ಮಂಗಳೂರು: ಆರ್ಎಸ್ಎಸ್ ಶಕ್ತಿ ಕೇಂದ್ರ ಸಂಘನಿಕೇತನದ ಗಣೇಶೋತ್ಸವದಲ್ಲಿ ಕ್ರೈಸ್ತ ಮುಖಂಡರು
ಮಂಗಳೂರು, ಸೆಪ್ಟೆಂಬರ್ 22: ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಭಾಗಗಳಲ್ಲಿ ಗಣೇಶೋತ್ಸವ ಸಂಭ್ರಮ ಮುಂದುವರಿದಿದೆ. ಧರ್ಮ-ಸಂಸ್ಕೃತಿಯ ಶಕ್ತಿ ಕೇಂದ್ರವಾಗಿರುವ ಸಂಘನಿಕೇತನದಲ್ಲಿ ಅದ್ಧೂರಿಯಾಗಿ ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ.
ಗಣೇಶ ಚತುರ್ಥಿ ಕೇವಲ ಹಿಂದೂಗಳ ಉತ್ಸವ ಮಾತ್ರವಾಗಿರದೇ ಸರ್ವ ಧರ್ಮಿಯರೂ ಸೇರಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಇದೀಗ ಆರ್ಎಸ್ಎಸ್ನ ದಕ್ಷಿಣ ಪ್ರಾಂತ ಶಕ್ತಿ ಕೇಂದ್ರ ಸಂಘನಿಕೇತನದ ಗಣೇಶೋತ್ಸವ ಸರ್ವ ಧರ್ಮ ಸಮನ್ವಯತೆಗೆ ಸಾಕ್ಷಿಯಾಗಿದೆ.

ಕರಾವಳಿ ಕೋಮುಸೂಕ್ಷ್ಮ ಪ್ರದೇಶವೆಂದು ಬ್ರ್ಯಾಂಡ್ ಆಗಿದೆ. ಇಲ್ಲಿ ಸಾಕಷ್ಟು ಕೋಮುಸಾಮರಸ್ಯದ ಪ್ರಸಂಗಗಳು ನಡೆಯುತ್ತಲೇ ಇರುತ್ತದೆ. ಆದರೆ ಕೋಮುಸೂಕ್ಷ್ಮವೆಂಬ ಹಣೆಪಟ್ಟಿಯಿಂದ ಇಲ್ಲಿನ ಸೌಹಾರ್ದತೆ ಬೆಳಕಿಗೆ ಬರುವುದೇ ಇಲ್ಲ. ನಗರದ ಸಂಘನಿಕೇತನದ ಗಣೇಶೋತ್ಸವ ಇಂತಹ ಕೋಮುಸೌಹಾರ್ದತೆಯನ್ನು ಎತ್ತಿ ಹೊಡಿದಿದೆ.
ಹಿಂದೂಗಳು ಶ್ರದ್ಧಾಭಕ್ತಿಯಿಂದ ಪೂಜಿಸುವ ಗಣಪತಿ ದೇವರಿಗೆ ಕ್ರೈಸ್ತ ಬಾಂಧವರು ಪೂಜೆ ಸಲ್ಲಿಸಿದ ಅಪರೂಪದ ಘಟನೆ ಮಂಗಳೂರಿನ ಸಂಘನಿಕೇತನದಲ್ಲಿ ನಡೆದಿದೆ. ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ಟಿಲೀನೊ ನೇತೃತ್ವದಲ್ಲಿ ಕ್ರೈಸ್ತ ಮುಖಂಡರು ಗಣೇಶೋತ್ಸವದಲ್ಲಿ ಭಾಗಿಯಾಗಿದ್ದಾರೆ.
ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸದಸ್ಯರು ಸಾಮರಸ್ಯ ಹಾಗೂ ಸೌಹಾರ್ದತೆಯ ಗಣೇಶೋತ್ಸವದ ಭೇಟಿ ಕಾರ್ಯಕ್ರಮವನ್ನು 2007ರಿಂದ ನಡೆಸಿಕೊಂಡು ಬರುತ್ತಿದೆ. ಅದರಂತೆ ಈ ಬಾರಿಯೂ ಈ ವೇದಿಕೆಯ ಸದಸ್ಯರು ಸಂಘನಿಕೇತನಕ್ಕೆ ಭೇಟಿ ನೀಡಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸಂಘನಿಕೇತನದಲ್ಲಿ ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ಈ ಬಾರಿ 76ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯುತ್ತಿದೆ. ಈ ಗಣಪನ ಭೇಟಿಗೆ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಗಣ್ಯ ಕ್ರೈಸ್ತ ಬಾಂಧವರು ಭೇಟಿ ನೀಡಿ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಸಂಘನಿಕೇತನದಿಂದ ಕೈಸ್ತ ಬಾಂಧವರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಆ ಬಳಿಕ ಗಣೇಶೋತ್ಸವದ ಆಯೋಜಕರು ಹಾಗೂ ಕ್ರೈಸ್ತ ಬಾಂಧವರು ಜೊತೆಯಾಗಿ ಕುಳಿತು ಉಪಹಾರ ಸೇವಿಸಿದರು. ಕರಾವಳಿಯಲ್ಲಿ ಕೋಮುಸೌಹಾರ್ದತೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ.
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಾಯ್ ಕ್ಯಾಸ್ಟಿಲೋನೋ, 'ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟೀಷರ ವಿರುದ್ಧ ಜನರನ್ನು ಒಗ್ಗೂಡಿಸಲು ಗಣೇಶೋತ್ಸವ ಆಚರಿಸಲಾಯಿತು. ಈ ಹಬ್ಬ ಕೇವಲ ಒಂದು ಧರ್ಮಕ್ಕೆ ಸೀಮಿತವಾದುದಲ್ಲ. ಎಲ್ಲಾ ಧರ್ಮ, ಸಮುದಾಯದವರು ಸೇರಿ ಆಚರಿಸುವ ಮೂಲಕ ಏಕತೆಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ನಾವು ಇಂದು ಭೇಟಿ ನೀಡಿ ಶುಭ ಹಾರೈಸಿದ್ದೇವೆ.'
ಇನ್ನು ಆರ್ಎಸ್ಎಸ್ನ ದಕ್ಷಿಣ ಪ್ರಾಂತ್ಯ ಸರಸಂಘಚಾಲಕ ಡಾ.ವಾಮನ ಶೆಣೈ ಮಾತನಾಡಿ, 'ಈ ಭೇಟಿಯು ಸಾಮರಸ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ತಿಲಕರು ಧರ್ಮಜಾಗೃತಿಯ ಮೂಲಕ ರಾಷ್ಟ್ರ ಜಾಗೃತಿಯ ಪರಿಕಲ್ಪನೆಯನ್ನು ಹೊಂದಿ ಗಣೇಶೋತ್ಸವ ವನ್ನು ಆಚರಿಸಿದ್ದರು. ತಿಲಕರ ಮೂಲ ಮಂತ್ರವೇ ಒಗ್ಗಟ್ಟು ಎಂಬುವುದಾಗಿದೆ. ರಾಷ್ಟ್ರೀಯ ವಾದದ ಧ್ಯೇಯವನ್ನಿಟ್ಟುಕೊಂಡು ರಾಷ್ಟ್ರೀಯವಾದಿ ಕ್ರೈಸ್ತರು ಭೇಟಿ ನೀಡುತ್ತಾ ಬಂದಿದ್ದಾರೆ. ಇದು ಉತ್ತಮ ಬೆಳವಣಿಗೆ' ಎಂದು ಹೇಳಿದರು.












Click it and Unblock the Notifications