ಪೊಲೀಸರು ಉದ್ದೇಶಪೂರ್ವಕವಾಗಿ ಕಿರುಕುಳ ಪ್ರಕರಣ ದಾಖಲಿಸಿಲ್ಲ
ಮಂಗಳೂರು, ಮಾರ್ಚ್ 09; ಮಂಗಳೂರು ನಗರದ ರಥಬೀದಿಯ ಡಾ. ಪಿ. ದಯಾನಂದ ಪೈ ಪಿ. ಸತೀಶ್ ಪೈ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದೆ. ಇತ್ತಂಡಗಳ ವಿದ್ಯಾರ್ಥಿಗಳ ಆರೋಪ ಪ್ರತ್ಯಾರೋಪಗಳ ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಪ್ರಕರಣವನ್ನು ಶೀಘ್ರ ಹಾಗೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವುದಾಗಿ ಮಂಗಳೂರು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಮಾರ್ಚ್ 3ರಂದು ತಲೆಗೆ ಶಾಲು ಧರಿಸಿ ವಿದ್ಯಾರ್ಥಿನಿಯರು ತರಗತಿಯಲ್ಲಿ ಪರೀಕ್ಷೆ ಬರೆಯುತ್ತಿದ್ದರು. ಆಗ ಅಲ್ಲಿಗೆ ಎಬಿವಿಪಿಯಲ್ಲಿ ಗುರುತಿಸಿಕೊಂಡಿದ್ದ ವಿದ್ಯಾರ್ಥಿ ಹಾಗೂ ತಂಡ ಅವರನ್ನು ಹೊರ ಹೋಗುವಂತೆ ಗದರಿಸಿದ್ದಾರೆ ಎಂದು ಮಾರ್ಚ್ 4ರಂದು ಹಿಬಾ ಶೇಖ್ ಎಂಬ ವಿದ್ಯಾರ್ಥಿನಿ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ದೂರಿನನ್ವಯ ಪೊಲೀಸರು ಸುಮಾರು 19 ವಿದ್ಯಾರ್ಥಿ ತಂಡದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರ್ಥಿನಿ ಹಿಬಾ ಶೇಖ್ ತಾನು ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋದ ಸಂದರ್ಭ ಅಲ್ಲಿನ ಸಿಬ್ಬಂದಿಯೋರ್ವರು ತನ್ನ ಭವಿಷ್ಯ ಹಾಳು ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿದ್ದಾಳೆ.

ಈ ಬಗ್ಗೆ ಮಂಗಳೂರಿನ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಹಿಬಾ ಶೇಖ್, ಎಬಿವಿಪಿ ವಿದ್ಯಾರ್ಥಿ ಸಾಯಿ ಸಂದೇಶ್ ಮತ್ತು ಆತನ ತಂಡ ಹಲ್ಲೆಗೆ ಮುಂದಾಗಿದೆ. ಅದಕ್ಕೂ ಮುನ್ನ ಕಿರುಕುಳ ನೀಡಿದೆ. ಕಿರುಕುಳ ಪ್ರಕರಣವನ್ನು ದಾಖಲಿಸಲು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ. ಎಬಿವಿಪಿಯವರು ನೀಡಿದ ದೂರನ್ನು ತೆಗೆದುಕೊಂಡು ಘಟನಾ ಸ್ಥಳದಲ್ಲಿ ಇಲ್ಲದ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ದೂರಿದರು.
ಈ ಆರೋಪವನ್ನು ತಳ್ಳಿಹಾಕಿರುವ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, "ಘಟನೆಯ ಬಗ್ಗೆ ತಿಳಿದು ಬಂದ ತಕ್ಷಣ ತಾನು ಖುದ್ದು ಕಾಲೇಜಿಗೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ವಿದ್ಯಾರ್ಥಿನಿ ಹಾಗೂ ಪ್ರಾಂಶುಪಾಲರೊಂದಿಗೆ ಮಾತನಾಡಿ ಕಾನೂನು ಮುಖೇನ ಯಾವ ರೀತಿ ಕ್ರಮ ವಹಿಸಬೇಕೋ ಅದನ್ನು ಮಾಡಲಾಗಿದೆ" ಎಂದು ಹೇಳಿದ್ದಾರೆ.
"ಈ ಪ್ರಕರಣದ ಸಂಬಂಧ ಬಂದರು ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿ ಹಿಬಾ ಶೇಖ್ ದೂರು ಅಲ್ಲದೆ, ದೂರು ನೀಡಿರುವ ಆಕೆಯ ವಿರುದ್ಧವೇ ಪ್ರತಿ ದೂರು ದಾಖಲಾಗಿದೆ ಅಲ್ಲದೆ ವಿದ್ಯಾರ್ಥಿಯೋರ್ವನ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ರೀತಿಯಲ್ಲಿ ಪೋಸ್ಟ್ ಮಾಡಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ" ಎಂದರು.
ಕಾಲೇಜಿನ ಪ್ರಾಂಶುಪಾಲರು ಪ್ರಕಾರ ಕಾಲೇಜಿನಲ್ಲಿ ವಸ್ತ್ರ ಸಂಹಿತೆ ಜಾರಿಯಲ್ಲಿದೆ. ಆದರೆ ಹಿಜಾಬ್ ವಿವಾದದ ಬಗ್ಗೆ ದೂರು ನೀಡಿರುವ ವಿದ್ಯಾರ್ಥಿನಿ ಬೇರೆ ವಿದ್ಯಾರ್ಥಿನಿಗೆ ನೀಡಿರುವ ಅನುಮತಿ ಪತ್ರವನ್ನು ದುರುಪಯೋಗ ಪಡಿಸಿಕೊಂಡು ಗೊಂದಲ ಸೃಷ್ಟಿಸಿದ್ದಾಳೆ. ಅಲ್ಲದೆ ಮಾಧ್ಯಮದವರನ್ನು ಕರೆಸಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾಳೆಂದು ದೂರಿದ್ದಾರೆ. ಕಾನೂನು ತಜ್ಞರ ಸಲಹೆಯ ಮೇರೆಗೆ ಪ್ರಾಂಶುಪಾಲರ ದೂರನ್ನು ಹೊರತುಪಡಿಸಿ ಉಳಿದ ಮೂರು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ತನಿಖೆಯ ಅಂತಿಮ ವರದಿಯನ್ನು ತನಿಖೆ ನಡೆಸುತ್ತಿರುವ ಹಿರಿಯ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಬಿವಿಪಿ ಪೊಲೀಸ್ ಕಮಿಷನರ್ ಭೇಟಿಯಾಗಿ ಮನವಿ ನೀಡಿದೆ. ಪ್ರಕರಣದಲ್ಲಿ ಎಬಿವಿಪಿ ಕಾರ್ಯಕರ್ತನನ್ನು ನೇರವಾಗಿ ಟಾರ್ಗೆಟ್ ಮಾಡಲಾಗುತ್ತದೆ. ದೂರವಾಣಿ ಕರೆ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಆತನಿಗೆ ಜೀವ ಬೆದರಿಕೆಯೊಡ್ಡಲಾಗುತ್ತಿದೆ. ಈ ಬಗ್ಗೆ ಕ್ರಮ ವಹಿಸಬೇಕೆಂದು ಮನವಿ ಮಾಡಿದ್ದಾರೆ. ಇದೀಗ ಇಡೀ ಪ್ರಕರಣ ಬೂದಿ ಮುಚ್ಚಿದ ಕೆಂಡದಂತಿದೆ. ಈ ಬಗ್ಗೆ ಸಮಗ್ರ ತನಿಖೆಯಾದ ಬಳಿಕ ಪ್ರಕರಣ ಯಾವ ಕಡೆ ಹೋಗಲಿದೆ ಎಂದು ಕಾದು ನೋಡಬೇಕಿದೆ.












Click it and Unblock the Notifications