ಅಫ್ಘಾನ್ ತೊರೆಯಲು ಅಮೆರಿಕದ ಸಿದ್ಧತೆ; ಕನ್ನಡಿಗ ತೆರೆದಿಟ್ಟ ವಿಚಾರಗಳು
ಮಂಗಳೂರು, ಆಗಸ್ಟ್ 22; ಅಮೆರಿಕಾ ಅಫ್ಘಾನಿಸ್ತಾನವನ್ನು ತೊರೆದಿದ್ದು ತಾಲಿಬಾನಿಗಳ ಆಡಳಿತಕ್ಕೆ ಕಾರಣ ಎಂಬ ಅಭಿಪ್ರಾಯ ಜಗತ್ತಿನಾದ್ಯಂತ ವ್ಯಕ್ತವಾಗುತ್ತಿದೆ. ಆದರೆ ಅಫ್ಘಾನಿಸ್ತಾನದಲ್ಲಿ ಪ್ರಾಬಲ್ಯ ಹೊಂದಿದ್ದ ಅಮೆರಿಕಾ ದಿಢೀರ್ ಆಗಿ ದೇಶ ತೊರೆಯಲು ಕಾರಣವೇನು? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
11 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಅಮೆರಿಕ ವಾಯುನೆಲೆಯಲ್ಲಿ ಕೆಲಸ ಮಾಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿವಾಸಿ ಉಮೇಶ್ ಬಾರ್ಯ ಅಮೆರಿಕ ಅಫ್ಘಾನ್ ತೊರೆಯಲು ಕಾರಣವೇನು? ಎಂಬುದನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಉಮೇಶ್ ಬಾರ್ಯ ಬಾಂಗ್ರಾ ಪ್ರದೇಶದಲ್ಲಿ ಅಮೆರಿಕ ವಾಯುನೆಲೆಯಲ್ಲಿ ಕೆಲಸ ಮಾಡುತ್ತಿದ್ದರು. 2011ರಲ್ಲಿ ಅಫ್ಘಾನಿಸ್ತಾನದ ಬಾಂಗ್ರಾ ಅಂತರಾಷ್ಟ್ರೀಯ ವಾಯು ನೆಲೆಯಲ್ಲಿ ಹಝ್ಮತ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಅಪಾಯಕಾರಿ ತ್ಯಾಜ್ಯಗಳ ನಿರ್ವಹಣೆ ಮತ್ತು ವಿಲೇವಾರಿ ಮಾಡುವಂತ ಹಝ್ಮತ್ ವಿಭಾಗದಲ್ಲಿ ಉಮೇಶ್ ಸೀನಿಯರ್ ಆಫೀಸರ್ ಆಗಿದ್ದರು. ಜೂನ್ ತಿಂಗಳಿನಲ್ಲಿ ಅಮೆರಿಕ ಸೇನೆಯಿಂದ ವಿಮುಕ್ತಿಯಾಗಿ ಊರಿಗೆ ಮರಳಿದ್ದರು.
ಉಮೇಶ್ ಬಾರ್ಯ ಹೇಳುವ ಪ್ರಕಾರ, "ಅಮೆರಿಕ ಸೇನೆ ಎರಡು ವರ್ಷಗಳಿಂದಲೇ ಅಫ್ಘಾನಿಸ್ತಾನವನ್ನು ತೊರೆಯಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿತ್ತು. ಕಳೆದ ಮೂರು ತಿಂಗಳ ಹಿಂದೆಯೇ ಸೇನೆ ಅಫ್ಘಾನಿಸ್ತಾನವನ್ನು ತೊರೆಯುವ ಮುನ್ಸೂಚನೆ ನೀಡಿತ್ತು. ಅಲ್ಲಿಂದ ಹೊರ ಹೋಗಬೇಕಾದರೆ ಸೇನೆಯ ಕುರಿತ ಯಾವುದೇ ಕಾರ್ಯ ತಂತ್ರ, ಯದ್ಧ ನೀತಿಗಳ ಕುರುಹೂ ತಿಳಿಯದಂತೆ ಮಾರ್ಪಾಡು ಮಾಡಿ ತೆರಳುವುದು ತಂತ್ರದಲ್ಲಿ ಸೇರಿತ್ತು" ಎಂದು ಹೇಳಿದರು.

ಯೋಧರಿಗೆ ಅಮೆರಿಕದ ತರಬೇತಿ
"ಎರಡು ವರ್ಷದಲ್ಲಿ ಸುಮಾರು ಮೂರು ಲಕ್ಷದ ನಲ್ವತ್ತು ಸಾವಿರ ಅಫ್ಘಾನ್ ಯೋಧರನ್ನು ಅಮೆರಿಕ ತರಬೇತಿ ನೀಡಿ ತಯಾರು ಮಾಡಿದೆ. ಅಫ್ಘಾನ್ ಯೋಧರಿಗೆ ಬೇಕಾದ ಎಲ್ಲಾ ಶಸ್ತ್ರಾಸ್ತ್ರಗಳನ್ನೂ ನೀಡಲಾಗಿದೆ. ಅಲ್ಲದೇ ಮುಂದಿನ ಕೆಲ ವರ್ಷಗಳ ಕಾಲ ಅವರಿಗೆ ಆರ್ಥಿಕವಾಗಿ ಯಾವುದೇ ತೊಂದರೆಯಾಗದಂತೆ ಮುಂಗಡ ಹಣವನ್ನೂ ಖಾತೆಗಳಲ್ಲಿ ಜಮಾ ಮಾಡಿ ಅಮೆರಿಕ ಸೇನೆ ಹೊರಹೋಗಿದೆ" ಎಂದು ಉಮೇಶ್ ಬಾರ್ಯ ಹೇಳಿದ್ದಾರೆ.

ಪರಿಕರಗಳ ವಿಲೇವಾರಿಗೆ ಚಾಲನೆ
"ಎಲ್ಲಾ ಸಿದ್ಧತೆಗಳು ಆದ ಬಳಿಕ ಅಮೆರಿಕ ಸೇನೆ 3 ತಿಂಗಳ ಹಿಂದೆಯಿಂದ ತನ್ನ ಎಲ್ಲಾ ಪರಿಕರಗಳನ್ನು ವಿಲೇವಾರಿ ಮಾಡಲು ಮುಂದಾಗಿತ್ತು. ಅಲ್ಲದೇ ಸೇನೆಯಲ್ಲಿ ಸಹಾಯಕರಾಗಿ ದುಡಿಯುತ್ತಿದ್ದ ಸಾವಿರಾರು ವಿದೇಶಿ ಸಿಬ್ಬಂದಿಗಳನ್ನು ಅವರ ದೇಶಕ್ಕೆ ಮರಳಿ ಅಮೆರಿಕ ಸೇನೆ ಕಳುಹಿಸಿದೆ. ಅಫ್ಘಾನಿಸ್ತಾನ ಜನರು ಸೇನೆಯ ವಿರುದ್ಧವೇ ತಿರುಗಿ ಬಿದ್ದಿರೋದು ಸೇನೆ ಮರಳಿ ಹೋಗೋಕೆ ಕಾರಣವಾಗಿದೆ. ತಾಲಿಬಾನಿಗಳು ಅಫ್ಘಾನಿಸ್ತಾನದ ಎಳೆಯ ಮಕ್ಕಳ ಮನಸ್ಸನ್ನು ಪರಿವರ್ತನೆ ಮಾಡಿದೆ. ಧರ್ಮಾಂಧತೆಯನ್ನು ಬಿತ್ತಿದ ಪರಿಣಾಮ ಎಳೆಯ ಮಕ್ಕಳು ಸೇನೆಯ ವಾಹನಗಳಿಗೆ ಕಲ್ಲನ್ನು ಎಸೆಯುತ್ತಿದ್ದರು. ಅಲ್ಲದೇ ಮಕ್ಕಳ ಕೈಗೆ ಬಾಂಬ್ ಕೊಟ್ಟು ಸೇನಾ ವಾಹನದ ಮೇಲೆ ಎಸೆಯುವಂತೆ ಪ್ರೇರೆಪಣೆ ನೀಡಲಾಗಿತ್ತು. ಮಕ್ಕಳನ್ನು ಅತ್ಮಾಹುತಿ ಬಾಂಬರ್ ಮಾಡೋಕೆ ಪ್ರೇರಣೆಯನ್ನೂ ತಾಲಿಬಾನ್ ನೀಡಿದೆ. ಈ ವಿಚಾರವನ್ನು ನಾನು ಕಣ್ಣಾರೆ ಕಂಡಿದ್ದೇನೆ" ಅಂತಾ ಉಮೇಶ್ ಬಾರ್ಯ ವಿವರಿಸಿದ್ದಾರೆ.

ತಾಲಿಬಾನಿಗಳು ಭಾವನೆರಹಿತ ಜೀವಿಗಳು
ತಾಲಿಬಾನಿಗಳು ಭಾವನೆರಹಿತ ಜೀವಿಗಳು. ಅವರಿಗೆ ಧರ್ಮವೇ ಪ್ರಧಾನ. ಧರ್ಮಾಂಧತೆಯಿಂದ ತುಂಬಿ ಹೋದ ತಾಲಿಬಾನಿಗಳು ತಮ್ಮ ಧರ್ಮದ ವಿರುದ್ಧ, ತಮ್ಮ ಆಚಾರ ವಿಚಾರಗಳ ವಿರುದ್ಧವಾಗಿ ಯಾರಾದರೂ ನಿಂತರೆ ಅವರನ್ನು ಟಾರ್ಗೆಟ್ ಮಾಡುತ್ತಿದ್ದರು. ಹೆಣ್ಣು ಮಕ್ಕಳು ಶಾಲಾ ಶಿಕ್ಷಣ ಕಲಿಯಬಾರದು ಎಂಬ ಉದ್ದೇಶದಿಂದ 2014ರಲ್ಲಿ ಬಾಂಗ್ರಾದ ಸ್ಥಳೀಯ ಶಾಲೆಯ ನೀರಿನ ಟ್ಯಾಂಕ್ಗೆ ವಿಷ ಹಾಕಿ ಅನೇಕ ಮಕ್ಕಳನ್ನು ಕೊಂದಿದ್ದರು. ಅಲ್ಲದೇ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಜಲಲಾಬಾದ್ನಲ್ಲಿ ಪತ್ರಿಕಾ ಕಛೇರಿಗೆ ನುಗ್ಗಿ ಮೂವರು ಪತ್ರಕರ್ತರನ್ನು ಹತ್ಯೆ ಮಾಡಿರುವ ಭೀಕರ ಘಟನೆಯನ್ನು ಉಮೇಶ್ ಬಾರ್ಯ ಮೆಲುಕು ಹಾಕಿದ್ದಾರೆ.

ಉಗ್ರರ ನಿರಂತರ ದಾಳಿ
ಉಮೇಶ್ ಬಾರ್ಯ ಅಫ್ಘಾನಿಸ್ತಾನದ ಬಾಂಗ್ರಾ, ವಜಿರಿಸ್ಥಾನ್, ಕಂದಹಾರ್, ಗಝ್ನಿ, ಕಾಬೂಲ್ ಸೇರಿದಂತೆ ಉಗ್ರರು ಅಧಿಕ ವಾಗಿರುವ ಸ್ಥಳಗಳಲ್ಲಿ ಕೆಲಸ ಮಾಡಿದ್ದಾರೆ. ಅಫ್ಘಾನಿಸ್ತಾನದ ಪ್ರಮುಖ ವಾಯುನೆಲೆ ಬಾಂಗ್ರಾದಲ್ಲಿ ತಾಲಿಬಾನ್ ಪ್ರೇರಿತ ಅಫ್ಘಾನ್ನರು ಮತ್ತು ಉಗ್ರರ ನಿರಂತರ ದಾಳಿಗಳಾಗುತ್ತಿದ್ದು, ಸುಮಾರು ವರ್ಷಗಳ ಕಾಲ ಬಾಂಗ್ರಾದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅಮೆರಿಕ ಸೇನೆ ಅಫ್ಘಾನಿಸ್ತಾನ ಕೆಲವೆಡೆ ಶಾಲೆಗಳನ್ನು ತೆರೆದಿದೆ. ಈ ಶಾಲಾ ಶಿಕ್ಷಣ ಪಡೆದವರೆಲ್ಲಾ ತಾಲಿಬಾನಿಗಳನ್ನು ವಿರೋಧಿಸುತ್ತಿದ್ದಾರೆ. ಉಳಿದವರೆಲ್ಲಾ ತಾಲಿಬಾನಿಗಳ ಜೊತೆ ಸೇರಿ, ರಾಕ್ಷಸರಾಗಿದ್ದಾರೆ ಅಂತಾ ಉಮೇಶ್ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications