ಕುಸಿಯುತ್ತಿದೆ ಕಸದ ರಾಶಿ, ಮಂದಾರದ 23 ಕುಟುಂಬ ಸ್ಥಳಾಂತರ
ಮಂಗಳೂರು, ಆಗಸ್ಟ್ 13: ಕೊಂಚ ತಣ್ಣಗಾಗಿದ್ದ ಮಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಮತ್ತೆ ಅಬ್ಬರಿಸುತ್ತಿದೆ. ಪ್ರವಾಹ ಪರಿಸ್ಥಿತಿಯಿಂದ ಈಗಷ್ಟೇ ಸುಧಾರಿಸಿಕೊಳ್ಳುತ್ತಿದ್ದ ಜನರಲ್ಲಿ ಮತ್ತೆ ಆತಂಕ ಹೆಚ್ಚಿಸಿದೆ.
ಈ ನಡುವೆ ಮಂಗಳೂರು ಹೊರವಲಯದ ಪಚ್ಚನಾಡಿ ಎಂಬಲ್ಲಿನ ಡಂಪಿಂಗ್ ಯಾರ್ಡ್ ಕುಸಿಯುತ್ತಲೇ ಇದೆ. ಹಸಿರು ಸಿರಿಯಿಂದ ಕಂಗೊಳಿಸುತ್ತಿದ್ದ ಮಂದಾರ ಎಂಬ ಪ್ರದೇಶ ತ್ಯಾಜ್ಯ ರಾಶಿಯಲ್ಲಿ ಸಮಾಧಿಯಾಗುವ ಆತಂಕ ಎದುರಾಗಿದೆ.
ಪುತ್ತೂರಿನ ತೆಂಕಿಲ ದರ್ಖಾಸು ಎಂಬಲ್ಲಿ ಬಿರುಕು ಬಿಟ್ಟ ಭೂಮಿ, ಜನರಲ್ಲಿ ಆತಂಕ
ಭಾರೀ ಮಳೆಗೆ ಪಚ್ಚನಾಡಿ ಡಂಪಿಂಗ್ ಯಾರ್ಡ್ ನಲ್ಲಿ ತ್ಯಾಜ್ಯ ಕುಸಿತವಾಗಿದ್ದು, ಈ ತ್ಯಾಜ್ಯದ ರಾಶಿಯು ಒಂದು ಕಿ.ಮೀ. ನಷ್ಟು ಉದ್ದಕ್ಕೆ ಜಾರಿ ಕೆಳಗೆ ಬಂದಿದೆ. ಈ ಕಸದ ರಾಶಿ ಮತ್ತಷ್ಟು ಕುಸಿಯುವ ಆತಂಕ ವ್ಯಕ್ತವಾಗಿರುವ ಕಾರಣ ಇಲ್ಲಿ ನೆಲೆಸಿದ್ದ ಕುಟುಂಬಗಳು ಮನೆಯನ್ನೇ ಖಾಲಿ ಮಾಡಿ ಸುರಕ್ಷಿತ ಪ್ರದೇಶಕ್ಕೆ ತೆರಳಿದ್ದಾರೆ.
ಸುಮಾರು 23 ಮನೆಯವರಿಗೆ ಸದ್ಯ ಕುಲಶೇಖರದ ಬೈತುರ್ಲಿಯಲ್ಲಿರುವ ಗೃಹಮಂಡಳಿಯ ಫ್ಲ್ಯಾಟ್ ನಲ್ಲಿ ಆಶ್ರಯ ನೀಡಲಾಗಿದೆ. ಇಲ್ಲಿಯ ಮೂರು ಮನೆಗಳು ಈಗಾಗಲೇ ತ್ಯಾಜ್ಯ ರಾಶಿಯೊಳಗೆ ಮರೆಯಾಗಿದ್ದು, ಸುಮಾರು 5 ಸಾವಿರಕ್ಕೂ ಅಧಿಕ ಅಡಿಕೆ-ತೆಂಗಿನ ಮರಗಳು ತ್ಯಾಜ್ಯ ರಾಶಿಗೆ ಆಹುತಿಯಾಗಿವೆ. ಕಳೆದ ವಾರದಿಂದ ಭಾರೀ ಮಳೆಯ ನಡುವೆ ಆರಂಭವಾದ ಈ ಅನಾಹುತ ಇನ್ನೂ ನಿಂತಿಲ್ಲ. ಮಂದಾರದಲ್ಲಿ ತ್ಯಾಜ್ಯ ವ್ಯಾಪಿಸಿದ ಪರಿಣಾಮ ಗಲೀಜು ನೀರು ಇಲ್ಲಿನ ಮುಖ್ಯ ತೋಡುಗಳಲ್ಲಿ ಆವರಿಸಿಕೊಂಡಿದೆ. ಇಲ್ಲಿದ್ದ 3-4 ಬಾವಿ ತ್ಯಾಜ್ಯ ರಾಶಿಯಿಂದ ಮುಚ್ಚಿಹೋಗಿದ್ದು, ಇತರ ಬಾವಿಗಳಿಗೆ ತ್ಯಾಜ್ಯ ನೀರು ಹರಿದು ಸಂಪೂರ್ಣ ಹಾಳಾಗಿವೆ.
2 ತಿಂಗಳು ಚಾರ್ಮಾಡಿ ಘಾಟ್ ಸಂಪರ್ಕ ಕಡಿತ?
ಕುಲಶೇಖರದ ಬೈತುರ್ಲಿಯಲ್ಲಿರುವ ಗೃಹಮಂಡಳಿಯ ಫ್ಲ್ಯಾಟ್ ನಲ್ಲಿ ಆಶ್ರಯ ಪಡೆದಿರುವ ಇಲ್ಲಿಯ 23 ಕುಟುಂಬಗಳಿಗೆ ಶ್ರೀ ಕ್ಷೇತ್ರ ಕುಡುಪುವಿನಿಂದ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಮಳೆ ನಿಂತ ಕೂಡಲೇ ತ್ಯಾಜ್ಯವನ್ನು ವಿಲೇವಾರಿ ಮಾಡುವ ನೆಲೆಯಲ್ಲಿ ನುರಿತರಿಂದ ಸಲಹೆ ಪಡೆಯಲಾಗುತ್ತಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.