ರಮಾನಾಥ್ ರೈ ಕುಂಭಕರ್ಣ ವಂಶಸ್ಥ: ಹರಿಕೃಷ್ಣ ಬಂಟ್ವಾಳ್ ವ್ಯಂಗ್ಯ
ಮಂಗಳೂರು, ಜುಲೈ 04: "ರಾಜಕೀಯವಾಗಿ ಅಧಿಕಾರ ಕಳೆದುಕೊಂಡು ಮಾಜಿ ಸಚಿವ ರಮಾನಾಥ್ ರೈ ಬಾಯಿಗೆ ಬಂದದ್ದನ್ನು ಬಡಬಡಿಸುತ್ತಿದ್ದಾರೆ. ಅಧಿಕಾರದಲ್ಲಿ ಇದ್ದಷ್ಟು ದಿನ ರಮಾನಾಥ್ ರೈ ದಕ್ಷಿಣ ಕನ್ನಡ ಜಿಲ್ಲೆಗೆ ಮಹಾಮಾರಿಯಂತಿದ್ದರು," ಎಂದು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲು ಸೊಂಬೇರಿ ಸಂಸದ ಎಂದು ಹೇಳಿಕೆ ನೀಡಿದ್ದ ರಮಾನಾಥ ರೈ ವಿರುದ್ಧ ವಾಗ್ದಾಳಿ ನಡೆಸಿದರು. "ಅಧಿಕಾರವಿಲ್ಲದೆ ರಮಾನಾಥ ರೈ, ನೀರಿನಿಂದ ಹೊರತೆಗೆದ ಮೀನಿನಂತೆ ಒದ್ದಾಡುತ್ತಿದ್ದಾರೆ," ಎಂದು ಅವರು ವ್ಯಂಗ್ಯವಾಡಿದರು.
ರಮಾನಾಥ್ ರೈ ಎಲ್ಲಾ ವಿಚಾರ ಕರಗತ ಮಾಡಿಕೊಂಡಿರುವ ಸರ್ವಜ್ಞ: ನಳಿನ್ ವ್ಯಂಗ್ಯ
"ಈಗ ರೈಗೆ ಮನೆಯಲ್ಲಿ ಜನ ಇಲ್ಲ. ಕಾರಿನಲ್ಲಿ ಅವರೊಂದಿಗೆ ತಿರುಗಲು ಜನರಿಲ್ಲ. ಈ ಹಿನ್ನೆಲೆಯಲ್ಲಿ ತನ್ನ ಅಸ್ತಿತ್ವ ತೋರಿಸಲು ರೈ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲಿಗೆ ರಮಾನಾಥ್ ರೈ ಅವರೇ ಕಾರಣ," ಎಂದು ಇದೇ ಸಂದರ್ಭದಲ್ಲಿ ಬಂಟ್ವಾಳ್ ಆರೋಪಿಸಿದರು.
"ಸಿದ್ದರಾಮಯ್ಯ ಅವರ ಆಡಳಿತದ ಅವಧಿ 'ಅಭಿವೃದ್ಧಿಯ ಸ್ವರ್ಣಯುಗ' ಎಂದು ರಮಾನಾಥ್ ರೈ ಹೇಳಿಕೆ ನೀಡಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ಆಡಳಿತಾವಧಿ 'ಮರಣ ಯುಗ' ಎಂದು ಹರಿಕೃಷ್ಣ ಬಂಟ್ವಾಳ್ ಕಿಡಿಕಾರಿದರು. ವಿಧಾನ ಸೌಧದಲ್ಲಿ ಸದಾ ನಿದ್ದೆ ಮಾಡುತ್ತಿದ್ದ ರಮಾನಾಥ್ ರೈ ಕುಂಭಕರ್ಣನ ವಂಶಸ್ಥ. ಇಂತಹ ಸೋಂಬೇರಿ ವ್ಯಕ್ತಿ ಸದಾ ಚಟುವಟಿಕೆಯಲ್ಲಿರುವ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಹೇಳಿಕೆ ನೀಡುವುದು ಹಾಸ್ಯಾಸ್ಪದ," ಎಂದು ಅವರು ಅಭಿಪ್ರಾಯಪಟ್ಟರು.