ಮಂಗಳೂರಿನ ವಿವಾದಿತ ರಸ್ತೆ ನಾಮಕರಣಕ್ಕೆ ಸರಕಾರದಿಂದ ತಡೆಯಾಜ್ಞೆ
ಮಂಗಳೂರು, ಜುಲೈ 2: ಮಂಗಳೂರು ನಗರದ ವಿವಾದಿತ ಲೈಟ್ ಹೌಸ್ ರಸ್ತೆ ನಾಮಕರಣಕ್ಕೆ ಸರಕಾರ ತಡೆ ನೀಡಿದೆ.
ಲೈಟ್ಹೌಸ್ ಮಾರ್ಗದಿಂದ ಕ್ಯಾಥೋಲಿಕ್ ಕ್ಲಬ್ ವರೆಗಿನ ರಸ್ತೆಗೆ 'ಮುಲ್ಕಿ ಸುಂದರ ರಾಮ ಶೆಟ್ಟಿ ರಸ್ತೆ' ಎಂದು ನಾಮಕರಣ ಮಾಡಲು ಸರಕಾರ ಆದೇಶಿಸಿತ್ತು. ಇದಕ್ಕೆ ಅಲೋಶಿಯಸ್ ಕಾಲೇಜು ರಸ್ತೆ ಎಂಬುದಾಗಿ ನಾಮಕರಣ ಮಾಡುವಂತೆ ಒತ್ತಾಯ ಕೇಳಿ ಬಂದಿದ್ದಲ್ಲದೆ ಶನಿವಾರ ಸಂತ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆಯೂ ನಡೆದಿತ್ತು. ಇದೀಗ ರಸ್ತೆ ನಾಮಮಕರಣಕ್ಕೆ ಸರಕಾರ ತಡೆ ನೀಡಿದೆ.

ಮೇ 24ರಂದು ಹೊರಡಿಸಿರುವ ಸರಕಾರದ ಆದೇಶಕ್ಕೆ ಸಂಬಂಧಿಸಿ ಶಾಸಕ ಜೆ.ಆರ್.ಲೋಬೊ ಅವರು ಸರಕಾರಕ್ಕೆ ಪತ್ರ ಬರೆದಿದ್ದರು. ಸರಕಾರದ ಈ ಆದೇಶದಿಂದ ನಗರದ ಜನರಿಗೆ ನೋವುಂಟಾಗಿದೆ. ಇದರಿಂದಾಗಿ ನಗರದಲ್ಲಿ ಅಶಾಂತಿಗೆ ಕಾರಣವಾಗುವ ಸಾಧ್ಯತೆಯನ್ನು ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.
ಸರಕಾರದ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ (ಪ್ರ) ಎಲ್.ನಾಗೇಶ್ ಶಾಸಕ ಜೆ.ಆರ್.ಲೊಬೋ ಅವರು ಬರೆದಿರುವ ಪತ್ರಕ್ಕೆ ಸಂಬಂಧಿಸಿ ಈ ತಡೆಯಾಜ್ಞೆ ನೀಡಿದ್ದಾರೆ.
ಎಲ್.ನಾಗೇಶ್ ಅವರು ಮೇ 24ರ ಸರಕಾರದ ಆದೇಶಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಡೆಯಾಜ್ಞೆ ನೀಡಿ ಯಥಾ ಸ್ಥಿತಿ ಕಾಪಾಡುವಂತೆ ಜಿಲ್ಲಾಧಿಕಾರಿಯವರಿಗೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಇದರ ನಡುವೆ ರಸ್ತೆಗೆ 'ಸುಂದರ ರಾಮ ಶೆಟ್ಟಿ ರಸ್ತೆ' ಎಂದು ನಾಮಕರಣ ಮಾಡಲು ಇಂದು ಬೆಳಗ್ಗೆ 10 ಗಂಟೆಗೆ ವಿಜಯ ಬ್ಯಾಂಕ್ ನ ಪ್ರಾದೇಶಿಕ ಕಚೇರಿ ಎದುರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಸರ್ಕಾರ ತಡೆಯಾಜ್ಞೆ ನೀಡಿದ ಕಾರಣ ಕಾರ್ಯಕ್ರಮವನ್ನು ರದ್ದುಮಾಡಲಾಯಿತು.
ಈ ಕುರಿತು ಪ್ರಕಟಣೆ ಹೊರಡಿಸಿರುವ ಜಿಲ್ಲಾಡಳಿತ, "ರಾಜ್ಯ ಸರಕಾರದ ಪತ್ರದ ಪ್ರಕಾರ ಮಹಾನಗರ ಪಾಲಿಕೆ ವ್ಯಾಪ್ತಿಯ ಅಂಬೇಡ್ಕರ್ ವೃತ್ತದಿಂದ ಲೈಟ್ ಹೌಸ್ ವರೆಗೆ ರಸ್ತೆಗೆ ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆ ಎಂದು ಮರು ನಾಮಕರಣ ಮಾಡುವುದಕ್ಕೆ ಆದೇಶ ಹೊರಡಿಸಲಾಗಿತ್ತು. ಆದರೆ ಸದರಿ ರಸ್ತೆಯು ಈ ಹಿಂದೆ 'ಸಂತ ಅಲೋಶಿಯಸ್ ಕಾಲೇಜ್ ರಸ್ತೆ' ಎಂದು ಹಲವಾರು ವರ್ಷಗಳಿಂದ ವಾಡಿಕೆಯಲ್ಲಿದೆ. ಸಂತ ಅಲೋಶಿಯಸ್ ಕಾಲೇಜು 137 ವರ್ಷಗಳಿಂದ ಮಂಗಳೂರು ನಗರದಲ್ಲಿ ಕ್ಯಾಥೊಲಿಕ್ ಧರ್ಮಗುರುಗಳ ಮುಖಾಂತರ ವಿದ್ಯಾ ಸೇವೆಯನ್ನು ಜಾತಿಭೇದವಿಲ್ಲದೆ ಮಾಡಿಕೊಂಡು ಬರುತ್ತಿದೆ. ಈ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ರಾಷ್ಟ್ರಿಯ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರಿತಿಸಿಕೊಂಡಿದ್ದು ಈ ರಸ್ತೆಗೆ ಮರು ನಾಮಕರಣ ಮಾಡುವ ಮುನ್ನ ಸಾರ್ವಜನಿಕರ ಅಥವಾ ಕಾಲೇಜಿನ ಗಮನಕ್ಕೆ ಆಗಲಿ ಬಂದಿರುವುದಿಲ್ಲ," ಎಂದು ಹೇಳಿದೆ.
ಸರಕಾರದ "ಪ್ರಸ್ತುತ ಆದೇಶದಿಂದ ಬಹುತೇಕ ನಗರದ ಜನರಿಗೆ ನೋವುಂಟಾಗಿದೆ. ಇದರಿಂದ ನಗರದಲ್ಲಿ ಅಶಾಂತಿಯ ವಾತಾವರಣ ಉಂಟಾಗಿದ್ದು ವಿಜಯ ಬ್ಯಾಂಕ್ ನೌಕರರು ಸಂಘ ಆಯೋಜಿಸಲಾಗಿರುವ ಮರುನಾಮಕರಣ ಅದೇಶಕ್ಕೆ ತಡೆ ನೀಡಲಾಗಿದೆ. ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪರಿಹಾರ ಹುಡುಕಲು ಸೂಚಿಲಾಗಿದೆ," ಎಂದು ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications