ವೀರ್ ಸಾವರ್ಕರ್ ರಥಯಾತ್ರೆಯನ್ನು ರಾಜಕೀಯ ದೊಂಬರಾಟ ಎಂದ ಹಿಂದೂ ಮಹಾಸಭಾ
ಮಂಗಳವಾರ, ಆಗಸ್ಟ್ 17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀರ್ ಸಾವರ್ಕರ್ ಫೋಟೋಗೆ ಎಸ್ಡಿಪಿಐ ವಿರೋಧ ವ್ಯಕ್ತಪಡಿಸಿದ ವಿಚಾರವಾಗಿ ಜಿಲ್ಲೆಯಲ್ಲಿ ಕೋಮು ಸೂಕ್ಷ್ಮ ಪರಿಸ್ಥಿತಿಯನ್ನು ಪಡೆದಿದೆ. ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಎಸ್ಡಿಪಿಐ ವಿರುದ್ಧ ಮುಗಿಬಿದ್ದಿದ್ದು, ವೀರ್ ಸಾವರ್ಕರ್ ಫೋಟೋ ತೆಗೆಯಲೆತ್ನಿಸಿದ ಎಸ್ಡಿಪಿಐ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದೆ.
ಪುತ್ತೂರು ತಾಲೂಕಿನ ಕಬಕ ಗ್ರಾಮದಲ್ಲಾದ ಘಟನೆಯನ್ನು ಖಂಡಿಸಿ ಬಿಜೆಪಿ, ಸಂಘ ಪರಿವಾರ ಮಾಡುತ್ತಿರುವ ಪ್ರತಿಭಟನೆ ಬಗ್ಗೆ ಹಿಂದೂ ಮಹಾಸಭಾ ಆಕ್ಷೇಪ ವ್ಯಕ್ತಪಡಿಸಿದೆ. ಇದೊಂದು ರಾಜಕೀಯ ದೊಂಬರಾಟ ಎಂದು ಹಿಂದೂ ಮಹಾಸಭಾ ಆರೋಪ ಮಾಡಿದೆ.
ವೀರ್ ಸಾವರ್ಕರ್, ನಾಥುರಾಮ್ ಗೋಡ್ಸೆಯನ್ನು ಒಪ್ಪದ ಬಿಜೆಪಿಯಿಂದ ಇದೀಗ ಪ್ರತಿಭಟನೆಯ ನಾಟಕ ಮಾಡುತ್ತಿದೆ. ಟಿಪ್ಪು ಜಯಂತಿಯನ್ನು ಆಚರಿಸಿದ ಬಿಜೆಪಿ ನಾಯಕರು ಪುತ್ತೂರಿನ್ನಲ್ಲಾದ ಘಟನೆಯನ್ನು ಖಂಡಿಸುತ್ತಿದ್ದಾರೆ. ಇಂಥ ನಾಚಿಕೆಗೇಡಿನ ವಿಚಾರ ಮತ್ತೊಂದಿಲ್ಲ ಅಂತಾ ಹಿಂದೂ ಮಹಾಸಭಾ ಹೇಳಿಕೆ ನೀಡಿದೆ.

ಬಿಜೆಪಿ ಚುನಾವಣೆಯನ್ನು ಮುಂದಿಟ್ಟುಕೊಂಡು ಹಿಂದೂ ಸಮಾಜದ ಹಾದಿ ತಪ್ಪಿಸುವ ಹುನ್ನಾರ ಮಾಡಿದೆ. ಅಧಿಕಾರಕ್ಕಾಗಿ ಎಸ್ಡಿಪಿಐ ಪಕ್ಷದ ಜೊತೆ ಹೊಂದಾಣಿಕೆ ಮಾಡಿದವರಿಂದ ಇದೀಗ ಪ್ರತಿಭಟನೆಯ ನಾಟಕ ನಡೆಯುತ್ತಿದೆ. ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲದ ಸಂದರ್ಭ ಎಸ್ಡಿಪಿಐ ನಿಷೇಧಿಸಿ ಅಂತಾ ಬಿಜೆಪಿಯವರು ಹೇಳಿದ್ದರು. ಇದೀಗ ಅಧಿಕಾರಕ್ಕೆ ಬಂದ ಬಳಿಕ ಈ ವಿಚಾರವನ್ನೇ ಮರೆತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದೆ. ತಾಕತ್ತಿದ್ದರೆ ಎರಡೂ ಸಂಘಟನೆಗಳನ್ನು ನಿಷೇಧಿಸಿ ಅಂತಾ ಹಿಂದೂ ಮಹಾಸಭಾ ಸವಾಲೆಸಿದಿದೆ.
ಇದೇ ವಿಚಾರವನ್ನು ಇಟ್ಟುಕೊಂಡು ರಾಜ್ಯದಲ್ಲಿ ನಡೆಯುವ ಮುಂದಿನ ಚುನಾವಣೆಯಲ್ಲಿ ಹಿಂದೂ ಮಹಾಸಭಾ ಸ್ಪರ್ಧಿಸಲಿದೆ. ಬಿಜೆಪಿ ಮುಂದಿನ ದಿನಗಳಲ್ಲಿ ಠೇವಣಿ ಕಳೆದುಕೊಳ್ಳುವ ದಿನ ಎದುರಾಗಲಿದೆ. ಹಿಂದೂರಾಷ್ಟ್ರ ನಿರ್ಮಾಣ ಹಿಂದೂ ಮಹಾಸಭಾದ ಉದ್ದೇಶವಾಗಿದೆ ಅಂತಾ ಹಿಂದೂ ಮಹಾಸಭಾ ಆಕ್ರೋಶ ವ್ಯಕ್ತಪಡಿಸಿದೆ.
ಇನ್ನು ಕಬಕದಲ್ಲಾದ ಘಟನೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಜಂಟಿಯಾಗಿ ಪ್ರತಿಭಟನೆ ಮಾಡಿದೆ. ವೀರ್ ಸಾವರ್ಕರ್ ಚಿತ್ರವಿರುವ ವಾಹನದೊಂದಿಗೆ ಸಾವರ್ಕರ್ ರಥಯಾತ್ರೆ ಮಾಡಿದೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಿಂದ ಕಬಕ ಜಂಕ್ಷನ್ವರೆಗೆ ಹಿಂದೂ ಸಂಘಟನೆಗಳು ಸಾವರ್ಕರ್ ರಥಯಾತ್ರೆ ಮಾಡಿದೆ. ಸುಮಾರು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಈ ಸಂದರ್ಭದಲ್ಲಿ ಸೇರಿದ್ದಾರೆ.

ಸುಮಾರು ಏಳು ಕಿ.ಮೀ ವರೆಗೆ ರಥಯಾತ್ರೆ ನಡೆದಿದ್ದು, ಈ ವೇಳೆ ಎಸ್ಡಿಪಿಐ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಸ್ವಾತಂತ್ರ್ಯ ರಥ ತಡೆದ ಆರೋಪಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಪ್ರತಿಭಟನಾಕಾರರು ಒತ್ತಾಯ ಮಾಡಿದ್ದಾರೆ.
ಕೋವಿಡ್ ಮಾರ್ಗಸೂಚಿ ಇದ್ದರೂ, ನಿಯಮ ಮುರಿದು ಕಾರ್ಯಕರ್ತರು ಸೇರಿದ್ದು, ಪೊಲೀಸರು ರಥಯಾತ್ರೆಗೆ ಅಡ್ಡಿಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ಜೊತೆಗೆ ಮಾತಿನ ಚಕಮಕಿ ನಡೆದಿದೆ.
ಪ್ರಕರಣ ಖಂಡಿಸಿ ಹಿಂದೂ ಸಂಘಟನೆಗಳ ಬೃಹತ್ ಮೆರವಣಿಗೆ ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ರಾಧಾಕೃಷ್ಣ ಅಡ್ಯಂತಾಯ, "ಟಿಪ್ಪು ಸುಲ್ತಾನ್ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. ಸ್ವಾತಂತ್ರ್ಯ ರಥದಲ್ಲಿ ಸಾವರ್ಕರ್ ಚಿತ್ರ ಇರಬಾರದೆಂದು ಎಸ್ಡಿಪಿಐ ಆಕ್ಷೇಪ ಎತ್ತಿದೆ. ಟಿಪ್ಪು ಸುಲ್ತಾನ್ ಚಿತ್ರ ಹಾಕಬೇಕೆಂದು ಒತ್ತಾಯಿಸಿದೆ. ಟಿಪ್ಪು ಓರ್ವ ದೇಶದ್ರೋಹಿ. ವೀರ ಸಾವರ್ಕರ್ ಜೊತೆ ಟಿಪ್ಪು ಸುಲ್ತಾನನ್ನು ಹೋಲಿಸಬೇಡಿ. ಟಿಪ್ಪು ಓರ್ವ ಹುಚ್ಚು ನಾಯಿ. ಲಕ್ಷಾಂತರ ಹಿಂದೂ ಮತ್ತು ಕ್ರಿಶ್ಚಿಯನ್ರನ್ನು ಮತಾಂತರ ಮಾಡಿದ ಮತಾಂಧ."

"ಇಂಥ ವ್ಯಕ್ತಿಯ ಚಿತ್ರವನ್ನು ಸ್ವಾತಂತ್ರ್ಯ ರಥಕ್ಕೆ ಹಾಕಲು ಒತ್ತಾಯಿಸುವುದು ಅಕ್ಷಮ್ಯ. ಆರೋಪಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು. ಪೋಲೀಸರು ಆರೋಪಿಗಳ ಮೇಲಿನ ಮೃದುಧೋರಣೆಯನ್ನು ನಿಲ್ಲಿಸಬೇಕು," ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ಅಡ್ಯಂತಾಯ ಒತ್ತಾಯ ಮಾಡಿದ್ದಾರೆ.
ಪ್ರತಿಭಟನೆಯ ಅಂತ್ಯದಲ್ಲಿ ಟಿಪ್ಪು ಸುಲ್ತಾನ್ ಪ್ರತಿಕೃತಿ ದಹನಕ್ಕೆ ಪ್ರತಿಭಟನಾಕಾರರು ಮುಂದಾಗಿದ್ದು, ಪ್ರತಿಕೃತಿ ದಹನಕ್ಕೆ ಪೋಲೀಸರು ಅವಕಾಶ ನೀಡಿಲ್ಲ. ಪ್ರತಿಕೃತಿಯನ್ನು ಪೋಲೀಸ್ ಜೀಪ್ನಲ್ಲಿ ಹಾಕಿ ಪೋಲೀಸರು ಬೇರೆಡೆ ಸಾಗಿಸಿದ್ದಾರೆ.












Click it and Unblock the Notifications