ಕರಾವಳಿಯಲ್ಲಿ ಮುಂಗಾರು ಚುರುಕು; ಉಳ್ಳಾಲ, ಸೋಮೇಶ್ವರದಲ್ಲಿ ಅಲೆಗಳ ಅಬ್ಬರ
ಮಂಗಳೂರು, ಜೂನ್ 17: ಕರಾವಳಿ ಪ್ರದೇಶಗಳಲ್ಲಿ ಮುಂಗಾರು ಚುರುಕುಗೊಂಡಿದೆ. ಹೀಗಾಗಿ ಮಂಗಳೂರಿನ ಉಳ್ಳಾಲ ಮತ್ತು ಸೋಮೇಶ್ವರ ವ್ಯಾಪ್ತಿಯಲ್ಲಿ ಸಮುದ್ರ ಭೋರ್ಗರೆಯುತ್ತಿದೆ.
Recommended Video
ಸೋಮೇಶ್ವರ ದೇವಸ್ಥಾನದ ಬಳಿ ಮೋಹನ್ ಅವರಿಗೆ ಸೇರಿದ ಮನೆಯು ಸಂಪೂರ್ಣ ಸಮುದ್ರ ಪಾಲಾಗಿದ್ದು, ಕಳೆದ ಬಾರಿ ಸಮುದ್ರ ಕೊರೆತಕ್ಕೆ ಮನೆ ಭಾಗಶಃ ಹಾನಿಯಾಗಿತ್ತು. ಸೋಮೇಶ್ವರ ಕಡಲತೀರದಲ್ಲಿ ಇದೀಗ ಸಮುದ್ರದ ಅಬ್ಬರ ಜೋರಾಗಿದ್ದು, ಇಪ್ಪತ್ತಕ್ಕೂ ಹೆಚ್ಚು ಮನೆಗಳು ಸಮುದ್ರ ಪಾಲಾಗುವ ಭೀತಿಯಲ್ಲಿವೆ. ಸಮುದ್ರ ತೀರ ಪ್ರದೇಶದಲ್ಲಿನ ತೆಂಗಿನ ಮರಗಳೂ ಸಮುದ್ರದ ಪಾಲಾಗುತ್ತಿದೆ.
ಕರಾವಳಿಯಲ್ಲಿ ಐದು ದಿನ ಭಾರೀ ಮಳೆ ಮುನ್ಸೂಚನೆ
ಉಳ್ಳಾಲದಲ್ಲೂ ಕೈಕೋ, ಕಿಲೇರಿಯಾನಗರ, ಸೀಗ್ರೌಂಡ್ ಬಳಿ ಸಮುದ್ರದ ಅಬ್ಬರ ಹೆಚ್ಚಾಗಿದೆ. ಇಲ್ಲಿ ಶಾಶ್ವತ ಕಾಮಗಾರಿ ಆರಂಭಗೊಂಡಿದ್ದು, ಇಲ್ಲಿನ ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿವೆ. ಕಳೆದ ಬಾರಿ ಉಚ್ಚಿಲ ಬೀಚ್ ಎಂಡ್ ಪಾಯಿಂಟ್ ಸಂಪರ್ಕಿಸುವ ರಸ್ತೆ ಕಡಲ್ಕೊರೆತದಿಂದ ಕುಸಿದಿತ್ತು. ಇಲ್ಲಿ ಶಾಶ್ವತ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದು ಕಡಲ್ಕೊರೆತ ಹೆಚ್ಚಳಕ್ಕೆ ಕಾರಣವಾಗಿದೆ.