ಕೇರಳದಲ್ಲಿ ಕೊರೊನಾ ಸ್ಫೋಟ; ದಕ್ಷಿಣ ಕನ್ನಡ ಗಡಿಭಾಗದಲ್ಲಿ ಹೈಅಲರ್ಟ್
ಮಂಗಳೂರು, ಜುಲೈ 30: ದೇಶದೆಲ್ಲೆಡೆ ಕೊರೊನಾ ಸೋಂಕು ಕಡಿಮೆಯಾಗುತ್ತಿದ್ದರೆ, ನೆರೆಯ ಕೇರಳ ರಾಜ್ಯದಲ್ಲಿ ಮಾತ್ರ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೇರಳ ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಸರಾಸರಿ 22 ಸಾವಿರಕ್ಕೂ ಅಧಿಕ ಪ್ರಕರಣಗಳು ಕಂಡುಬರುತ್ತಿವೆ.
ಕೊರೊನಾ ಒಂದನೇ ಅಲೆ ನಿಯಂತ್ರಣದಲ್ಲಿ ಮತ್ತು ವಾಕ್ಸಿನೇಷನ್ ವಿಚಾರದಲ್ಲಿ ಜಾಗತಿಕವಾಗಿ ಮನ್ನಣೆ ಗಳಿಸಿದ ಕೇರಳ ರಾಜ್ಯ ಈಗ ಕೊರೊನಾ ಎರಡನೇ ಅಲೆಯನ್ನು ನಿಭಾಯುಸುವುದಕ್ಕೆ ತಡಕಾಡುತ್ತಿದ್ದು, ಇದೇನಾ ಕೇರಳ ಮಾದರಿ ಅಂತಾ ಪ್ರತಿಪಕ್ಷಗಳು ಪ್ರಶ್ನಿಸುತ್ತಿದೆ. ಮುಸ್ಲಿಂ ಬಾಂಧವರ ಬಕ್ರೀದ್ ಹಬ್ಬಕ್ಕೆ ಮೂರು ದಿನ ಸಂಪೂರ್ಣ ರಿಯಾಯಿತಿ ನೀಡಿದ ಕೇರಳ ಸರ್ಕಾರ ಈಗ ಮಾಡಿದ ತಪ್ಪಿಗೆ ಕೈ ಹಿಸುಕಿಕೊಳ್ಳುತ್ತಿದ್ದು, ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕೇರಳದಲ್ಲಿ ಜಾಸ್ತಿಯಾಗುತ್ತಿದೆ.
ಕೇರಳದಲ್ಲಿ ಕೊರೊನಾ ಅಬ್ಬರ ಹೆಚ್ಚಾಗುತ್ತಿದ್ದು, ಕೇರಳ ಗಡಿ ಭಾಗವನ್ನು ಹಂಚಿಕೊಂಡ ರಾಜ್ಯದ ಗಡಿ ಜಿಲ್ಲೆಗಳಿಗೆ ಆತಂಕ ಮೂಡಿಸಿದೆ. ಪ್ರಮುಖವಾಗಿ ಕೇರಳ ರಾಜ್ಯದ ಜೊತೆ ನಿಕಟ ಸಂಪರ್ಕ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಕೇರಳದ ಕೊರೊನಾ ಕಾರ್ಮೋಡ ಆವರಿಸಿದೆ.
ಕೇರಳ ಜನರು ಮಂಗಳೂರಿನ ಜೊತೆಗೆ ವಾಣಿಜ್ಯ,ವ್ಯವಹಾರಿಕಾ, ಶೈಕ್ಷಣಿಕ ಸೇರಿದಂತೆ ಸಾಮಾಜಿಕ ಸಂಬಂಧವನ್ನೂ ಹೊಂದಿದ್ದು, ಪ್ರತಿದಿನ ಕೇರಳ ಗಡಿ ಭಾಗದಿಂದ ಪ್ರತಿದಿನ ಸಾವಿರಾರು ಜನರು ಮಂಗಳೂರಿಗೆ ಬರುತ್ತಾರೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೇರಳದ ಕೊರೊನಾ ಕದಂಬ ಬಾಹುವಿನಿಂದ ತಪ್ಪಿಸಿಕೊಳ್ಳುವುದೇ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ.

ಗಡಿ ಭಾಗದಲ್ಲಿ ಹೆಚ್ಚಿನ ಕಟ್ಟೆಚ್ಚರ
ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲಾ ಗಡಿ ಭಾಗದಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾಗಿದ್ದು, ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾದ ತಲಪಾಡಿಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್, ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಜಂಟಿ ಪರಿಶೀಲನೆ ಮಾಡಿದ್ದಾರೆ.
ತಲಪಾಡಿಯ ಗಡಿ ಭಾಗ ಮತ್ತು ದೇವಿಪುರದ ಗಡಿಭಾಗಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳ ತಂಡ ಪರಿಸ್ಥಿತಿಯನ್ನು ಅವಲೋಕಿಸಿದೆ. ಅನಾವಶ್ಯಕವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಬರುವ ಕೇರಳಿಗರ ನಿಯಂತ್ರಣ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸೂಚನೆ ನೀಡಿದ್ದಾರೆ.

ನಾಲ್ಕು ದಿನಗಳಿಂದ ಪಾಸಿಟಿವ್ ಸಂಖ್ಯೆ ಜಾಸ್ತಿ
ಗಡಿಭಾಗದ ಪರಿಶೀಲನೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., "ಕೇರಳದ ಗಡಿ ಜಿಲ್ಲೆಯಾದ ಕಾಸರಗೋಡುವಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ರೇಟ್ ಶೇ.14ರಷ್ಟಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಳೆದ ನಾಲ್ಕು ದಿನಗಳಿಂದ ಪಾಸಿಟಿವ್ ಸಂಖ್ಯೆ ಜಾಸ್ತಿಯಾಗಿದೆ,'' ಎಂದರು.
"ಗಡಿ ಭಾಗದಲ್ಲಿ ಹೆಚ್ಚಿನ ತಪಾಸಣೆ ಮಾಡಲು ಸೂಚನೆ ನೀಡಿದ್ದೇನೆ. ರಾಜ್ಯ ಸರ್ಕಾರ ವಾಕ್ಸಿನೇಷನ್ ಆದವರಿಗೆ ಜಿಲ್ಲೆಗೆ ಪ್ರವೇಶ ನೀಡಲು ಸೂಚನೆ ನೀಡಿದೆ. ಆದರೆ ವಾಕ್ಸಿನೇಷನ್ ಆದವರಿಂದಲೂ ಕೊರೊನಾ ಸೋಂಕು ಹರಡುವ ಸಾಧ್ಯತೆಗಳಿವೆ. ಈ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೆ ತರುತ್ತೇನೆ. ದಕ್ಷಿಣ ಕನ್ನಡ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಗಡಿ ಭಾಗದಲ್ಲಿ ಹೆಚ್ಚಿನ ತಪಾಸಣೆ ಮಾಡಲಿದೆ,'' ಎಂದು ಮಾಹಿತಿ ನೀಡಿದರು.
ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ
"ಮಂಗಳೂರಿಗೆ ಕಾಸರಗೋಡುವಿನಿಂದ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನರು ಬಸ್ ಮೂಲಕ ಬರುತ್ತಾರೆ. ಅವರ ಬಗ್ಗೆಯೂ ನಿಗಾವಹಿಸಲು ಸೂಚನೆ ನೀಡಿದ್ದು, ರೈಲು ಮಾರ್ಗದ ಮೂಲಕ ಬರುವವರ ಪರೀಕ್ಷೆಯನ್ನೂ ರೈಲ್ವೇ ನಿಲ್ದಾಣದಲ್ಲಿ ಮಾಡಲು ಸೂಚನೆ ನೀಡಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪಾಸಿಟಿವಿಟಿ ರೇಟ್ ಜಾಸ್ತಿಯಾಗಿದ್ದು, ನಿಯಂತ್ರಣಕ್ಕಾಗಿ ಹಲವು ಕ್ರಮ ಕೈಗೊಂಡಿದ್ದೇವೆ. ಜಿಲ್ಲೆಯಲ್ಲಿ ಸದ್ಯ ಪ್ರತಿದಿನ ಆರು ಸಾವಿರ ಜನರ ಕೊರೊನಾ ಪರೀಕ್ಷೆಯಾಗುತ್ತಿದ್ದು, ಮುಂದಿನ ದಿನದಲ್ಲಿ ಹತ್ತು ಸಾವಿರ ಜನರ ಕೊರೊನಾ ಟೆಸ್ಟ್ ನಡೆಸಲು ನಿರ್ಧಾರ ಮಾಡಿದ್ದೇವೆ,'' ಎಂದು ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಹೇಳಿದ್ದಾರೆ...

ಕಡ್ಡಾಯವಾಗಿ ಆರ್ಟಿ- ಪಿಸಿಆರ್ ನೆಗೆಟಿವ್ ವರದಿ
"ಕೇರಳದ ಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬರುವ ಜನರು ಕಡ್ಡಾಯವಾಗಿ ಆರ್ಟಿ- ಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು ಅಥವಾ ಲಸಿಕೆ ಪಡೆದ ಪ್ರಮಾಣ ಪತ್ರ ಹೊಂದಿರಬೇಕು. ಪ್ರತಿದಿನ ಮಂಗಳೂರಿಗೆ ಬರುವ ಜನರು 15 ದಿನಕೊಮ್ಮೆ ಆರ್ಟಿ- ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕೆಂಬ ನಿಯಮ ಹಾಕಲಾಗಿತ್ತು.''
ಸದ್ಯ ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 43,509 ಕೊರೊನಾ ಪ್ರಕರಣ ಕಾಣಿಸಿಕೊಂಡಿದೆ. 640 ಮಂದಿ 24 ಗಂಟೆಯ ಅವಧಿಯಲ್ಲಿ ಕೊರೊನಾದಿಂದ ಬಲಿಯಾಗಿದ್ದು, ಪ್ರಸ್ತುತ ಸೋಂಕಿತರ ಸಂಖ್ಯೆ ನಾಲ್ಕು ಲಕ್ಷಕ್ಕೆ ಏರಿಕೆಯಾಗಿದೆ. ಕೇರಳದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಕೇರಳ ರಾಜ್ಯಕ್ಕೆ 6 ಮಂದಿ ತಜ್ಞ ವೈದ್ಯರ ತಂಡವನ್ನು ಕಳುಹಿಸಿದೆ.












Click it and Unblock the Notifications