ಮಂಗಳೂರು: ಪತ್ನಿಗೆ ಉಗ್ರ ಸಂಪರ್ಕವಿರುವ ಬಗ್ಗೆ ಸಂಶಯ; ಎಸ್ಪಿ ಮೊರೆ ಹೋದ ಪತಿರಾಯ!
ಮಂಗಳೂರು, ಸೆಪ್ಟೆಂಬರ್ 2: ಪತ್ನಿ ಉಗ್ರ ಸಂಘಟನೆಯೊಂದಿಗೆ ಸಂಪರ್ಕವಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಪತಿಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯಾ ಗ್ರಾಮದ ಕೃಷಿಕ ಚಿದಾನಂದ ಎಂಬುವವರ ಪತ್ನಿ ರಾಜಿ ಕಳೆದ 11 ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದು, ಇತ್ತೀಚೆಗೆ ಮನೆಯವರು ಬೇಡ ಅಂತಾ ಹೇಳಿದರೂ ಕೇಳದೆ ದುಬೈಗೆ ಹೋಗುವುದಾಗಿ ಹೇಳಿದ್ದಾಳೆ. ದುಬೈನಲ್ಲಿ ಪಾಕಿಸ್ತಾನಕ್ಕೆ ಸೇರಿದ ಶಾಲೆಯೊಂದರಲ್ಲಿ ಪತ್ನಿ ರಾಜಿ ಕೆಲಸ ಮಾಡುತ್ತಿದ್ದು, ಈಗ ತನಗೆ ಉಗ್ರ ಸಂಘಟನೆಯ ಜೊತೆಗೆ ಸಂಪರ್ಕ ಇದೆ. ದುಬೈಗೆ ಹೋಗುವುದಕ್ಕೆ ಬಿಡದಿದ್ದರೆ ಸಂಘಟನೆಯವರಿಗೆ ಹೇಳಿ ಗತಿ ಕಾಣಿಸುವುದಾಗಿ ಬೆದರಿಸಿದ್ದಾಳೆ ಎಂದು ಪತಿ ಚಿದಾನಂದ್ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೊನೆವಾನೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನೇವಾನೆಗೆ ದೂರು ನೀಡಿರುವ ಪತಿ ಚಿದಾನಂದ್, ಪತ್ನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಳೆದ 11 ವರ್ಷಗಳ ಹಿಂದೆ ತನ್ನ ಪತ್ನಿ ರಾಜಿ ದುಬೈಗೆ ಉದ್ಯೋಗದ ನಿಮಿತ್ತ ಹೋಗಿದ್ದಾಳೆ. ಪತ್ನಿ ದುಬೈಗೆ ಹೋದ ಸಂದರ್ಭದಲ್ಲಿ ಮಗಳಿಗೆ 2 ವರ್ಷ ಮತ್ತು ಮಗನಿಗೆ 7 ತಿಂಗಳು ಪ್ರಾಯವಾಗಿತ್ತು. ವರ್ಷಕ್ಕೊಮ್ಮೆ ಮನೆಗೆ ಬರುತ್ತಿದ್ದ ಪತ್ನಿ ಎಲ್ಲರ ಜೊತೆಯೂ ಅನ್ಯೋನ್ಯವಾಗಿದ್ದಳು.

ದುಬೈಗೆ ಹೋಗುವುದು ಬೇಡ
ಅನಂತರ 2018ರಲ್ಲಿ ಮತ್ತೆ ಭಾರತಕ್ಕೆ ಬಂದಾಗ, ಮಕ್ಕಳು ದೊಡ್ಡವರಾಗಿದ್ದಾರೆ ಇನ್ನು ದುಬೈಗೆ ಹೋಗುವುದು ಬೇಡ ಅಂತಾ ಪತ್ನಿ ರಾಜಿಗೆ ಹೇಳಿದ್ದೆ. ಆ ಬಳಿಕ ಅವಳ ವರ್ತನೆಯೇ ಬದಲಾಯಿತು. ನನ್ನ ಮಾತನ್ನು ಮೀರಿ ದುಬೈಗೆ ಹೋದಳು. ಬಳಿಕ ನನ್ನ ಜೊತೆ ಸರಿಯಾಗಿ ಮಾತನಾಡುತ್ತಿರಲಿಲ್ಲ ಎಂದು ಪತಿ ಚಿದಾನಂದ್ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿದ ದೂರಿನ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ನಡುವೆ ಆಗಸ್ಟ್ 10 ರಂದು ಮತ್ತೆ ಊರಿಗೆ ಬಂದ ಪತ್ನಿ ರಾಜಿ, ನಾನು ಮಗಳನ್ನು ಕರೆದುಕೊಂಡು ಹೋಗುತ್ತೇನೆ ಅಂತಾ ಹೇಳಿದ್ದಾಳೆ. ಇದಕ್ಕೆ ನನ್ನ ಕುಟುಂಬದವರು ವಿರೋಧ ವ್ಯಕ್ತಪಡಿಸಿದಾಗ ವಿಚ್ಛೇದನ ಕೇಳಿದ್ದಾಳೆ. ವಿಚ್ಛೇದನ ಕೊಟ್ಟು ಮಕ್ಕಳನ್ನು ನೀವೇ ನೋಡಿಕೊಳ್ಳಬೇಕು ಅಂತಾ ಒತ್ತಾಯ ಮಾಡಿದ್ದಾಳೆ. ಓಣಂ ಸಂದರ್ಭದಲ್ಲಿ ನಾವು ಹಿಂದೂ ಸಂಪ್ರದಾಯದಂತೆ ಕುಂಕುಮ ಹೂ ಮುಡಿದಾಗ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಮನೆಯಲ್ಲಿ ಸದಾ ಮೊಬೈಲ್ನಲ್ಲಿ ಬ್ಯುಸಿ ಇದ್ದ ಆಕೆ, ಕಾಲ್ ಬಂದಾಗ ನಮ್ಮಿಂದ ದೂರ ಹೋಗಿ ಮಾತನಾಡುತ್ತಾಳೆ.

ನನ್ನ ಬಳಿ ಸುಳ್ಳು ಹೇಳಿರುವುದು ಗೊತ್ತಾಗಿದೆ
ಇದಾದ ಬಳಿಕ ಸಂಶಯಗೊಂಡು ಆಕೆಯ ದುಬೈ ದಾಖಲೆಗಳನ್ನು ನೋಡಿದಾಗ ನನ್ನ ಬಳಿ ಸುಳ್ಳು ಹೇಳಿರುವುದು ಗೊತ್ತಾಗಿದೆ. ಮೊದಲು ಬಿ.ಆರ್. ಶೆಟ್ಟಿಯ ಕಂಪೆನಿಯಲ್ಲಿ ದುಡಿಯುತ್ತಿರುವುದಾಗಿ ಹೇಳಿದ್ದಳು. ಆದರೆ ದಾಖಲೆಗಳಲ್ಲಿ ಆಕೆ ಬೇರೆ ಬೇರೆ ಕಡೆ ಕೆಲಸ ಮಾಡಿರುವುದಾಗಿ ಗೊತ್ತಾಗಿದೆ. ಸದ್ಯ ದುಬೈನಲ್ಲಿ ಪಾಕಿಸ್ತಾನಕ್ಕೆ ಸೇರಿದ ಶಾಲೆಯಲ್ಲಿ ಆಯಾ ಆಗಿ ಕೆಲಸಕ್ಕಿದ್ದ ಬಗ್ಗೆಯೂ ಗೊತ್ತಾಗಿದೆ ಅಂತಾ ಪತಿ ಚಿದಾನಂದ್ ದೂರಿನಲ್ಲಿ ತಿಳಿಸಿದ್ದಾರೆ.

ಕೇರಳದ ವ್ಯಕ್ತಿಗೆ ಸಾಲ ಕೊಟ್ಟಿರುವುದಾಗಿ ಹೇಳಿಕೆ
ಅಲ್ಲದೇ ಇಷ್ಟು ದಿನ ದುಡಿದ ಹಣ ಎಲ್ಲಿ ಅಂತಾ ಕೇಳಿದಾಗ, ನಾನು ಕೇರಳದ ವ್ಯಕ್ತಿಗೆ ಸಾಲ ಕೊಟ್ಟಿರುವುದಾಗಿ ಹೇಳಿದ್ದಾಳೆ. ಕೇರಳದ ವ್ಯಕ್ತಿಯ ನಂಬರ್ಗೆ ಕಾಲ್ ಮಾಡಿದಾಗ, ಪತ್ನಿಯನ್ನು ಕರೆದುಕೊಂಡು ಕೇರಳಕ್ಕೆ ಬಾ, ಆಕೆಯನ್ನು ಬಿಟ್ಟು ನೀನು ಬೇರೆ ಮದುವೆಯಾಗು ಅಂತಾ ಗದರಿಸಿದ್ದಾನೆ. ಇದಾದ ಬಳಿಕ ಆಗಸ್ಟ್ 26ರ ರಾತ್ರಿ ಎಲ್ಲರೂ ಮಲಗಿದ್ದಾಗ, ಮನೆ ಬಿಟ್ಟು ಪರಾರಿಯಾಗಿದ್ದಾಳೆ ಅಂತಾ ಪತಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ಲವ್ ಜಿಹಾದ್ ಆಗಿರುವ ಬಗ್ಗೆ ಸಂಶಯ
ಪತ್ನಿ ನಾಪತ್ತೆಯಾಗಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪತಿ ಚಿದಾನಂದ್ ದೂರು ನೀಡಿದ್ದು, ಪತ್ನಿಗೆ ಉಗ್ರ ಸಂಘಟನೆಗಳ ಜೊತೆ ಕೈವಾಡ ಅಥವಾ ಲವ್ ಜಿಹಾದ್ ಆಗಿರುವ ಬಗ್ಗೆ ಸಂಶಯ ಪತಿಗಿದೆ. ಜೊತೆಗೆ ಮಗಳನ್ನು ಮಾತ್ರ ಕರೆದುಕೊಂಡು ಹೋಗುವುದಾಗಿ ಪತ್ನಿ ಹೇಳಿದ್ದು, ದುಬೈಗೆ ಕರೆದುಕೊಂಡು ಉಗ್ರ ಸಂಘಟನೆಗೆ ಮಾರುವ ಬಗ್ಗೆಯೂ ಸಂಶಯ ಇದೆ ಎಂದು ಪತಿ ಚಿದಾನಂದ್ ದಕ್ಷಿಣ ಕನ್ನಡ ಎಸ್ಪಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.












Click it and Unblock the Notifications