ಮಾತೃ ಹೃದಯಕ್ಕೆ ಕರಗದವರು ಉಂಟೆ? ಮಂಗಳೂರಲ್ಲಿ ಮನ ಮಿಡಿವ ಕಥೆ
ಮಂಗಳೂರು, ಆಗಸ್ಟ್ 9: ತಾಯಿಯ ಪ್ರೀತಿ, ವಾತ್ಸಲ್ಯಕ್ಕೆ ಬೆಲೆ ಕಟ್ಟಲಾದೀತೇ? ಅದು ಮನುಷ್ಯರ ವಿಚಾರದಲ್ಲಿ ಮಾತ್ರವಲ್ಲ, ಮಾತು ಬಾರದ ಪ್ರಾಣಿಗಳ ವಿಷಯದಲ್ಲೂ ಅದೆಷ್ಟೋ ಸಲ ನಿಜವಾಗಿದೆ. ಈಗ ನಿಮ್ಮೆದುರು ತಂದಿರುವ ಈ ವರದಿ ಮತ್ತೊಂದು ನಿದರ್ಶನ.
ತಾನು ಪ್ರಾಣ ಬಿಟ್ಟು, ಕರುಳ ಬಳ್ಳಿಯನ್ನು ಬದುಕಿಸಿದ ಗೋವಿನ ಕಥೆ ಇದು. ಅದು ಆರು ತಿಂಗಳ ಗರ್ಭಿಣಿ. ತನ್ನ ಪಾಡಿಗೆ ಅಲ್ಲಿ ಇಲ್ಲಿ ಅಡ್ಡಾಡುತ್ತ ಹುಲ್ಲು ಮೇಯುತ್ತಿತ್ತು. ಅದೊಂದು ರಾತ್ರಿ ಆ ಗೋವಿನ ಮೇಲೆ ಕಟುಕರ ಕಣ್ಣು ಬಿದ್ದಿತ್ತು. ರಸ್ತೆ ಬದಿಯಲ್ಲಿ ತಣ್ಣನೆ ಮಲಗಿದ್ದ ಅದನ್ನು ಹೊತ್ತೊಯ್ದರು. ತಪ್ಪಿಕೊಳ್ಳಬಾರದು ಎಂಬ ಕಾರಣಕ್ಕೆ ಆ ಹಸುವಿನ ಎರಡು ಕಾಲನ್ನು ಕಡಿದಿದ್ದರು.
ಕುಂದಾಪುರದಲ್ಲಿ ಹಸು ಹಿಡಿಯಲು ಕಳ್ಳರು ಪರದಾಡೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
ಅದು ಹೇಗೆ ಸಾಧ್ಯವಾಯಿತೋ ದುರುಳರ ಕೈಯಿಂದ ತಪ್ಪಿಸಿಕೊಂಡು, ವಾಹನದಿಂದ ಜಿಗಿದಿತ್ತು. ರಸ್ತೆ ಬದಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೋ ಮಾತೆಯನ್ನು ಮಂಗಳೂರಿನ ಶಕ್ತಿನಗರದ ಆನಿಮಲ್ ಕೇರ್ ಟ್ರಸ್ಟ್ ನ ಸಿಬ್ಬಂದಿ ರಕ್ಷಣೆ ಮಾಡಿದ್ದರು. ಪ್ರೀತಿಯಿಂದ ಸಲಹಿದ ಟ್ರಸ್ಟ ನ ಸಿಬ್ಬಂದಿ ರಾಧಾ ಎಂದು ಹೆಸರು ಕೊಟ್ಟರು.
ತನ್ನ ಮುಂದಿನ ಎರಡೂ ಕಾಲುಗಳನ್ನು ಕಳೆದುಕೊಂಡ ರಾಧಾಗೆ ನಿಲ್ಲಲೂ ಆಗದೇ, ಇತ್ತ ಮಲಗಲೂ ಆಗದೆ ಮೂರು ತಿಂಗಳು ನರಕಯಾತನೆ. ಅಂಥ ಯಾತನೆ ಅನುಭವಿಸಿದ ರಾಧಾ ತುಂಬು ಗರ್ಭಿಣಿ. ಇದೀಗ 10 ದಿನಗಳ ಹಿಂದೆ ಮುದ್ದಾದ ಗಂಡು ಕರುವಿಗೆ ಜನ್ಮ ನೀಡಿತು. ಆದರೆ ದುರಂತ ಅಂದರೆ, ಆರೋಗ್ಯ ಹದಗೆಟ್ಟ ಕಾರಣಕ್ಕೆ ರಾಧಾ 2 ದಿನಗಳ ಹಿಂದೆ ಇಹಲೋಕ ತ್ಯಜಿಸಿತು.
ಜನನವಾದ ಹತ್ತೇ ದಿನದಲ್ಲಿ ಕರು ಈಗ ತಬ್ಬಲಿಯಾಗಿದೆ. ರಾಧಾ ಎಂಬ ಆ ಪುಣ್ಯಕೋಟಿಯ ಮುದ್ದಾದ ಗಂಡು ಕರುವಿಗೆ ಟ್ರಸ್ಟ್ ನ ಸಿಬ್ಬಂದಿ ಚೋಟಾ ಭೀಮ್ ಎಂದು ಹೆಸರಿಟ್ಟಿದ್ದಾರೆ. ಚೋಟಾ ಭೀಮ್ ಗೆ ಈಗ ಟ್ರಸ್ಟ್ ನ ಸಿಬ್ಬಂದಿ ಬಾಟಲಿ ಹಾಲುಣಿಸಿ ಸಾಕುತ್ತಿದ್ದಾರೆ. ತನ್ನ ಕರುವನ್ನು ಉಳಿಸಲು ಮೂರು ತಿಂಗಳು ಯಾತನೆ ಅನುಭವಿಸಿ, ಆ ನಂತರ ಮೃತಪಟ್ಟ ರಾಧೆಯ ತಾಯಿ ಪ್ರೇಮಕ್ಕೆ ಟ್ರಸ್ಟ್ ಸಿಬ್ಬಂದಿ ಕಣ್ಣೀರಾಗಿದ್ದಾರೆ.