಾಗು ಒಂದು ಕರುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರಲ್ಲಿ ಒಬ್ಬನಾದ ಶಶಿಕುಮಾರ್ ಭಜರಂಗದಳದ ಕಾರ್ಯಕರ್ತ ಎಂದು ಹೇಳಲಾಗಿದೆ. ಮತ್ತೋಬ್ಬ ಆರೋಪಿ ಅಬ್ದುಲ್ ಹಾರಿಸ್ ಈ ಹಿಂದೆ ಅಳಿಕೆ ಎಂಬಲ್ಲಿ ನಡೆದ ದನ ಕಳವು ಪ್ರಕರಣದಲ್ಲಿ ಕೂಡ ಭಾಗಿಯಾಗಿದ್ದ ಎಂದು ಪೊಲೀಸ್ ಮೂಲಗಳು ಹೇಳಿದೆ. ಅಲ್ಲದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕೂಡ ಈತನ ವಿರುದ್ದ ಪ್ರಕರಣಗಳು ದಾಖಲಾಗಿವೆ.

ಜಾನುವಾರುಗಳನ್ನು ಸಾಗಾಣಿಕೆ ಮಾಡಲು ವಾಹನದ ಬಾಡಿಯನ್ನು ಎತ್ತರ ಮಾಡಿ ಯಾರಿಗೂ ಅನುಮಾನ ಬಾರದಂದೆ ಸಾಗಾಣಿಕೆ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications