ಗಾಂಜಾ ಸಿಗರೇಟ್ ಮಾಫಿಯಾ; ಮಂಗಳೂರಿನಲ್ಲಿ ಸಿಗರೇಟ್ ದಾಸರೇ ಈಗ ಪೊಲೀಸರ ಟಾರ್ಗೆಟ್!
ಮಂಗಳೂರು, ಮಾರ್ಚ್ 11: ಚಿಕ್ಕ ಅಂಗಡಿಯ ಮುಂದೆ ಸ್ಟೈಲ್ ಆಗಿ ಧಮ್ ಎಳೆದು ಚಹಾ ಹೀರುವ ಯುವಕರ ಮೇಲೆ ಮಂಗಳೂರು ಪೊಲೀಸರು ಸದ್ಯ ಹದ್ದಿನ ಕಣ್ಣು ಇಟ್ಟಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಎಳೆಯುವುದು ಅಪರಾಧವೇ ಆದರೂ, ಮಂಗಳೂರಿನಲ್ಲಿ ಮಾತ್ರ ಸಿಗರೇಟ್ ಎಳೆಯುವವರನ್ನು ಹಿಡಿದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಯಾಕೆಂದರೆ ಯುವಕರ ಕೈಯಲ್ಲಿ ಇರುವುದು ಸಿಗರೇಟ್ ಅಲ್ಲ. ಸಿಗರೇಟ್ ತರವೇ ಇರುವ ಗಾಂಜಾ ಸಿಗರೇಟ್.
ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವಂತಿಲ್ಲ. ಆದರೆ ಕಡಲನಗರಿ ಮಂಗಳೂರಿನಲ್ಲಿ ಗಾಂಜಾಕ್ಕಾಗಿಯೇ ಯುವಕರು ಸಿಗರೇಟು ಸೇದುತ್ತಿರುವುದು ಬಹಿರಂಗವಾಗಿದೆ. ಒಂದೂವರೆ ತಿಂಗಳಲ್ಲಿ ಈ ರೀತಿ ಸಿಗರೇಟ್ ಸೇದುತ್ತಿರುವವರ ಮೆಡಿಕಲ್ ಟೆಸ್ಟ್ ಮಾಡಿದಾಗ 60ಕ್ಕೂ ಹೆಚ್ಚು ಯುವಕರು ಅಂದರ್ ಆಗಿದ್ದಾರೆ.
ಅದು ನೋಡುವಾಗ ಯುವಕರು ಸಿಗರೇಟ್ ಸೇದುತ್ತಿರುವಂತೆ ಕಂಡು ಬರುತ್ತದೆ. ಆದರೆ ಅದು ಸಿಗರೇಟ್ ಮಾತ್ರವೇ ಆಗಿರುವುದಿಲ್ಲ. ಬದಲಾಗಿ ಅದರೊಂದಿಗೆ ಗಾಂಜಾ ಕೂಡ ಸೇರಿಸಿ ಸಿಗರೇಟ್ ಸೇದುತ್ತಿರುವುದು ಮಂಗಳೂರಿನಲ್ಲಿ ಗೊತ್ತಾಗಿದೆ. ಸಿಗರೇಟ್ ಸೇದುತ್ತಿರುವ ಯುವಕರ ಪೈಕಿ ಹಲವಾರು ಮಂದಿ ಗಾಂಜಾ ವ್ಯಸನಿಗಳು ಕೂಡ ಆಗಿರುವುದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ.

ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಒಂದೂವರೆ ತಿಂಗಳಿನಲ್ಲಿ ಪೊಲೀಸರು ಈ ರೀತಿ ವಿವಿಧೆಡೆ ಸಿಗರೇಟ್ ಸೇದುತ್ತಿದ್ದ ಯುವಕರನ್ನು ವಿಚಾರಿಸಿ ಅವರನ್ನು ಮೆಡಿಕಲ್ ಟೆಸ್ಟ್ ಮಾಡಿಸಿದಾಗ ಡ್ರಗ್ ಪಾಸಿಟಿವ್ ಕಂಡು ಬಂದಿದೆ. ಹೀಗಾಗಿ ಕೇವಲ ಒಂದೂವರೆ ತಿಂಗಳಿನಲ್ಲೇ ಕೇವಲ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲೇ 50ಕ್ಕೂ ಹೆಚ್ಚು ಎನ್ಡಿಪಿಎಸ್ ಕೇಸ್ ದಾಖಲಾಗಿದ್ದು, 60ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಸ್ತಗಿರಿ ಮಾಡಿದವರಲ್ಲಿ ಗಾಂಜಾ ಸೇವನೆ, ಮಾರಾಟ ಮಾಡಿದವರು ಸಹ ಇದ್ದಾರೆ. ಬಂಧಿತರಿಂದ ಈಗಾಗಲೇ ಗಾಂಜಾ, ಎಂ.ಡಿ.ಎಂ.ಎ ಡ್ರಗ್ ಸಾಗಾಟ ಮಾಡಲು ಬಳಸಿಕೊಂಡ ವಾಹನಗಳನ್ನು ಸಹ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ವ್ಯಸನಿಗಳಲ್ಲಿ ಹೆಚ್ಚಿನವರು 20ರಿಂದ 30 ವರ್ಷದೊಳಗಿನ ಯುವಕರಾಗಿದ್ದು, ಸೇತುವೆ, ಸರ್ಕಾರಿ ಶಾಲೆ, ಮೈದಾನ, ಬಸ್ ಸ್ಟ್ಯಾಂಡ್, ಬೀಚ್ರೋಡ್ಗಳಲ್ಲಿ ಸಿಕ್ಕಿಕೊಂಡಿದ್ದಾರೆ.

ಮಂಗಳೂರಿನ ಮಾದಕ ಲೋಕಕ್ಕೆ ಕೇರಳದ ಲಿಂಕ್ ಮತ್ತೆ ಮತ್ತೆ ಸಾಬೀತಾಗುತ್ತಿದ್ದು, ಕೇರಳದಿಂದ ಅತ್ಯಧಿಕ ಪ್ರಮಾಣದಲ್ಲಿ ಡ್ರಗ್ಸ್ ಸರಬರಾಜು ಆಗುತ್ತಿರುವುದು ಗೊತ್ತಾಗಿದೆ. ಸಿಗರೇಟ್ ಸಿಗುವಲ್ಲೇ ಗಾಂಜಾ ಸಹ ಲಭ್ಯವಾಗುತ್ತಿದ್ದು, ಪೊಲೀಸರು ಈ ರೀತಿಯ ಕೆಫೆ, ಚಾಯ್ ಸ್ಟಾಲ್ಗಳಿಗೆ ದಾಳಿ ನಡೆಸಿ ವ್ಯಸನಿಗಳು, ಮಾರಾಟಗಾರರ ಹೆಡೆಮುರಿ ಕಟ್ಟುತ್ತಿದ್ದಾರೆ.
ಮಾದಕ ದ್ರವ್ಯದ ವಿರುದ್ದ ಮಂಗಳೂರು ಪೊಲೀಸರು ಡ್ರೈವ್ನ್ನು ನಿರಂತರ ಮುಂದುವರಿಸಿದ್ದು, ಇನ್ನಷ್ಟು ಮಾದಕ ಲೋಕದಲ್ಲಿ ಸಕ್ರಿಯರಾಗಿರುವವರು ಅಂದರ್ ಆಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಬದುಕಿನಲ್ಲಿ ಬಾಳಿ ಬದುಕಬೇಕಾದ ಯುವಕರು ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ನಿಜಕ್ಕೂ ದುರಂತವಾಗಿದೆ.












Click it and Unblock the Notifications