ಪಾಕ್, ಸೌದಿಗೆ ಹೋದರೆ ಭಾರತದ ಕಾನೂನು ಅರಿವಾಗುತ್ತದೆ: ಯುಟಿ ಖಾದರ್
ಮಂಗಳೂರು, ಜೂನ್ 6: ಮಂಗಳೂರಿನಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ವಿಧಾನಸಭಾ ವಿಪಕ್ಷ ಉಪನಾಯಕ ಯು. ಟಿ. ಖಾದರ್ ವಿದ್ಯಾರ್ಥಿನಿಯರಿಗೆ ಬುದ್ದಿಮಾತು ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಖಾದರ್ ವಿದ್ಯಾರ್ಥಿನಿಯರ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದಾರೆ.
"ಹಿಜಾಬ್ ವಿದ್ಯಾರ್ಥಿನಿಯರು ಒಮ್ಮೆ ಪಾಕಿಸ್ಥಾನ, ಸೌದಿಯಂತಹ ದೇಶಗಳಿಗೆ ಹೋಗಲಿ. ಆಗ ನಮ್ಮ ದೇಶದ ಮಹತ್ವ ಗೊತ್ತಾಗುತ್ತದೆ. ಇಲ್ಲಿ ಬೇಕಾದ ಹಾಗೆ ಮಾತನಾಡೋದು, ಡಿಸಿಯನ್ನು ಭೇಟಿಯಾಗೋದು, ಪ್ರೆಸ್ ಮೀಟ್ ಎಲ್ಲಾ ಮಾಡಬಹುದು. ಆದರೆ ಅದನ್ನೇ ವಿದೇಶಕ್ಕೆ ಹೋಗಿ ಮಾತನಾಡಲಿ. ಇಲ್ಲಿ ಹುಲಿಯ ಹಾಗೆ ಇದ್ದವರು ಅಲ್ಲಿ ಬೆಕ್ಕಿನ ತರಹ ಆಗುತ್ತಾರೆ. ಆಗ ನಮ್ಮ ದೇಶದ ಕಾನೂನು ನೀಡಿದ ಅವಕಾಶದ ಮಹತ್ವ ಗೊತ್ತಾಗುತ್ತದೆ. ಇಲ್ಲಿ ಸಿಗುವ ಸ್ವಾತಂತ್ರ್ಯದ ಅರಿವು ಆಗುತ್ತದೆ" ಎಂದು ಹಿಜಾಬ್ ವಿದ್ಯಾರ್ಥಿನಿಯರಿಗೆ ಯು. ಟಿ. ಖಾದರ್ ಬುದ್ದಿಮಾತು ಹೇಳಿದ್ದಾರೆ.
ವಾರದ ಹಿಂದೆಯಷ್ಟೇ ನಾವು ನಮ್ಮ ಸಮಸ್ಯೆ ಹೇಳಲು ಹೋಗಿದ್ದಾಗ ಶಾಸಕ ಯು. ಟಿ. ಖಾದರ್ ಕ್ರಿಕೆಟ್ ಆಟದಲ್ಲಿ ಬ್ಯುಸಿ ಇದ್ದರು ಎಂಬ ಹಿಜಾಬ್ ವಿದ್ಯಾರ್ಥಿನಿಯರು ಆರೋಪ ಮಾಡಿದ್ದರು. ಇದನ್ನು ಅಲ್ಲಗಳೆದಿದ್ದ ಖಾದರ್, "ವಿದ್ಯಾರ್ಥಿನಿಯರು ದುರುದ್ದೇಶ ಪೂರಿತವಾಗಿ ಹೇಳಿಕೆ ಕೊಟ್ಟಿದ್ದಾರಾ?, ರಾಜಕೀಯ ಪ್ರೇರಿತವಾಗಿ ಹೇಳಿಕೆ ಕೊಟ್ಟಿದ್ದಾರಾ? ಏನು ಅಂತಾ ವಿಚಾರ ಗೊತ್ತಿಲ್ಲ. ಅವರ ಹೇಳಿಕೆಯ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕಾಗುತ್ತದೆ. ನನಗೆ ಕಾಲ್ ಬಂದಾಗ ನನ್ನಿಂದಾದ ನೆರವು ನೀಡಿದ್ದೇನೆ, ಜಿಲ್ಲಾಧಿಕಾರಿ ಜೊತೆ ಮಾತುಕತೆಗೆ ಸಹಾಯ ಮಾಡಿದ್ದೇನೆ" ಎಂದಿದ್ದರು.

ನಮ್ಮ ಕರೆಗೆ ವಿದ್ಯಾರ್ಥಿಯರು ಸ್ಪಂದಿಸಲಿಲ್ಲ
ಹಿಜಾಬ್ ವಿದ್ಯಾರ್ಥಿನಿಯರು ತಮ್ಮ ಹೋರಾಟಕ್ಕೆ ಮುಸ್ಲಿಂ ಧರ್ಮದ ಮುಖಂಡರ ಸಹಾಯ ಕೇಳಿದ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಯು. ಟಿ. ಖಾದರ್, "ದೇಶದ ಕಾನೂನಿನ ಪ್ರಕಾರವಾಗಿ ನಾನು ಅವರಿಗೆ ಸಹಾಯ ಮಾಡಿದ್ದೇನೆ. ಶಿಕ್ಷಣ ಎಲ್ಲರಿಗೂ ಪ್ರಮುಖವಾಗಿದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯ ಬಹಳಷ್ಟಿದೆ. ವಿದ್ಯಾರ್ಥಿನಿಯರಿಗೆ ಕಾನೂನು ವ್ಯಾಪ್ತಿಯಲ್ಲಿ ಯಾವೆಲ್ಲಾ ಸಹಕಾರ ಮಾಡಬಹುದು, ಅದನ್ನು ನಾನು ಮಾಡಿದ್ದೇನೆ. ಆ ಬಳಿಕ ವಿದ್ಯಾರ್ಥಿನಿಯರು ನನ್ನ ಕರೆಯನ್ನು ಸ್ವೀಕಾರ ಮಾಡಲಿಲ್ಲ ಕರೆ ಮಾಡಿದ ತಕ್ಷಣ ಕರೆಯನ್ನು ಕಟ್ ಮಾಡಿದರು. ಕಚೇರಿಯಿಂದ ಕರೆ ಮಾಡಿಸಿದರೆ ಯಾವುದೇ ಸ್ಪಂದನೆ ನೀಡಲಿಲ್ಲ. ಹಾಗಾಗಿ ಅವರ ಸಮಸ್ಯೆ ಬಗೆಹರಿದಿರಬಹುದು ಎಂದು ಭಾವಿಸಿದೆ" ಎಂದು ಯು. ಟಿ. ಖಾದರ್ ಹೇಳಿದ್ದಾರೆ.

ಹೆತ್ತವರು ಮಾತನಾಡಬೇಕು
"ಹಿಜಾಬ್ ಹೋರಾಟನಿರತ ವಿದ್ಯಾರ್ಥಿನಿಯರನ್ನು ಮಾತನಾಡಿಸುವುದು ಅವರ ಹೆತ್ತವರ ಜವಾಬ್ದಾರಿ. ಹೆತ್ತವರು ಮುಂದೆ ಬಂದು ಮಾತನಾಡಬೇಕು, ಮಕ್ಕಳ ಶಿಕ್ಷಣದ ಬಗ್ಗೆ ಗಮನವನ್ನು ಹರಿಸಬೇಕು. ತಮ್ಮ ಮಕ್ಕಳು ಚೆನ್ನಾಗಿ ಓದಲಿ ಎನ್ನುವುದು ಹೆತ್ತವರ ಆಶಯವಾಗಿದೆ. ಆದರೆ ಇದರಲ್ಲಿ ಬೇರೆ ಮೂರನೆಯವರು ಮಧ್ಯಪ್ರವೇಶ ಮಾಡದೇ ಹೆತ್ತವರು ಪ್ರಮುಖವಾಗಿ ಇಲ್ಲಿ ವಿದ್ಯಾರ್ಥಿನಿಯರ ಜೊತೆ ಮಾತನಾಡಬೇಕಾಗಿದೆ" ಎಂದು ಯು. ಟಿ. ಖಾದರ್ ಹೇಳಿದ್ದಾರೆ.

ಬಿಜೆಪಿ ಚಟ್ಟಿಸುಟ್ಟದ್ದನ್ನು ವಿವಾದ ಮಾಡುತ್ತಿದೆ
ಇನ್ನು ಕಾಂಗ್ರೆಸ್ನ ಚಡ್ಡಿ ಹೋರಾಟದ ಬಗ್ಗೆ ಮಾತನಾಡಿದ ಯು. ಟಿ. ಖಾದರ್, "ಕಾಂಗ್ರೆಸ್ ಕಾರ್ಯಕರ್ತರು ಕೇವಲ ಸಾಂಕೇತಿಕವಾಗಿ ಚಡ್ಡಿಯನ್ನು ಸುಟ್ಟು ಪ್ರತಿಭಟನೆ ಮಾಡಿದ್ದಾರೆ. ಆದರೆ ಇದೇ ವಿಚಾರವನ್ನು ಬಿಜೆಪಿ ದೊಡ್ಡದಾಗಿ ಮಾಡಿದೆ. ರಾಷ್ಟ್ರಧ್ವಜಕ್ಕೆ ಅವಮಾನವಾದಾಗ ಬಿಜೆಪಿಯವರಿಗೆ ಈ ಸಮಸ್ಯೆ ಇರಲಿಲ್ಲ. ಗಾಂಧಿಯನ್ನು ಕೊಂದವರನ್ನು ಬಿಜೆಪಿಯವರು ವೈಭವೀಕರಣ ಮಾಡುತ್ತಾರೆ. ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡುತ್ತಾರೆ. ಪಠ್ಯಪುಸ್ತಕದಲ್ಲಿ ಗಾಂಧೀಜಿಯನ್ನು, ಕುವೆಂಪು, ನಾರಾಯಣಗುರು ಅವರನ್ನು, ಬಸವಣ್ಣರಿಗೆ ಅವಮಾನ ಮಾಡುತ್ತಾರೆ. ಆದರೆ ಈ ಯಾವ ವಿಚಾರವೂ ಕೂಡ ಬಿಜೆಪಿಯವರಿಗೆ ದೊಡ್ಡದು ಆಗಿರಲಿಲ್ಲ. ಆ ವಿದ್ಯಾರ್ಥಿಗಳಿಗೆ ಯಾರನ್ನೂ ನೋಯಿಸುವ ಉದ್ದೇಶ ಇರಲಿಲ್ಲ" ಎಂದು ಯು. ಟಿ. ಖಾದರ್ ಸ್ಪಷ್ಟಪಡಿಸಿದರು.

ಧಾರ್ಮಿಕ ಮುಖಂಡರ ಬೆಂಬಲಕ್ಕೆ ಮನವಿ
ಜೂನ್ 3ರಂದು ಹಿಜಾಬ್ಗಾಗಿ ಹೋರಾಟ ಮಾಡುತ್ತಿರುವ ವಿದ್ಯಾರ್ಥಿನಿಯರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಮುಸ್ಲಿಂ ಧಾರ್ಮಿಕ ಮುಖಂಡರಿಗೆ ಮನವಿ ಮಾಡಿದ್ದರು. ನಮಗೆ ವಿವಿ ಕಾಲೇಜಿನಿಂದ ಅನ್ಯಾಯವಾಗುತ್ತಿದೆ. ನಾವು ನಿಯಮದ ಪ್ರಕಾರ ನಡೆದುಕೊಂಡರೂ, ನಮ್ಮನ್ನು ಶೋಷಣ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೆ ಇದಕ್ಕೆಲ್ಲಾ ಕಾರಣ ಎಬಿವಿಪಿ ಕಾರಣ, ಅವರ ಒತ್ತಡದಿಂದಲೇ ಪ್ರಾಂಶುಪಾಲು ಹಿಜಾಬ್ ನಿಷೇಧಿಸಿದ್ದಾರೆ ಎಂದಿದ್ದರು.












Click it and Unblock the Notifications