ಮಂಗಳೂರು ಚರ್ಚ್ ಗಳಲ್ಲಿ ನವೆಂಬರ್ 25ರಂದು ಗ್ರೀನ್ ಸಂಡೇ ಆಚರಣೆ
ಮಂಗಳೂರು, ನವೆಂಬರ್. 22: ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದಲ್ಲಿ ಪರಿಸರ ಉಳಿವಿಗೆ ವಿಶೇಷ ಅಭಿಯಾನವನ್ನು ಆರಂಭಿಸಲಾಗಿದೆ. ನೂತನವಾಗಿ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಡಾ.ಪೀಟರ್ ಪಾವ್ಲ್ ಸಲ್ಡಾನಾ ಈ ವಿಶೇಷ ಅಭಿಯಾನ ಆರಂಭಿಸಿದ್ದಾರೆ.
ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದಲ್ಲಿರುವ ಎಲ್ಲ 124 ಚರ್ಚ್ ಗಳಲ್ಲಿ ನವೆಂಬರ್. 25ರ ಆದಿತ್ಯವಾರದಂದು ಬೆಳಗ್ಗಿನ ಪೂಜೆಯಲ್ಲಿ ಪ್ರಕೃತಿಯ ಆರಾಧನೆ ನಡೆಯಲಿದೆ. ಆರಾಧನೆಯ ಪ್ರಮುಖ ಭಾಗವಾಗಿ ಯೇಸು ಕ್ರಿಸ್ತ ಕಿಂಗ್ ಆಫ್ ಯೂನಿವರ್ಸ್ ಎನ್ನುವ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ.
ಮಂಗಳೂರು ಧರ್ಮ ಪ್ರಾಂತ್ಯದ ವ್ಯಾಪ್ತಿಯಲ್ಲಿರುವ 650 ಕ್ಕೂ ಅಧಿಕ ಕ್ರೈಸ್ತ ವಿದ್ಯಾಸಂಸ್ಥೆ ಆಸ್ಪತ್ರೆ ಸೇರಿದಂತೆ ಎಲ್ಲ ಚರ್ಚ್ ಗಳಲ್ಲಿ ಸಾಗುವಾನಿ ಗಿಡವನ್ನು ನೆಡುವ ಮೂಲಕ ಪ್ರಕೃತಿ ರಕ್ಷಣೆ ಚರ್ಚ್ ಗಳು ಮುಂದಾಗಲಿವೆ.

ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ನೂತನ ಬಿಷಪ್ ರಾಗಿ ಡಾ.ಪೀಟರ್ ಪಾವ್ಲ್ ಸಲ್ಡಾನಾ ತಮ್ಮ ಬಿಷಪ್ ದೀಕ್ಷೆಯ ಸಂದರ್ಭದಲ್ಲಿ ಗಿಡಗಳನ್ನು ನೆಡುವ ಮೂಲಕ ಪ್ರಕೃತಿ ಉಳಿಸಿ ಬೆಳೆಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಅದರ ಮುಂದುವರಿದ ಭಾಗವಾಗಿ ನವೆಂಬರ್ 25 ರನ್ನು ಗ್ರೀನ್ ಸಂಡೇ ಎನ್ನುವ ಮೂಲಕ ಆಚರಣೆ ನಡೆಯಲಿದೆ.ವಿಶೇಷವಾಗಿ ಈ ಭಾನುವಾರ ಚರ್ಚ್ ಗಳಲ್ಲಿ ಪ್ರಕೃತಿ ಆರಾಧನೆ ಗಿಡ ನೆಡುವ ಕಾರ್ಯಕ್ರಮ ಜೊತೆಯಲ್ಲಿ ಸಹಿ ಆಂದೋಲನ ನಡೆಯಲಿದೆ .

'ಪರಿಸರ ರಕ್ಷಣೆ ನನ್ನ ಜವಾಬ್ದಾರಿ' ಕುರಿತು ಕನ್ನಡ ,ಇಂಗ್ಲಿಷ್, ತುಳು, ಕೊಂಕಣಿ ಭಾಷೆಯಲ್ಲಿ ಸ್ಲೋಗನ್ ಗಳನ್ನು ಬರೆಯುವ ಅವಕಾಶ ನೀಡಲಾಗಿದೆ. ಚರ್ಚ್ ಮಟ್ಟದಲ್ಲಿ ಉತ್ತಮ ಸ್ಲೋಗನ್ ಗಳನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ.












Click it and Unblock the Notifications