' ಕೆಐಎಡಿಬಿ ಅಧಿಕಾರಿಗೆ ನಾನು ಬೈದಿಲ್ಲ' - ಶಾಸಕ ಮೊಯ್ದಿನ್ ಬಾವಾ ಸ್ಪಷ್ಟನೆ
ಕೆಐಎಡಿಬಿ ಅಧಿಕಾರಿ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯ್ದಿನ್ ಬಾವಾ ವಿರುದ್ಧ ಕೇಳಿ ಬಂದಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ಶಾಸಕರು ನಾನು ಅಧಿಕಾರಿಗೆ ಬೈದಿಲ್ಲ ಎಂದು ಹೇಳಿದ್ದಾರೆ.
ಮಂಗಳೂರು, ಫೆಬ್ರವರಿ 3 : "ಕೆಐಎಡಿಬಿ ಅಧಿಕಾರಿಗೆ ನಾನು ಬೈದಿಲ್ಲ. ಅಧಿಕಾರಿಯು ಐಎಸ್ಪಿಆರ್ಎಲ್ ಕಂಪೆನಿ ಪರ ನಿಂತಿದ್ದಾರೆ. ಕೆಐಎಡಿಬಿ ರಸ್ತೆ ಅಭಿವೃದ್ಧಿಗಾಗಿ ಜನರು ಅಧಿಕಾರಿ ಬಳಿ ಹೋಗಿದ್ದರು. ಈ ವೇಳೆ ಜನರನ್ನು ಅಧಿಕಾರಿ ಪ್ರಕಾಶ್ ಗೆಟೌಟ್ ಎಂದು ಹೊರ ಕಳುಹಿಸಿದ್ದರು," ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯ್ದಿನ್ ಬಾವಾ ಸ್ಪಷ್ಟೀಕರಣ ನೀಡಿದ್ದಾರೆ.
ಜೋಕಟ್ಟೆ-ಬೈಕಂಪಾಡಿ ರಸ್ತೆ ಕಾಮಗಾರಿ ವಿಚಾರದಲ್ಲಿ ಸಾರ್ವಜನಿಕರ ಜೊತೆ ಕೆಐಎಡಿಬಿ ಕಚೇರಿಗೆ ಹೋಗಿ ಶಾಸಕ ಮೊಯ್ದೀನ್ ಬಾವಾ ಅಧಿಕಾರಿ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೆ ಏಕವಚನದಲ್ಲಿ ಮಾತನಾಡಿ ಪ್ರಕಾಶ್ ಅವರನ್ನು ಎದ್ದು ನಿಂತು ಕ್ಷಮಾಪಣೆ ಕೇಳುವಂತೆ ಒತ್ತಾಯಿಸಿದ್ದಾರೆ ಎಂದು ಈ ಹಿಂದೆ ಆರೋಪಿಸಲಾಗಿತ್ತು.[ಬಜೆಟ್: ಮೋದಿ ದೇಶದ ಜನರನ್ನು ರಕ್ಷಿಸಬೇಕಾಗಿದೆ - ಜನಾರ್ಧನ ಪೂಜಾರಿ]

ಈ ಕುರಿತು ಬಾವಾ ಗುರುವಾರ ಲಾಲ್ ಬಾಗ್ ನಲ್ಲಿರುವ ಸಿಟಿ ಕಾರ್ಪೋರೇಷನ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದರು. 'ಜನರಿಗೆ ಸಮಸ್ಯೆಯಾಗುತ್ತಿದ್ದರೂ ಪೈಪ್ ಲೈನ್ ಮುಚ್ಚುವ ಕೆಲಸ ಮಾಡಿರಲಿಲ್ಲ. ನಾನು ಕೂಡಾ ಅಧಿಕಾರಿಯನ್ನು ರಸ್ತೆ ಅಭಿವೃದ್ಧಿ ವಿಚಾರವಾಗಿ ಹತ್ತು ಸಲ ಮಾತನಾಡಲು ಕರೆದಿದ್ದೆ. ಜನರು ಅವರ ಬಳಿ ಹೋದಾಗ ಸಮಸ್ಯೆಗೆ ಸ್ಪಂದಿಸುತ್ತಿರಲಿಲ್ಲ' ಎಂದು ನಡೆದ ಘಟನೆಯನ್ನು ಬಾವಾ ವಿವರಿಸಿದರು.[ಮೋಟರ್ ಕಾಯ್ದೆ ವಿರೋಧಿಸಿ ಫೆ.3ರಂದು ದ.ಕ.ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ]
ಇದಕ್ಕೂ ಮುನ್ನ ಸಾರ್ವಜನಿಕರ ಜೊತೆ ಅಧಿಕಾರಿ ಪ್ರಕಾಶ್ ಉಡಾಫೆಯಿಂದ ವರ್ತಿಸಿದ್ದರು. ಇದನ್ನು ಪ್ರಶ್ನಿಸಲು ಶಾಸಕರು, ಸ್ಥಳೀಯರ ಜೊತೆ ಪ್ರಕಾಶ್ ಅವರ ಕಚೇರಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗುತ್ತಿತ್ತು. ಆದರೆ ಇದೀಗ ಬಾವಾ ನಾನು ಅಧಿಕಾರಿಗೆ ಬೈದಿಲ್ಲ. ಅವರ ಜತೆ ಅನುಚಿವಾಗಿ ವರ್ತಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications