ಶಿರಾಡಿ ಘಾಟ್ನಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ, ಏನಿದೆ ನಿಯಮ?
ಮಂಗಳೂರು, ಜುಲೈ 18; ಮಂಗಳೂರು-ಬೆಂಗಳೂರು ಸಂಪರ್ಕಿಸುವ ಮುಖ್ಯ ರಸ್ತೆ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ನಲ್ಲಿ ಅನಿರ್ಧಿಷ್ಟಾವಧಿಗೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ದೋಣಿಗಲ್ ಪ್ರದೇಶದಲ್ಲಿ ಭೂ ಕುಸಿತವಾದ ಹಿನ್ನಲೆಯಲ್ಲಿಈ ತೀರ್ಮಾನ ಕೈಗೊಳ್ಳಲಾಗಿದೆ.
ಇದರಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕಿಸುವ ಚಾರ್ಮಾಡಿ ಘಾಟ್, ಆಗುಂಬೆ ಘಾಟ್, ಬಿಸಿಲೆ ಘಾಟ್, ಸಂಪಾಜೆ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ. ವಾಹನ ಸಂಚಾರ ಹೆಚ್ಚಾದ ಹಿನ್ನಲೆಯಲ್ಲಿ ಇತರ ಘಾಟ್ಗಳೂ ಕುಸಿಯುವ ಭೀತಿ ಎದುರಾಗಿದೆ.
ಶಿರಾಡಿ ಘಾಟ್ನಲ್ಲಿ ವಾಹನ ಸಂಚಾರಕ್ಕೆ ಹಾಸನ, ದಕ್ಷಿಣ ಕನ್ನಡ ಜಿಲ್ಲಾಡಳಿತ ಹೊಸ ರಸ್ತೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಶಿರಾಡಿ ಘಾಟ್ ಮೂಲಕ ಮಂಗಳೂರಿನಿಂದ ಬೆಂಗಳೂರಿಗೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಕಾರು, ಟೆಂಪೋ, ಮಿನಿ ವ್ಯಾನ್, ದ್ವಿಚಕ್ರ ವಾಹನ ಮತ್ತು ಆಂಬ್ಯುಲೆನ್ಸ್ಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ.
ನಿಯಮಗಳು
* ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಲಘು ವಾಹನದ ಪ್ರಯಾಣಿಕರು ಶಿರಾಡಿ ಘಾಟ್ ಮೂಲಕ ಮಾರನಹಳ್ಳಿ-ಕಾಡುಮನೆ-ಹಾರ್ಲೆ-ಕೂಡಿಗೆ-ಆನೆಮಹಲ್-ಸಕಲೇಶಪುರ ಮಾರ್ಗದ ಮೂಲಕ ಬೆಂಗಳೂರಿಗೆ ತೆರೆಳಬಹುದು. ಆದರೆ ಗಂಟೆಗೆ 30 ಕಿ. ಮೀ. ವೇಗದಲ್ಲಿ ಮಾತ್ರ ವಾಹನ ಸಂಚಾರ ಮಾಡಬಹುದಾಗಿದೆ.
* ಇನ್ನು ಬೆಂಗಳೂರಿನಿಂದ ಮಂಗಳೂರಿಗೆ ಬರುವ ಲಘು ವಾಹನ ಪ್ರಯಾಣಿಕರು ಸಕಲೇಶಪುರ-ಆನೆಮಹಲ್-ಕ್ಯಾನಹಳ್ಳಿ-ಚಿನ್ನಳ್ಳಿ-ಕಡಗರವಳ್ಳಿ-ಮಾರನಹಳ್ಳಿ ಮೂಲಕ ಶಿರಾಡಿ ಘಾಟ್ ಸಂಪರ್ಕ ಸಾಧಿಸಿ ಮಂಗಳೂರಿಗೆ ಬರಬಹುದು.

* ಈ ಎರಡೂ ಮಾರ್ಗಗಳಲ್ಲಿ ಏಕಮುಖ ಸಂಚಾರವನ್ನು ಮಾತ್ರ ಮಾಡಲಾಗಿದೆ. ಎರಡೂ ರಸ್ತೆಯ ಆರಂಭ ಮತ್ತು ಅಂತ್ಯದಲ್ಲಿ ಪೊಲೀಸ್ ನಿಯೋಜನೆ ಮಾಡುವಂತೆ ಹಾಸನ ಪೊಲೀಸರಿಗೆ ಸೂಚಿಸಲಾಗಿದೆ.
ಚಾರ್ಮಾಡಿ ಘಾಟ್; ಶಿರಾಡಿ ಘಾಟ್ನಲ್ಲಿ ವಾಹನ ಸಂಚಾರ ಸ್ಥಗಿತವಾದ ಹಿನ್ನಲೆಯಲ್ಲಿ ಮಂಗಳೂರು-ಚಿಕ್ಕಮಗಳೂರು ಸಂಪರ್ಕದ ಚಾರ್ಮಾಡಿ ಘಾಟ್ನಲ್ಲಿ ವಾಹನ ಸಂಚಾರ ಅಧಿಕವಾಗಿದೆ.. 9 ಕಠಿಣ ತಿರುವು ಹೊಂದಿರುವ ಚಾರ್ಮಾಡಿ ಘಾಟ್ನಲ್ಲಿ ಭಾರೀ ವಾಹನ ಸಂಚಾರವಾಗುತ್ತಿದ್ದು, ಘಾಟ್ ರಸ್ತೆ ಕುಸಿಯುವ ಭೀತಿ ಎದುರಾಗಿದೆ.
ಕೊಡಗಿನಿಂದ ಸಂಪಾಜೆ ಮೂಲಕ ಮಂಗಳೂರು ಸಂಪರ್ಕದ ಹೆದ್ದಾರಿಯಲ್ಲೂ ಅಲಲ್ಲಿ ಭೂಕುಸಿತವಾಗುತ್ತಿದೆ. ಶಿವಮೊಗ್ಗ-ಕರಾವಳಿ ಸಂಪರ್ಕದ ಆಗುಂಬೆ ಘಾಟ್ನಲ್ಲೂ ಬಿರುಕು ಕಾಣಿಸಿಕೊಂಡಿದ್ದು, ಕುಸಿಯುವ ಭೀತಿ ಎದುರಾಗಿದೆ. ಈ ಹಿನ್ನಲೆಯಲ್ಲಿ ಘಾಟ್ನಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.











Click it and Unblock the Notifications