'ಹಿಜಾಬ್ ವಿವಾದ ದೇಶಕ್ಕೆ ಅಪಮಾನ': ಡಿಕೆ ಶಿವಕುಮಾರ್
ಮಂಗಳೂರು ಫೆಬ್ರವರಿ 7: ರಾಜ್ಯದಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಬಳಕೆ ವಿವಾದ ತಾರಕಕ್ಕೇರಿದೆ. ಇದು ರಾಜಕೀಯ ಅಂಗಳದಲ್ಲಿ ಪಕ್ಷಗಳ ಕೈಗೆ ಸಿಕ್ಕು ಕೋಮುಬಣ್ಣಕ್ಕೆ ತಿರುಗುತ್ತಿದೆ. ಈ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ' ಹಿಜಾಬ್ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯದ ತೀರ್ಪು ಏನೇ ಬಂದರೂ ನಾವದನ್ನು ಸ್ವಾಗತಿಸುತ್ತೇವೆ' ಎಂದಿದ್ದಾರೆ.
ಇಂದು ಉಡುಪಿ ಹಾಗೂ ಮಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. 'ಸಂವಿಧಾನವೇ ನಮ್ಮ ಧರ್ಮ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವನ್ನು ನಾವೆಲ್ಲರೂ ಒಪ್ಪಿದ್ದೇವೆ. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯದ ತೀರ್ಪು ಏನೇ ಬಂದರೂ ನಾವದನ್ನು ಸ್ವಾಗತಿಸುತ್ತೇವೆ. ನಮ್ಮ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರು ಶಿಕ್ಷಣ ಎಲ್ಲರ ಹಕ್ಕು, ಸರಸ್ವತಿ ಎಲ್ಲರಿಗೂ ಸಿಗುವಂತಾಗಬೇಕು. ಅವರ ನಿಲುವೇ ನಮ್ಮ ನಿಲುವು. ನಾನು ಈ ಹಿಂದೆ ಸಾಕಷ್ಟು ಬಾರಿ ಹೇಳಿದ್ದೇನೆ. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು. ನಾವು ಜಾತಿ, ಧರ್ಮದ ವಿಚಾರದಲ್ಲಿ ಜನರನ್ನು ಬೇರೆ ಮಾಡಬಾರದು' ಎಂದರು.

'ತೆರಿಗೆ ಹೊರೆ, ಬೆಲೆ ಏರಿಕೆ ಬಗ್ಗೆ ಯೋಚಿಸಬೇಕಿದೆ'
'ಕಾಲೇಜಿನಲ್ಲಿ ಹಿಜಾಬ್ ಧರಿಸುವುದು ಹಿಂದಿನಿಂದಲೂ ಬಂದಿದೆ. ಕೇಸರಿ ಶಾಲು ಯಾಕೆ ಬಂತು ಎಂದು ನಮಗೆ ಗೊತ್ತಿದೆ. ಮೊದಲು ನಾವು ದೇಶ ಉಳಿಸಬೇಕಿದೆ. ಆ ಬಗ್ಗೆ ಚಿಂತಿಸುತ್ತಿದ್ದೇವೆ. ದೇಶದಲ್ಲಿ ಹಣದುಬ್ಬರ, ತೆರಿಗೆ ಹೊರೆ, ಬೆಲೆ ಏರಿಕೆ ಮೂಲಕ ದಿನನಿತ್ಯ ಜನರ ಜೇಬು ಪಿಕ್ ಪಾಕೇಟ್ ಆಗುತ್ತಿದೆ. ಬೀದಿಬದಿ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ. ಯಾರಿಗೂ ಸರ್ಕಾರ ಸಹಾಯ ಮಾಡಿಲ್ಲ. ಆರ್ಥಿಕವಾಗಿ, ಮಾನಸಿಕವಾಗಿ ಕುಗ್ಗಿದ್ದಾರೆ. ಈ ವರ್ಗದವರಿಗೆ ಬ್ಯಾಂಕ್ ನಿಂದ ಯಾವುದೇ ರೀತಿಯ ಸಹಕಾರವೂ ದೊರೆತಿಲ್ಲ. ಸರ್ಕಾರ ಕೋವಿಡ್ ಸಂತ್ರಸ್ತರಿಗೆ ಪರಿಹಾರ ನೀಡುತ್ತಿಲ್ಲ. ಈ ವರ್ಗದವರಿಗೆ ಶಕ್ತಿ ತುಂಬಬೇಕು. ಜನಸಾಮಾನ್ಯರು ನೆಮ್ಮದಿಯಾಗಿ ಬದುಕಲು ಉದ್ಯೋಗ ಬೇಕು. ಆ ಬಗ್ಗೆ ನಾವೆಲ್ಲರೂ ಚಿಂತನೆ ಮಾಡಬೇಕು' ಎಂದು ಕಿಡಿಕಾರಿದ್ದಾರೆ.

ಕರಾವಳಿ ಅಭಿವೃದ್ಧಿ ಶೂನ್ಯ
ಹಿಜಾಬ್ ವಿವಾದ ಇಡೀ ದೇಶಕ್ಕೆ ದೊಡ್ಡ ಅಪಮಾನ. ಈ ಕರಾವಳಿ ಭಾಗಕ್ಕೆ ಅದರದೇ ಆದ ಇತಿಹಾಸವಿದೆ. ಇಲ್ಲಿರುವ ದೇವಾಲಯ, ಧರ್ಮಕ್ಷೇತ್ರಗಳನ್ನು ಹುಡುಕಿಕೊಂಡು ಎಲ್ಲ ಮೂಲೆಗಳಿಂದ ಜನ ಬರುತ್ತಾರೆ. ಇಲ್ಲಿ ನೂರಾರು ಕಿ.ಮೀ. ಸಮುದ್ರವಿದೆ. ಆ ಮೂಲಕ ಉದ್ಯೋಗ ಸೃಷ್ಟಿಸಲು ನೆರವಾಗಲಿದೆ. ಕೇವಲ 40-50 ಕಿ.ಮೀ ಸಮುದ್ರ ಇರುವ ಗೋವಾ ಯಾವ ರೀತಿ ಅಭಿವೃದ್ಧಿ ಹೊಂದಿದೆ, ಈ ಭಾಗದಲ್ಲಿ ಏನಾಗಿದೆ ಎಂದು ನಾವು ಹೇಳಬೇಕಾದ ಅಗತ್ಯವಿಲ್ಲ. ಈ ಭಾಗದ ಹಿರಿಯರು ದೇಶಕ್ಕೆ ದೊಡ್ಡ ಬ್ಯಾಂಕುಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಅತಿ ಹೆಚ್ಚು ವೈದ್ಯರು, ಇಂಜಿನಿಯರ್ ಗಳು ಸೇರಿದಂತೆ ಅತಿ ದೊಡ್ಡ ಪ್ರಮಾಣದಲ್ಲಿ ಮಾನವ ಶಕ್ತಿಯನ್ನು ಈ ಭಾಗ ದೇಶಕ್ಕೆ ಕೊಟ್ಟಿದೆ. ಆದರೆ ಇದರ ಅಭಿವೃದ್ಧಿ ಮಾತ್ರ ಶೂನ್ಯ ಎಂದು ಹರಿಹಾಯ್ದಿದ್ದಾರೆ.

ಧರ್ಮ ಪಾಲಿಸುವುದು ತಪ್ಪಲ್ಲ
'ಶಾಲೆ, ಕಾಲೇಜಿಗೆ ವಿದ್ಯಾಭ್ಯಾಸಕ್ಕೆ ಹೋದಾಗ ನಾವು ಯಾರನ್ನೂ ವಿಭಿನ್ನವಾಗಿ ಕಾಣಲು ಸಾಧ್ಯವಿಲ್ಲ. ಒಬ್ಬರು ಕುಂಕುಮ ಇಟ್ಟುಕೊಂಡರೆ, ಮತ್ತೊಬ್ಬರು ಓಲೆ, ಬಳೆ ತೊಡುತ್ತಾರೆ. ಕೆಲವರು ಉಂಗುರ ತೊಟ್ಟರೆ ಮತ್ತೊಬ್ಬರು ಬೇರೆ ಹಾಕಿಕೊಳ್ಳುತ್ತಾರೆ. ಅವರ ಪದ್ಧತಿ ಅವರು ಪಾಲಿಸುತ್ತಾರೆ. ಯಾರಿಗೂ ತಮ್ಮ ಧರ್ಮ ಬಿಟ್ಟು ಬದುಕಿ ಎಂದು ಹೇಳಲು ಸಾಧ್ಯವಿಲ್ಲ. ಕಾನೂನಿದೆ, ಪದ್ಧತಿ ಇದೆ. ಅದನ್ನು ಪಾಲಿಸಿಕೊಂಡು ಹೋದರೆ ತಪ್ಪೇನು? ಇಲ್ಲದ್ದನ್ನು ಹುಟ್ಟು ಹಾಕಿ ಚುನಾವಣೆಯಲ್ಲಿನ ಸೋಲನ್ನು, ತಮ್ಮ ವೈಫಲ್ಯವನ್ನು ಮರೆಮಾಚಲು, ಸಮಾಜದಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ. ನಾವದನ್ನು ಖಂಡಿಸುತ್ತೇವೆ. ಮುಂದೆ ನ್ಯಾಯಾಲಯದಲ್ಲಿ ಎಲ್ಲರಿಗೂ ನ್ಯಾಯ ಸಿಗಲಿದೆ. ನಮ್ಮ ಮೊದಲ ಗುರಿ ಯುವಕರಿಗೆ ಉದ್ಯೋಗ ಸಿಗುವಂತೆ ಮಾಡುವುದು, ಅವರು ನೆಮ್ಮದಿ ಜೀವನ ಮಾಡುವಂತೆ ನೋಡಿಕೊಳ್ಳುವುದು. ಕಾರಣ, ಈ ಭಾಗದ ಜನ ಬೇರೆ ರಾಜ್ಯ ಹಾಗೂ ದೇಶಗಳಿಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ. ಈ ಯುವಕರಿಗೆ ಇಲ್ಲೇ ಉದ್ಯೋಗ ಕಲ್ಪಿಸಿ ಇದನ್ನು ಸಂಪದ್ಭರಿತ ಭೂಮಿಯನ್ನಾಗಿ ಮಾಡಬೇಕು ಎಂಬುದು ನಮ್ಮ ಪಕ್ಷದ ಆಸೆ. ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ಜನರ ಭಾವನೆ ಕೆರಳಿಸಬಾರದು ಎಂಬುದು ನಮ್ಮ ಆಗ್ರಹ' ಎಂದರು.

ಹಿಜಾಬ್ ವಿಚಾರದಲ್ಲಿ ಎಸ್ ಡಿಪಿಐ ಕೈವಾಡ
'ಬಿಜೆಪಿ ನಾಯಕರು ಏನೇ ಮಾತನಾಡುವುದಿದ್ದರೂ ತಮ್ಮ ಸಚಿವ ಸಂಪುಟದಲ್ಲಿ ಮಾತನಾಡಲಿ. ಅಧಿಕಾರ ಸ್ವೀಕರಿಸುವಾಗ ಮಾಡಿದ ಪ್ರಮಾಣ ವಚನಕ್ಕೆ ಅವರು ಬದ್ಧರಾಗಿರಲಿ. ಚುನಾವಣೆಗೆ ಸ್ಪರ್ಧಿಸುವಾಗ, ಅಧಿಕಾರ ಸ್ವೀಕರಿಸುವಾಗ ಮಾಡಿದ ಆಣೆಯಂತೆ ನಡೆದುಕೊಳ್ಳಲಿ. ಅವರು ತಮ್ಮ ಪ್ರಮಾಣದ ಸ್ವರೂಪ ಬದಲಾಯಿಸಿ ಈ ರೀತಿ ಮಾತನಾಡಲಿ, ನಂತರ ನಾನು ಉತ್ತರ ನೀಡುತ್ತೇನೆ' ಎಂದರು.
ಹಿಜಾಬ್ ವಿಚಾರದಲ್ಲಿ ಎಸ್ ಡಿಪಿಐ ಕೈವಾಡದ ಬಗ್ಗೆ ಕೇಳಿದ ಪ್ರಶ್ನೆಗೆ, 'ನನಗೆ ಯಾರೂ ವರದಿ ನೀಡಬೇಕಾದ ಅಗತ್ಯವಿಲ್ಲ. ಯಾರೂ ವರದಿ ಕೊಟ್ಟಿಲ್ಲ. ಇದು ಜನರ ಭಾವನೆ ಕೆರಳಿಸಿ ಯುವಕರು, ವಿದ್ಯಾರ್ಥಿಗಳ ಮನಸ್ಸಲ್ಲಿ ವಿಷಬೀಜ ಬಿತ್ತುವ ಪ್ರಯತ್ನ. ಇದರ ಬಗ್ಗೆ ಮಾತನಾಡುವುದಿಲ್ಲ. ಎಲ್ಲ ಪೋಷಕರು ಈ ವಿಚಾರದಲ್ಲಿ ಆತಂಕಗೊಂಡಿದ್ದಾರೆ' ಎಂದರು.
ಈ ವಿಚಾರದಲ್ಲಿ ಕಾಂಗ್ರೆಸ್ ನ ಮುಸಲ್ಮಾನ ನಾಯಕರು ಮೌನವಾಗಿರುವುದೇಕೆ ಎಂಬ ಪ್ರಶ್ನೆಗೆ, 'ಈ ವಿಚಾರದಲ್ಲಿ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಮಾತನಾಡಿದ್ದಾರೆ. ಪಕ್ಷದ ಅಧ್ಯಕ್ಷನಾಗಿ ನಾನು ಮಾತನಾಡುತ್ತಿದ್ದೇನೆ. ಈ ವಿಚಾರದಲ್ಲಿ ಇಡೀ ಕಾಂಗ್ರೆಸ್ ಪಕ್ಷದ್ದು ಒಂದೇ ನಿಲುವು. ನಮ್ಮ ಧರ್ಮ ರಾಷ್ಟ್ರಧ್ವಜ, ನಮ್ಮ ಧರ್ಮ ಸಂವಿಧಾನ. ಇದು ಕೇವಲ ಮುಸಲ್ಮಾನರು ಅಥವಾ ಒಂದು ಸಮುದಾಯದ ವಿಚಾರವಲ್ಲ. ನಾವು ಯಾರನ್ನೂ ಬೆಂಬಲಿಸುತ್ತೇವೆ ಎಂಬುದಕ್ಕಿಂತ, ಸಂವಿಧಾನ ಉಳಿಸಿಕೊಂಡು ಹೋಗುವ ಬಗ್ಗೆ ಆಲೋಚಿಸಬೇಕು' ಎಂದರು.












Click it and Unblock the Notifications