ಮಂಗಳೂರಿನಲ್ಲಿ ಸಮುದ್ರ ಪಾಲಾದ ಬೆಂಗಳೂರಿನ ಬಾಲಕಿ
ಮಂಗಳೂರು, ಡಿಸೆಂಬರ್ 24: ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಕ್ಷೇತ್ರ ಗಳು ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಮಂಗಳೂರಿಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ಕುಟುಂಬವೊಂದು ಮಂಗಳೂರಿನ ಸೋಮೇಶ್ವರ ಬೀಚ್ ನಲ್ಲಿ ನೀರಾಟದಲ್ಲಿದ್ದಾಗ ನಾಲ್ಕು ವರ್ಷದ ಬಾಲಕಿ ಸಮುದ್ರಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಇಂದು ಸೋಮವಾರ ನಡೆದಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಪ್ರವಾಸಕ್ಕೆ ಆಗಮಿಸಿದ್ದ ಚಿಂತಾಮಣಿ ಕೇತ್ಕರ್, ಶ್ರದ್ದಾ ಕೇತ್ಕರ್ ಮತ್ತು ಅವರ ಮಕ್ಕಳಾದ ಏಳು ವರ್ಷದ ಜಾರ್ಜಿ ಕೇತ್ಕರ್ ಹಾಗೂ ಮೈತ್ರೇಯಿ ಕೇತ್ಕರ್ ಸೋಮೇಶ್ವರ ಸಮುದ್ರಕ್ಕೆ ತೆರಳಿದ್ದರು. ಕುಟುಂಬ ನೀರಾಟದ ಮೋಜಿನಲ್ಲಿದ್ದಾಗ ಸಮುದ್ರ ಸೆಳೆತಕ್ಕೆ ಸಿಲುಕಿಕೊಂಡಿದೆ.
ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ದಾರುಣ ಸಾವು
ಆಗ ನಾಲ್ಕು ವರ್ಷದ ಬಾಲಕಿ ಮೈತ್ರೇಯಿ ಕೇತ್ಕರ್ ಮೃತಪಟ್ಟಿದ್ದಾಳೆ. ಸೋಮೇಶ್ವರ ಬೀಚ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೈಫ್ ಗಾರ್ಡ್ ಸಿಬ್ಬಂದಿಗಳು ಈ ಕುಟುಂಬ ಅಪಾಯದಲ್ಲಿರುವುದನ್ನು ಅರಿತು ಅವರನ್ನು ರಕ್ಷಣೆ ಮಾಡಲು ಹೋಗಿದೆ. ಅಪಾಯದಲ್ಲಿದ್ದ ಮೂವರನ್ನು ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ್ದು, ನಾಲ್ಕು ವರ್ಷದ ಬಾಲಕಿ ಮೈತ್ರೇಯಿ ಕೇತ್ಕರ್ ಳನ್ನು ರಕ್ಷಿಸಲು ಸಾಧ್ಯವಾಗಿಲ್ಲ.