ಯಾರಿಗೆ ಹೇಳೋಣ ಬಾಂಬೆ-ಮಂಗಳೂರು ಬಸ್ ಸಾರಥಿಗಳ ಪ್ರಾಬ್ಲಂ
ಮಂಗಳೂರಿನಿಂದ ಮುಂಬೈಗೆ ಬಸ್ಸಿನಲ್ಲಿ ಪ್ರಯಾಣಿಸುವವರನ್ನು ಸುರಕ್ಷಿತವಾಗಿ ತಮ್ಮ ಗಮ್ಯ ಮುಟ್ಟಿಸುವ ಬಸ್ಸು ಚಾಲಕರು ತಮ್ಮ ಜೀವಪಣಕ್ಕಿಟ್ಟು ಬಸ್ಸು ಚಲಾಯಿಸುತ್ತಾರೆ. ಇರುವ ಪಡುವ ಕಷ್ಟ ಮಾತ್ರ ದೇವರೇ ಬಲ್ಲ.
ಮಂಗಳೂರು, ಮೇ 9: ಮಂಗಳೂರು ಮತ್ತು ಬಾಂಬೆ ನಡುವಣದ ಸಂಬಂಧ ಅವಿನಾಭಾವದ್ದು. ಜವಳಿ ಉದ್ಯಮದಿಂದ ಹಿಡಿದು ಹೋಟೆಲ್ ಉದ್ಯಮದ ತನಕ ಮಿಂಚಿದವರು ಕರಾವಳಿಯವರು.
ಕಳೆದ 35 ವರ್ಷದಿಂದ ದಿನನಿತ್ಯ ಮಂಗಳೂರಿನಿಂದ ಮುಂಬೈಗೆ ಬಸ್ಸಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಏರುಗತಿಯಲ್ಲಿದ್ದು, ಅದರಲ್ಲೂ ಮಧ್ಯಮವರ್ಗದವರು ಮುಂಬೈ ಪ್ರಯಾಣಕ್ಕೆ ವೋಲ್ವೋ ಅಥವಾ ಸ್ಲೀಪರ್ ಕೋಚ್ ಬಸ್ಸುಗಳನ್ನೇ ಅವಲಂಬಿಸುತ್ತಿದ್ದಾರೆ.
ಇವರೆಲ್ಲರನ್ನೂ ಸುರಕ್ಷಿತವಾಗಿ ತಮ್ಮ ಗಮ್ಯ ಮುಟ್ಟಿಸುವ ಬಸ್ಸು ಚಾಲಕರು ತಮ್ಮ ಜೀವಪಣಕ್ಕಿಟ್ಟು ಬಸ್ಸು ಚಲಾಯಿಸುತ್ತಾರೆ. ಇರುವ ಪಡುವ ಕಷ್ಟ ಮಾತ್ರ ದೇವರೇ ಬಲ್ಲ.
ಕುಡ್ಲಕ್ಕೂ ಬಾಂಬೆಗೂ ಇದೆ ಅವಿನಾಭಾವ ಸಂಬಂಧ
70 ದಶಕದಲ್ಲಿ ವ್ಯಾಪರೋದ್ಯಮದಲ್ಲಿ ಕ್ಷಿಪ್ರಗತಿಯ ಬದಲಾವಣೆಗೊಂಡಾಗ ಬಡತನ, ನಿರುದ್ಯೋಗ ಸಮಸ್ಯೆ ತಲೆದೋರಿತ್ತು. ಅಂತಹ ಪರಿಸ್ಥಿತಿಯಲ್ಲಿ ಕರಾವಳಿಯವರು ಆಶ್ರಯತಾಣವಾಗಿ ಮತ್ತು ಉದ್ಯೋಗ ಕ್ಷೇತ್ರವಾಗಿ ಆರಿಸಿಕೊಂಡದ್ದು ಮಹಾನಗರಿ ಮುಂಬೈಯನ್ನು.
ಹೋಟೆಲ್ ಮಾಣಿ ಕೆಲಸದಿಂದ ಹಿಡಿದು ಐಶಾರಾಮಿ ಹೋಟೆಲ್ ಮಾಲಕರ ತನಕ ಮುಂಬೈಯಲ್ಲಿ ಮಿಂಚಿದವರು ಕರಾವಳಿ ಕರ್ನಾಟಕದವರು. ಹಲವರು ಸಿನಿಮಾ ರಂಗದಲ್ಲೂ ಅಚ್ಚಳಿಯದ ಹೆಸರು ಮಾಡಿದ್ದಾರೆ. ಈಗಲೂ ಸಹ ವಿವಿಧ ಉದ್ಯಮ, ವ್ಯಾಪಾರ ವಹಿವಾಟಿಗೆ ಮುಂಬೈಯನ್ನು ಅವಲಂಬಿಸುತ್ತಿದ್ದಾರೆ. ಅಂತಹ ಅವಿನಾಭಾವ ಸಂಬಂಧ ಮಂಗಳೂರು ಹಾಗೂ ಬಾಂಬೆ ಅರ್ಥಾತ್ ಮುಂಬೈ ನಡುವೆ ಇದೆ.

ಬಸ್ಸನ್ನೇ ಅವಲಂಬಿಸಿದ ಪ್ರಯಾಣಿಕರು
ಮುಂಬೈ ಪ್ರಯಾಣ ರೈಲಿಗಿಂತ ವೇಗವಾಗಿ ತಲುಪುವುದು ಬಸ್ಸಿನಲ್ಲಿ. ಆದ್ದರಿಂದ ವಯಸ್ಕರು, ಹಿರಿಯರಿಗೆ ಪ್ರಯಾಣ ಆರಾಮ ಮತ್ತು ಸುಖಕರವಾಗಲಿಕ್ಕೆ ಬಸ್ಸು ಪ್ರಯಾಣವನ್ನೇ ಅವಲಂಬಿಸುತ್ತಾರೆ. ಇವರನ್ನೆಲ್ಲಾ ಸುರಕ್ಷಿತವಾಗಿ ಹೊತ್ತೊಯ್ಯುವ ಬಸ್ಸು ಚಾಲಕ ಮತ್ತು ಸಿಬ್ಬಂದಿಗಳ ಸಂಕಷ್ಟ ಮಾತ್ರ ಅಷ್ಟಿಷ್ಟಲ್ಲ.

ಕನಿಷ್ಠ ಸಂಬಳ
ಮುಂಬೈಗೆ ತೆರಳುವ ನಾನ್ ಎ.ಸಿ ಬಸ್ನ ಚಾಲಕರಿಗೆ ಒಂದು ಟ್ರಿಪ್ಗೆ ಅಂದರೆ ಮುಂಬೈಗೆ ಹೋಗಿ ಬರಲು ಕೇವಲ 1300 ರೂಪಾಯಿ ಸಂಬಳ ಕೊಡುತ್ತಾರೆ. ಅದೇ ಎ.ಸಿ ಹಾಗೂ ಸ್ಕ್ಯಾನಿಯಾ ಬಸ್ ಚಾಲಕರಿಗೆ 1800 ಸಂಬಳ ದೊರಕಿದರೆ ಅದರಲ್ಲಿ ಕೆಲಸ ಮಾಡುವ ಕ್ಲೀನರ್ಗಳಿಗೆ ಸಿಗುವುದು 500 ರೂ. ಮಾತ್ರ. ಇದೇ ಹಣದಲ್ಲಿ ಬಾಂಬೆಯಲ್ಲಿ ಬಸ್ಸು ಶುಚಿಗೊಳಿಸುವ ಕೆಲಸಗಾರರಿಗೆ 350ರೂ. ಕೊಡಬೇಕು ಆಗ ಉಳಿಯುವುದು ಕೇವಲ 150 ರೂ. ಇದರಲ್ಲಿ ಚಾಲಕ ಹಾಗೂ ಕ್ಲೀನರ್ ದಿನಕಳೆಯಬೇಕು.

ಜೀವ ಪಣಕ್ಕಿಟ್ಟು ಬಸ್ ಚಲಾಯಿಸುವ ಚಾಲಕರು
ಮಂಗಳೂರಿನಿಂದ ಮಧ್ಯಾಹ್ನದ ವೇಳೆ ಹೊರಟ ಬಸ್ಸುಗಳು ಮುಂಬೈಯ ಮೀರಾ ರಸ್ತೆಗೆ ತಲುಪುವುದು ಮರುದಿನ 10ಗಂಟೆ ಆಗುತ್ತದೆ. ಈ ಮಧ್ಯೆ ಎರಡು ಚಾಲಕರು ಬಸ್ ಚಲಾಯಿಸುತ್ತಾರೆ. ಮೊದಲ ಚಾಲಕ ಮಂಗಳೂರಿನಿಂದ ಹುಬ್ಬಳ್ಳಿಯವರೆಗೆ ಬಸ್ಸು ಚಲಾಯಿಸಿದರೆ ತದನಂತರದ ಚಾಲಕ ಹುಬ್ಬಳ್ಳಿಯಿಂದ ಮುಂಬೈ ತನಕ ಚಲಾಯಿಸುತ್ತಾರೆ.

ವಿಶ್ರಾಂತಿಗಿಲ್ಲ ಸಮಯ
ಇದರ ಮಧ್ಯೆ ಚಾಲಕರಿಗೆ ವಿಶ್ರಾಂತಿಗೆ ಸಮಯವೇ ಸಿಕ್ಕುವುದಿಲ್ಲ. ಮುಂಬೈಯ ಮೀರಾ ರೋಡ್ಗೆ ತಲುಪಿದ ಕೆಲವೇ ಘಂಟೆಗಳಲ್ಲಿ ಪುನಃ ಮಂಗಳೂರಿಗೆ ಹೊರಡಬೇಕು. ಈ ಮಧ್ಯೆ ಚಾಲಕರು ತಮ್ಮ ಏಜೆನ್ಸಿ ಕಛೇರಿಗಳಿಗೆ ತೆರಳಿ ಲೆಕ್ಕಪತ್ರ ನೀಡಬೇಕು. ಇಷ್ಟೆಲ್ಲದರ ಮಧ್ಯೆ ಕೇವಲ ಒಂದರಿಂದ ಎರಡು ಗಂಟೆ ನಿದ್ರೆ ಮಾತ್ರ ಚಾಲಕರಿಗೆ ಸಿಗುತ್ತದೆ.
"ನಾನು 5 ವರ್ಷದಿಂದ ಬಾಂಬೆ-ಮಂಗಳೂರು ಬಸ್ನಲ್ಲಿ ಕೆಲಸ ಮಾಡುತ್ತಿದ್ದು, ನಮಗೆ ಸಿಕ್ಕುವ ಸಂಬಳದಲ್ಲಿ ಕುಟುಂಬ ನಿರ್ವಹಣೆ ಅತ್ಯಂತ ಕಷ್ಟದಾಯಕ; ಜತೆಗೆ ನಿದ್ರೆ ಇರುವುದಿಲ್ಲ. ನಮ್ಮನ್ನು ನಂಬಿ ಬರುವ ಪ್ರಯಾಣಿಕರನ್ನು ಅತ್ಯಂತ ಜಾಗರೂಕತೆಯಿಂದ ಅವರವರ ಸ್ಥಳಗಳಿಗೆ ತಲುಪಿಸುವ ಹೊಣೆ ನಮ್ಮ ಮೇಲಿದೆ. ಆದ್ದರಿಂದ ನಮ್ಮ ಜೀವವನ್ನೆ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದೇವೆ" ಎನ್ನುತ್ತಾರೆ ಚಾಲಕರೊಬ್ಬರು.

ಕೆಟ್ಟ ಚಟಗಳ ದಾಸರು
ಅತ್ಯಂತ ದೂರದ ತ್ರಾಸದಾಯಕ ಪ್ರಯಾಣ ಇರುವುದರಿಂದ ಜೊತೆಗೆ ನಿದ್ರೆ ತಪ್ಪಿಸಲು ಚಾಲಕರು ಗುಟ್ಕಾ, ಪಾನ್ ಮಸಾಲ ಹೀಗೆ ಕೆಟ್ಟ ಚಟಗಳಿಗೆ ದಾಸರಾಗುತ್ತಾರೆ. ಇದರಿಂದ ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ರಸ್ತೆ ಮಧ್ಯೆ ಬಸ್ಗಳು ಬೇರೆ ವಾಹನಗಳಿಗೆ ಅಪಘಾತವಾದರೆ ಅದರ ನಷ್ಟವನ್ನು ಈ ಚಾಲಕರೇ ಭರಿಸಿ ಕೊಡಬೇಕು. ಇನ್ನು ಚಾಲಕರ ವಿಶ್ರಾಂತಿಗಾಗಿ ಬಸ್ ಕಂಪೆನಿಗಳು ನೀಡುವ ವಸತಿ ವ್ಯವಸ್ಥೆ ಅತ್ಯಂತ ಕೆಟ್ಟದಾಗಿದೆ. ಇಷ್ಟೆಲ್ಲಾ ಕಷ್ಟಗಳಿದ್ದರೂ ಪ್ರಯಾಣಿಕರನ್ನು ಅತ್ಯಂತ ಸುರಕ್ಷಿತವಾಗಿ ತಮ್ಮ ತಮ್ಮ ಸ್ಥಳಗಳಿಗೆ ತಲುಪಿಸುವ ಚಾಲಕರು ಗ್ರೇಟ್ ಅಲ್ವೇ.












Click it and Unblock the Notifications