ದಕ್ಷಿಣ ಕನ್ನಡದಲ್ಲಿ ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್: ದೂರು ನೀಡಿದ ಬಾಲಕಿ
ಮಂಗಳೂರು, ಅಕ್ಟೋಬರ್ 9: ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದ್ದು, ಇದರ ಮಧ್ಯೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್ ಪ್ರಕರಣ ನಡೆದಿರುವುದು ಶನಿವಾರ ಬೆಳಕಿಗೆ ಬಂದಿದೆ.
ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಅಪ್ರಾಪ್ತೆಯ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪವೊಂದು ಕೇಳಿಬಂದಿದೆ. ಈ ಬಗ್ಗೆ ಸ್ವತಃ ಬಾಲಕಿಯೇ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ಅಲ್ಲದೆ ಐವರು ಕಾಮುಕರ ಹೆಸರನ್ನು ಕೂಡ ತಿಳಿಸಿದ್ದಾಳೆ.
ಬಂಟ್ವಾಳದ ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆ ಎಂಬಲ್ಲಿ ಘಟನೆ ನಡೆದಿದ್ದು, ಕಾಮುಕರು ಬಂಟ್ವಾಳದಿಂದ ಬಾಲಕಿಯನ್ನು ಅಪಹರಿಸಿ ರೂಂ ಒಂದಕ್ಕೆ ಕರೆದೊಯ್ದಿದ್ದಾರೆ. ನಂತರ ಅಲ್ಲಿ ಬಾಲಕಿಗೆ ಮತ್ತು ಬರಿಸುವ ಜ್ಯೂಸ್ ನೀಡಿ ಅತ್ಯಾಚಾರ ಮಾಡಿದ್ದಾರೆ. ಸದ್ಯ ಬಾಲಕಿಯನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನಲ್ಲಿ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಕಿಡ್ನಾಪ್ ಮಾಡಿದ್ದರ ಬಗ್ಗೆ ದೂರು ದಾಖಲಾಗಿದೆ. ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ 16 ವರ್ಷ ವಯಸ್ಸಿನ ವಿದ್ಯಾರ್ಥಿನಿಯನ್ನು ಪರಿಚಿತ ಯುವಕನೊಬ್ಬ ಅಪರಿಚಿತರೊಂದಿಗೆ ಬಂದು ಕಿಡ್ನಾಪ್ ಮಾಡಿದ್ದಾರೆ.
ಐವರು ಆರೋಪಿಗಳು ಬಿಳಿ ಕಾರಿನಲ್ಲಿ ಬಂದು ಕಿಡ್ನಾಪ್ ಮಾಡಿದ್ದು, ಐಪಿಸಿ ಸೆಕ್ಷನ್ 366(A), 376(D), 506 ಮತ್ತು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದೆ.

ಇಬ್ಬರು ಆರೋಪಿಗಳ ಬಂಧನ:
ಕಾಮುಕರ ಪತ್ತೆಗೆ ಪೊಲೀಸರು ಎರಡು ತಂಡಗಳನ್ನು ರಚಿಸಿ ಕಾರ್ಯಾಚರಣೆಗೆ ಇಳಿದಿದ್ದು, ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರು ತಲೆಮರೆಸಿಕೊಂಡಿದ್ದಾರೆ. ಬಾಲಕಿಯ ವೈದ್ಯಕೀಯ ಪರೀಕ್ಷೆಯ ವರದಿ ಬಂದ ಬಳಿಕ ಕೃತ್ಯದ ಹೆಚ್ಚಿನ ವಿವರಗಳು ಲಭ್ಯವಾಗಲಿವೆ.












Click it and Unblock the Notifications