ನೀರು ಕೇಳಿದ್ರು, ಸರ್ಕಾರಿ ಉದ್ಯೋಗಿ ಮನೆ ದೋಚಿದ್ರು
ಮಂಗಳೂರು, ಜುಲೈ 13 : ಕುಡಿಯಲು ನೀರು ಕೊಡಿ ಎಂದು ಮನೆಗೆ ಬಂದ ದರೋಡೆಕೋರರ ತಂಡ ಸರ್ಕಾರಿ ಉದ್ಯೋಗಿಯ ಕೈ ಕಾಲು ಕಟ್ಟಿಹಾಕಿ 35 ಸಾವಿರ ಹಣ ಮತ್ತು ಚಿನ್ನಾಭರಣ ದೋಚಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸ್ಟೇನೊಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ ರಾಧಾ (58) ಅವರ ಮನೆಗೆ ಶನಿವಾರ ತಡರಾತ್ರಿ ನುಗ್ಗಿದ ಗುಂಪು ದರೋಡೆ ಮಾಡಿದೆ. ಬೊಂದೇಲ್ನಲ್ಲಿರುವ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಒಂಟಿಯಾಗಿ ರಾಧಾ ಅವರು ವಾಸಿಸುತ್ತಿದ್ದರು.

ನೀರು ಕೇಳಿ ಬಾಗಿಲು ತೆಗೆಸಿದರು : ಒಟ್ಟು 5 ಮಂದಿಯ ತಂಡ ಈ ದರೋಡೆ ಮಾಡಿದೆ. ಮನೆಗೆ ಆಗಮಿಸಿದ ತಂಡದವರು ಮೊದಲು ನೀರು ಕೊಡುವಂತೆ ಕೇಳಿದ್ದಾರೆ. ಆದರೆ, ರಾಧಾ ಅವರು ಬಾಗಿಲು ತೆರೆಯಲು ನಿರಾಕರಿಸಿ ಮನೆಯ ಹೊರಗಡೆ ಬಕೆಟ್ನಲ್ಲಿ ನೀರಿದೆ ಎಂದು ಹೇಳಿದ್ದಾರೆ. [ದರೋಡೆ ಮಾಡಿ ಮತ್ತೆ ಪಂಜರ ಸೇರಿದ ಪಾರಿವಾಳ ಮಂಜ]
ನಮಗೆ ಕುಡಿಯುವ ನೀರು ಬೇಕು ಎಂದು ಬೇಡಿಕೆ ಇಟ್ಟು ಬಾಗಿಲು ತೆರೆಯುವಂತೆ ಮಾಡಿದ ತಂಡ, ಬಾಗಿಲು ತೆರೆದ ತಕ್ಷಣ ಮನೆಗೆ ನುಗ್ಗಿ ರಾಧಾ ಅವರ ಮೇಲೆ ಹಲ್ಲೆ ನಡೆಸಿ, ಕೈ ಕಾಲು ಕಟ್ಟಿಹಾಕಿ ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಮನೆಯಲ್ಲಿದ್ದ 35 ಸಾವಿರ ಹಣ, ಚಿನ್ನದ ಸರ, ಉಂಗುರ, ಮೊಬೈಲ್ ಫೋನ್ ಅನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ರಾಧಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಯ ಬಳಿಕ ಸಹುದ್ಯೋಗಿಯಾದ ತಿಮ್ಮಪ್ಪ ಅವರು ರಾಧಾ ಅವರನ್ನು ರಕ್ಷಿಸಿದ್ದಾರೆ.
ದರೋಡೆಕೋರರ ಹಲ್ಲೆಯಿಂದ ರಾಧಾ ಅವರು ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications