"ಬಹುಮತ ಇಲ್ಲದೆ ಮುಖ್ಯಮಂತ್ರಿಯಾದವರು ಯಡಿಯೂರಪ್ಪ ಮಾತ್ರ"– ರಮಾನಾಥ್ ರೈ ಟೀಕೆ
ಮಂಗಳೂರು, ಜುಲೈ 27: "ಬಹುಮತ ಇಲ್ಲದೇ ಮುಖ್ಯಮಂತ್ರಿ ಆದವರು ಯಡಿಯೂರಪ್ಪ ಮಾತ್ರ. ವಿಧಾನ ಸಭೆಯಲ್ಲಿ ಬಹುಮತ ಇಲ್ಲದಿದ್ದರೂ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ" ಎಂದು ಮಾಜಿ ಸಚಿವ ರಮಾನಾಥ್ ರೈ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು. "ಬಿಜೆಪಿ ನಡೆಸಿರುವುದು ಆಪರೇಷನ್ ಕಮಲ ಅಲ್ಲ. ಕುದುರೆ ವ್ಯಾಪಾರದ ಆಪರೇಷನ್. ಇದಕ್ಕೆ ಆಪರೇಶನ್ ಕಮಲ ಎನ್ನುವ ಹೆಸರು ಹೇಳಲು ನಾನು ಇಷ್ಟಪಡಲ್ಲ" ಎಂದರು.
ಅತೃಪ್ತ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಪಕ್ಷನಿಷ್ಠೆ ಇಲ್ಲದಿದ್ದರಿಂದ ಇವರೆಲ್ಲ ಪಕ್ಷಾಂತರ ಮಾಡುತ್ತಿದ್ದಾರೆ. ಇವರು ಬೇರೆ ಪಕ್ಷಕ್ಕೆ ಹೋದರೂ, ನಿಷ್ಠೆಯಿಂದ ಇರುತ್ತಾರೆಂದು ಏನು ಗ್ಯಾರಂಟಿ? ಈ ರೀತಿ ಪಕ್ಷಾಂತರ ಮಾಡಿದವರಿಗೆ ಯಾವುದೇ ಅಧಿಕಾರ, ಮಾನ್ಯತೆ, ಗೌರವ ಕೊಡಬಾರದು. ಅವರು ಯಾವುದೇ ಪಕ್ಷಕ್ಕಾದರೂ ಮಾರಕ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ವ್ಯಾಪಕವಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಕ್ಷಣ ಸೂಕ್ತ ಕಾರ್ಯಾಚರಣೆ ನಡೆಸಿ ಜನರಿಗೆ ನೆರವಾಗಬೇಕೆಂದು ಕರೆ ನೀಡಿದರು. "ಈ ಸಮಯದಲ್ಲಿ ಜನತೆಗೆ ನೆರವಾಗಬೇಕಾಗಿದ್ದ ಜನಪ್ರತಿನಿಧಿಗಳು ಜನಹಿತವನ್ನು ಮರೆತು ತಮ್ಮದೇ ರಾಜಕೀಯದಲ್ಲಿ ತೊಡಗಿಕೊಂಡಿರುವುದು ರಾಜ್ಯದ ಜನತೆಗೆ ಮಾಡಿರುವ ದ್ರೋಹ" ಎಂದು ಟೀಕಿಸಿದರು.












Click it and Unblock the Notifications