ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ವಾರಾಂತ್ಯದಲ್ಲಿ ಲಕ್ಷ ಜನರಿಂದ ಮಂಜುನಾಥನ ದರ್ಶನ
ಮಂಗಳೂರು, ಜೂನ್ 18: ಸಿದ್ದರಾಮಯ್ಯ ಸರಕಾರದ ಗ್ಯಾರಂಟಿ ಸ್ಕೀಮ್ ಶಕ್ತಿ ಯೋಜನೆಗೆ ಮಹಿಳಾ ಮಣಿಗಳಿಂದ ಶಕ್ತಿ ತುಂಬುವ ಕಾರ್ಯ ಭರದಿಂದ ಸಾಗಿರುವ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ವೀಕೆಂಡ್ ಭಾರೀ ಜನಸ್ತೋಮ ಸೇರಿದೆ.
ಉತ್ತರ ಕರ್ನಾಟಕ ಭಾಗದಿಂದ ಭಾರೀ ಸಂಖ್ಯೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಾಪಸ್ ಊರಿಗೆ ಮರಳುತ್ತಿರುವ ಭಕ್ತ ಸಮೂಹದಿಂದ ಬಸ್ ನಿಲ್ದಾಣದಲ್ಲಿ ತುಂಬಿ ತುಳುಕುತ್ತಿದೆ. ರಶ್ನಿಂದ ಬಸ್ ಹತ್ತಿ ಇಳಿಯಲು ಪ್ರಯಾಣಿಕರು ಹರಸಾಹಸ ಪಡುತ್ತಿರುವ ದೃಶ್ಯ ಕಂಡು ಬರುತ್ತಿದೆ.

ವಾರಾಂತ್ಯವಾದ್ದರಿಂದ ಶನಿವಾರವೇ ಬಂದು ವಾಸ್ತವ್ಯ ಹೂಡಿದ್ದು ಆದಿತ್ಯವಾರ ಮತ್ತೆ ಊರಿಗೆ ವಾಪಸ್ ಆಗುವ ಭಕ್ತರ ಸಂಖ್ಯೆ ಹೆಚ್ಚಿದೆ. ಪರಿಣಾಮ ಬೆಳಗ್ಗೆಯೇ ಧರ್ಮಸ್ಥಳದ ಬಸ್ ನಿಲ್ದಾಣದಲ್ಲಿ ಫುಲ್ ರಶ್ ರಶ್ ಕಂಡು ಬರುತ್ತಿದೆ. ಕಿಲೋ ಮೀಟರ್ ಗಟ್ಟಲೆ ನಿಂತುಕೊಂಡೇ ಪ್ರಯಾಣಿಸಬೇಕಾದ ಅನಿವಾರ್ಯತೆ ತಪ್ಪಿಸಲು ಕೆಲವರು ಬಸ್ ಕಿಟಕಿಯಿಂದಲೇ ತಮ್ಮ ಸಾಮಾನು - ಸರಂಜಾಮುಗಳನ್ನು ಸೀಟ್ ಮೇಲೆ ಮೊದಲೇ ಇಟ್ಟು ಸೀಟು ಕಾಯ್ದಿರಿಸುವ ದೃಶ್ಯವೂ ಕಂಡು ಬರುತ್ತಿದೆ. ಅಲ್ಲದೆ ಬಸ್ ಹತ್ತಲು, ಸೀಟ್ ಗಾಗಿ ಪ್ರಯಾಣಿಕರು ಮುಗಿಬೀಳುತ್ತಿರುವುದು ಕಂಡು ಬರುತ್ತಿದೆ.
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಂದ,ಬೆಂಗಳೂರು ಮೈಸೂರು ಹುಬ್ಬಳ್ಳಿ ಧಾರವಾಡ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳ ದತ್ತ ಹರಿದು ಬಂದಿದ್ದಾರೆ. ಸಾಮಾನ್ಯ ವಾರಾಂತ್ಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಕ್ಕೆ ಇಪ್ಪತ್ತೈದು ಸಾವಿರದಿಂದ ಮೂವತ್ತು ಸಾವಿರದವರೆಗೆ ಭಕ್ತರು ಬರುತ್ತಿದ್ದು,ಶನಿವಾರವೇ ಐವತ್ತು ಸಾವಿರಕ್ಕೂ ಅಧಿಕ ಭಕ್ತರು ದೇವಸ್ಥಾನದತ್ತ ಹರಿದು ಬಂದಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಳವಾದ ಹಿನ್ನಲೆಯಲ್ಲಿ ದೇವಳದ ಆದಾಯದಲ್ಲೂ ಹೆಚ್ಚಳ ಕಂಡಿದೆ.
ಅಲ್ಲದೇ ದೇವಸ್ಥಾನ ದ ರಥಬೀದಿಯಲ್ಲಿರುವ ಸಾಲು ಅಂಗಡಿಯಲ್ಲೂ ಜನರ ದಟ್ಟಣೆಕಂಡುಬಂದಿದೆ. ಜನ ಮುಗಿಬಿದ್ದು ಆಟ ಸಾಮಾನು ಸೇರಿದಂತೆ ಇತರ ವಸ್ತುಗಳನ್ನು ಖರೀದಿಸುತ್ತಿದ್ದು, ಅಂಗಡಿ ಮಾಲೀಕರೂ ಫುಲ್ ಖುಷ್ ಆಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿದ್ದರೂ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದಾರೆ. ಈ ಎರಡೂ ಕ್ಷೇತ್ರಗಳಿಗೆ ನೇರ ಬಸ್ ಸಂಪರ್ಕ ಇದೆ. ಉಳಿದ ಕ್ಷೇತ್ರಗಳಿಗೆ ಸರ್ಕಾರಿ ಬಸ್ ನಿಂದ ಇಳಿದು ಖಾಸಗಿ ಬಸ್ ನಲ್ಲಿ ಹೋಗಬೇಕಾಗಿರೋದರಿಂದ ಜನ ಉಚಿತವನ್ನೇ ಆಯ್ದುಕೊಂಡಿದ್ದಾರೆ.












Click it and Unblock the Notifications