ಗುರುಪುರ ಸೇತುವೆ: ದುರಂತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳುವುದೇ ಜಿಲ್ಲಾಡಳಿತ?
ಮಂಗಳೂರು, ಜೂನ್.26: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮುಂಗಾರು ಮಳೆಗೆ ಬಂಟ್ವಾಳ ಮತ್ತು ಮಂಗಳೂರು ತಾಲೂಕುಗಳ ಗಡಿಭಾಗ ಮುಲ್ಲರಪಟ್ನ ಎಂಬಲ್ಲಿ ಸೇತುವೆ ಕುಸಿದು ಬಿದ್ದಿದೆ. ಮತ್ತೊಂದು ಸೇತುವೆ ಇದೇ ಪರಿಸ್ಥಿತಿಯಲ್ಲಿದೆ.
ಸಂಪೂರ್ಣ ಶಿಥಿಲಗೊಂಡಿರುವ ಈ ಸೇತುವೆ ಯಾವಾಗ ಕುಸಿದು ಬೀಳಲಿದೆ ಎಂಬ ಆತಂಕದಲ್ಲಿ ಸಾರ್ವಜನಿಕರು, ವಾಹನ ಸವಾರರು ದಿನದೂಡುತ್ತಿದ್ದಾರೆ.
ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಗುರುಪುರ ಸೇತುವೆ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಈ ಸೇತುವೆ ಮೇಲೆ ಜನ ನಡೆದಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಬ್ರಿಟೀಷರ ಕಾಲದಲ್ಲಿ ನಿರ್ಮಾಣ
ಈ ಗುರುಪುರ ಸೇತುವೆ ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾಗಿದ್ದು, ಬ್ರಿಟಿಷರು 1923ರ ಸಮಯದಲ್ಲಿ ಅಂದಿನ ಕಾಲದ ವಾಹನಗಳಿಗನುಸಾರವಾಗಿ ಈ ಸೇತುವೆ ನಿರ್ಮಿಸಿದ್ದರು. ಆ ಕಾಲದಲ್ಲಿ ಈ ಸೇತುವೆ ಮೇಲೆ 100 ಗಾಡಿಗಳು ಓಡಿದರೆ ಹೆಚ್ಚು. ಆದರೆ ಈಗ ದಿನಕ್ಕೆ 10 ರಿಂದ 14 ಸಾವಿರ ವಾಹನಗಳು ಈ ಸೇತುವೆ ಮೇಲೆ ಸಂಚರಿಸುತ್ತವೆ.
ಗುರುಪುರ ಸೇತುವೆ ತೀರಾ ಇಕ್ಕಟ್ಟಿನ ಸೇತುವೆಯಾಗಿದ್ದು, ಒಂದು ಬಾರಿಗೆ ಕೇವಲ ಒಂದು ಕಡೆಯಿಂದ ಮಾತ್ರ ವಾಹನಗಳು ಚಲಿಸಬಹುದಾಗಿದೆ. ಇದರಿಂದಾಗಿ ಇಲ್ಲಿ ನಿತ್ಯವೂ ಟ್ರಾಫಿಕ್ ಜಾಮ್ ಮಾಮೂಲಾಗಿದ್ದು, ಅದರಲ್ಲೂ ಬೆಳಗ್ಗೆ ಮತ್ತು ಸಂಜೆ ಇಲ್ಲಿ ವಾಹನ ಸವಾರರ ಪರದಾಟ ಮಾಮೂಲಿಯಾಗಿದೆ.

ಸಂಪೂರ್ಣ ಶಿಥಿಲಗೊಂಡಿರುವ ಸೇತುವೆ
ಈ ಸೇತುವೆ ಇಕ್ಕೆಲಗಳಲ್ಲಿರುವ ತಡೆ ಬೇಲಿಗಳು ಬೆಂಡಾಗಿದ್ದು, ಕೆಲವು ಕಡೆಗಳಲ್ಲಿ ಮುರಿದು ಬಿದ್ದಿವೆ. ಸೇತುವೆ ಅಡಿ ಭಾಗದಲ್ಲಿ ಹಾಕಿದ್ದ ಬೀಮ್ ಗಳು ಶಿಥಿಲಗೊಂಡಿದ್ದು, ಸೇತುವೆಯ ಅಪಾಯದ ತಿವ್ರತೆಯನ್ನು ಸೂಚಿಸುತ್ತಿದೆ.
ಈ ಸೇತುವೆ ಮೇಲೆ ಘನವಾಹನಗಳು ಸಂಚಾರ ಮಾಡುವಾಗ ಸೇತುವೆ ಕಂಪನವಾಗುತ್ತಿದ್ದು, ಸ್ಥಳೀಯರು ಆತಂಕದಲ್ಲೇ ಈ ಸೇತುವೆ ಮೇಲೆ ಸಂಚರಿಸುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿದೆ ಸೇತುವೆ
ಈ ಗುರುಪುರ ಸೇತುವೆ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಮಂಗಳೂರು- ಮೂಡಬಿದಿರೆ-ಕಾರ್ಕಳ-ಬಿ.ಸಿ ರೋಡ್ ನಗರಗಳ ಸಂಪರ್ಕ ಕೊಂಡಿಯಾಗಿದೆ.
ಈ ಸೇತುವೆಯನ್ನು ಲಕ್ಷಾಂತರ ಮಂದಿ ಅವಲಂಭಿಸಿದ್ದು, ಶಿಥಿಲಗೊಂಡಿರುವ ಈ ಸೇತುವೆಯಲ್ಲಿ ಒಂದು ವೇಳೆ ವಾಹನ ಸಂಚರಿಸುವಾಗಿ ಯಾವುದೇ ಅವಘಡ ನಡೆದರೆ ಇದೊಂದು ಘೋರ ದುರಂತವಾಗಲಿದ್ದು, ನೂರಾರು ಜನರ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇದೆ.
ಒಂದು ವೇಳೆ ಈ ಸೇತುವೆ ಕುಸಿದು ಬಿದ್ದರೆ ಮಂಗಳೂರು ಸಂಪರ್ಕಿಸುವ ಪ್ರಮುಖ ರಸ್ತೆಯೇ ಇಲ್ಲದಂತಾಗಿ ಬಿಡುತ್ತಿದೆ. ಮಂಗಳೂರನ್ನು ಸಂಪರ್ಕಿಸಲು ಹಲವು ಸಮಯದವರೆಗೆ ಸುತ್ತಿಬಳಿಸಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

ಹಿಂದೇಟು ಹಾಕುತ್ತಿರುವ ಸಾರ್ವಜನಿಕರು
ನಿನ್ನೆ ಮುಲ್ಲರಪಟ್ನ ಎಂಬಲ್ಲಿ ಸೇತುವ ಕುಸಿದ ಬೆನ್ನಲೆ ಈಗ ಈ ಸೇತುವ ಮೇಲೆ ಸಂಚಾರಕ್ಕೆ ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ. ಮುಲ್ಲರಪಟ್ನ ಸೇತುವೆ ಮೇಲೆ ಸಂಚಾರ ಕಡಿಮೆ ಇರುವುದರಿಂದ ಯಾವುದೇ ಸಾವು ನೋವು ಸಂಭಿಸಿಲ್ಲ.
ಆದರೆ ಈ ಗುರುಪುರ ಸೇತುವೆ ಯಾವಾಗಲೂ ವಾಹನದಟ್ಟಣೆಯಿಂದ ಇರುವುದರಿಂದ ಇಲ್ಲಿ ಅವಘಡ ನಡೆದರೆ ಘೋರ ದುರಂತ ಸಂಭವಿಸಬಹುದಾಗಿದೆ. ಈ ಹಿನ್ನಲೆಯಲ್ಲಿ ದೊಡ್ಡ ಅವಘಡಗಳು ನಡೆಯುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ.












Click it and Unblock the Notifications