ಮಂಗಳೂರಿನಲ್ಲಿ ಸಚಿವ ಯುಟಿ ಖಾದರ್ ಕಾರು ಅಪಘಾತ
ಮಂಗಳೂರು, ಫೆ. 23 : ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಕಾರು ಮಂಗಳೂರಿನಲ್ಲಿ ಅಪಘಾತಕ್ಕೀಡಾಗಿದೆ. ಕಾರು ಚಾಲಕ ಮೋಹನ್ ಅಪಘಾತದಲ್ಲಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹೇರಳಕಟ್ಟೆ ಬಳಿ ಸೋಮವಾರ ತಡರಾತ್ರಿ 12.45ರ ಸುಮಾರಿಗೆ ಈ ಅಪಘಾತ ನಡೆದಿದೆ. ಅಪಘಾತ ಸಂಭವಿಸುವಾಗ ಸಚಿವ ಯು.ಟಿ.ಖಾದರ್ ಕಾರಿನಲ್ಲಿಯೇ ಪ್ರಯಾಣಿಸುತ್ತಿದ್ದರು. [ಸಚಿವ ಯುಟಿ ಖಾದರ್ ಮಾನವೀಯತೆಗೆ ಸಲಾಂ]

ಅಪಘಾತದಿಂದಾಗಿ ಕಾರು ಜಖಂಗೊಂಡಿದ್ದು, ಕಾರು ಚಾಲಕ ಮೋಹನ್ ಗಾಯಗೊಂಡಿದ್ದಾರೆ. ಮೋಹನ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. [ಸಚಿವ ಖಾದರ್ ಉಳಿದವರಿಗೆ ಮಾದರಿಯಾಗಲಿ]
ಮಂಜನಾಡಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಂಗಳೂರಿಗೆ ಮರಳುವಾಗ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಕಮರಿಗೆ ಉರುಳಿ ಬಿದ್ದಿದೆ. ಕ್ರೇನ್ ಸಹಾಯದಿಂದ ಕಾರನ್ನು ಮೇಲಕ್ಕೆ ಎತ್ತಲಾಗಿದೆ.

ಮಾನವೀಯತೆ ಮೆರೆದಿದ್ದರು : ಹಲವು ಬಾರಿ ಅಪಘಾತದಲ್ಲಿ ಗಾಯಗೊಂಡವರಿಗೆ ಸಚಿವ ಯು.ಟಿ.ಖಾದರ್ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದರು. ಭಾನುವಾರ ಮುಂಜಾನೆ ಸಹ ಮಂಗಳೂರಿನಲ್ಲಿ ಅಪಘಾತದಲ್ಲಿ ಗಾಯಗೊಂಡವರನ್ನು ಸಚಿವರ ಸಿಬ್ಬಂದಿ ರಕ್ಷಿಸಿದ್ದರು. ಬೆಂಗಳೂರಿನಲ್ಲಿ ಅಪಘಾತದಲ್ಲಿ ಗಾಯಗೊಂಡವರನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕಳುಹಿಸಿ ಸಚಿವರು ಆಟೋದಲ್ಲಿ ತೆರಳಿದ್ದ ಘಟನೆಯೂ ಕೆಲವು ತಿಂಗಳ ಹಿಂದೆ ನಡೆದಿತ್ತು.












Click it and Unblock the Notifications