ಮೆಡಿಕಲ್ ಶಾಪ್ ಬಂದ್ ಮುಷ್ಕರಕ್ಕೆ ದಕ್ಷಿಣ ಕನ್ನಡದಲ್ಲಿ ಉತ್ತಮ ಪ್ರತಿಕ್ರಿಯೆ
ಮಂಗಳೂರು, ಸೆಪ್ಟೆಂಬರ್. 28: ಆನ್ ಲೈನ್ ಮೂಲಕ ಔಷಧಿ ಮಾರಾಟ ಹಾಗೂ ಖರೀದಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಇಂದು ಶುಕ್ರವಾರ ಕರೆ ನೀಡಿರುವ ಮೆಡಿಕಲ್ ಶಾಪ್ ಬಂದ್ ಮುಷ್ಕರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕರಾವಳಿಯ ಉಭಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಔಷಧ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಜಿಲ್ಲೆಯ ಒಟ್ಟು 625 ಔಷಧ ಅಂಗಡಿಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಎಲ್ಲಾ ಮೆಡಿಕಲ್ ಶಾಪ್ ಗಳು ಬಂದ್ ಆಗಿವೆ.
ಆದರೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಆಸ್ಪತ್ರೆ, ನರ್ಸಿಂಗ್ ಹೋಂ ನ ಮೆಡಿಕಲ್ ಶಾಪ್ ಗಳು ಇಂದು ತೆರೆದಿವೆ. ಈ ಹಿನ್ನೆಲೆಯಲ್ಲಿ ಜನರಿಗೆ ಔಷಧಗಳ ಖರೀದಿಗೆ ಸಮಸ್ಯೆಯಾಗಿಲ್ಲ.

"ಆನ್ ಲೈನ್ ಮೂಲಕ ಔಷಧಿ ಖರೀದಿ ಹಾಗೂ ಮಾರಾಟ ನಡೆದರೆ ಔಷಧಿಯ ಗುಣಮಟ್ಟ ಹಾಗೂ ಬಳಕೆಯ ವಿಧಾನದ ಬಗ್ಗೆ ಜನರಿಗೆ ಮಾಹಿತಿ ಸಿಗುವುದಿಲ್ಲ. ಅಲ್ಲದೆ ರೋಗಿಗಳ ಆರೋಗ್ಯದ ಮೇಲೆಯೂ ಅದು ಅಡ್ಡ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ.
ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಮನದಟ್ಟು ಮಾಡಿಕೊಡುವ ಉದ್ದೇಶದಿಂದ ಬಂದ್ ಮಾಡಲಾಗಿದೆ" ಎಂದು ದಕ್ಷಿಣ ಕನ್ನಡ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಅಧ್ಯಕ್ಷ ಶ್ರೀಧರ್ ಕಾಮತ್ ತಿಳಿಸಿದ್ದಾರೆ.
ಆದರೆ ಮುಷ್ಕರದ ನಡುವೆ ತುರ್ತು ಸಂದರ್ಭದಲ್ಲಿ ಜನರಿಗೆ ಔಷಧಿ ಒದಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications