ಪಶ್ಚಿಮ ವಲಯ ಐಜಿಪಿಯಾಗಿ ಹೇಮಂತ್ ನಿಬಾಳ್ಕರ್, ಹರಿಶೇಖರನ್ ವರ್ಗಾವಣೆ
ಮಂಗಳೂರು, ಆಗಸ್ಟ್ 8: ಪಶ್ಚಿಮ ವಲಯ ಐಜಿಪಿಯಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಹರಿಶೇಖರನ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅವರ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ನೇಮಕ ಮಾಡಲಾಗಿದೆ.
ಆರು ತಿಂಗಳ ಹಿಂದೆಯಷ್ಟೇ ಪಶ್ಚಿಮ ವಲಯ ಐಜಿಪಿಯಾಗಿ ನೇಮಕವಾಗಿದ್ದ ಹರಿಶೇಖರನ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿರುವುದು ಕುತೂಹಲ ಮೂಡಿಸಿದೆ. ಅವರನ್ನು ಬೆಂಗಳೂರು ಕೇಂದ್ರ ಕಚೇರಿಯ ಐಜಿಪಿಯಾಗಿ ನೇಮಕ ಮಾಡಲಾಗಿದೆ.
ಕಲ್ಲಡ್ಕ ಗುಂಪು ಘರ್ಷಣೆ ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣದ ನಂತರ ನಡೆದ ಬೆಳವಣಿಗೆಗಳನ್ನು ಸರಿಯಾಗಿ ನಿಭಾಯಿಸದ ಹಿನ್ನೆಲೆಯಲ್ಲಿ ಹರಿಶೇಖರನ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿಯಾಗಿದ್ದ ಭೂಷಣ್ ಗುಲಾಬ್ ರಾವ್ ಬೋರಸೆ ಅವರನ್ನು ರಾಜ್ಯ ಸರ್ಕಾರ ಇದೇ ರೀತಿ ಏಕಾಏಕಿ ವರ್ಗಾವಣೆ ಮಾಡಿತ್ತು. ಅದಕ್ಕೂ ಸ್ವಲ್ಪ ಮೊದಲು ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್ ರನ್ನು ವರ್ಗಾವಣೆ ಮಾಡಲಾಗಿತ್ತು.
ಇತರ ಪೊಲೀಸ್ ಅಧಿಕಾರಿಗಳ ವರ್ಗಾವಣೆಗಳು ಹೀಗಿವೆ,
ರವಿ ಪಿ - ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ ಮತ್ತು ಐಜಿಪಿ ಸ್ಥಾನದಿಂದ ಕೆಎಸ್ಆರ್'ಟಿಸಿ ಯ ಭದ್ರತೆ ಮತ್ತು ಜಾಗೃತ ದಳದ ಐಜಿಪಿ ಮತ್ತು ನಿರ್ದೇಶಕರಾಗಿ ವರ್ಗಾವಣೆ
ಎನ್ ಸತೀಶ್ ಕುಮಾರ್ - ಕೆಎಸ್ಆರ್'ಟಿಸಿ ಯ ಭದ್ರತೆ ಮತ್ತು ಜಾಗೃತ ದಳದ ನಿರ್ದೇಶಕ ಮತ್ತು ಡಿಐಜಿ ಸ್ಥಾನದಿಂದ ಅಪರಾಧ ವಿಭಾಗದ ಜಂಟಿ ಆಯುಕ್ತ ಮತ್ತು ಡಿಐಜಿ ಸ್ಥಾನಕ್ಕೆ ವರ್ಗವಣೆ
ಬಿಜಯ್ ಕುಮಾರ್ ಸಿಂಗ್ - ತರಬೇತಿ ವಿಭಾಗದ ಐಜಿಪಿ ಸ್ಥಾನದಿಂದ ಗುಪ್ತಚರ ವಿಭಾಗದ ಐಜಿಪಿಯಾಗಿ ವರ್ಗಾವಣೆ