ಕೊಂಡೆವೂರಿನಲ್ಲಿ ಲೋಕ ಕಲ್ಯಾಣಕ್ಕಾಗಿ ವಿಶ್ವಜಿತ್ ಅತಿರಾತ್ರ ಸೋಮಯಾಗ
ಮಂಗಳೂರು, ಫೆಬ್ರವರಿ 22: ದಟ್ಟ ಕಾನನದ ನಡುವೆ ಅಲ್ಲೊಂದು ಋಷಿ ಮುನಿಗಳ ಕುಟೀರ. ಅಲ್ಲಿ ಕೇಳಿ ಬರುತ್ತಿರುವ ಮಂತ್ರ ಘೋಷಗಳ ಸದ್ದು. ಪೂರ್ಣಾಹುತಿ ಸಂಧರ್ಭ ಮುಗಿಲು ಮುಟ್ಟಿದ ಅಗ್ನಿ ಜ್ವಾಲೆ. ಇಂತಹದೊಂದು ಕಾಲ್ಪನಿಕ ದೃಶ್ಯಗಳು ನಾವು ಪುರಾಣಗಳನ್ನು ಓದುವಾಗ ಕಣ್ಣ ಮುಂದೆ ಬರುತ್ತವೆ. ಆದರೆ ಇದು ಈ ಆಧುನಿಕ ಯುಗದಲ್ಲಿ ಕಂಡುಬಂದ ದೃಶ್ಯ ಎಂದರೆ ನಂಬಲು ಕಷ್ಟ ಅಲ್ಲವೇ?.
ಆದರೆ ಇಂತಹ ದೃಶ್ಯ ಕರ್ನಾಟಕ ಮತ್ತು ಕೇರಳ ಗಡಿಭಾಗದಲ್ಲಿರುವ ಕಾಸರಗೋಡುವಿನ ಕೊಂಡೆವೂರಿನಲ್ಲಿ ಕಂಡುಬಂದಿದೆ. ಉಪ್ಪಳ ಸಮೀಪದ ಕೊಂಡವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ವಿಶ್ವಜಿತ್ ಅತಿರಾತ್ರ ಸೋಮಯಾಗ ನಡೆದಿದೆ.
ಸೋಮಯಾಗ ಅನ್ನುವಂತಹದು ಸರ್ವ ಶ್ರೇಷ್ಠವಾಗಿದ್ದು. ಯಜ್ಞ ಪರಂಪರೆಯಲ್ಲೇ ಅತ್ಯುನ್ನತ ಸ್ಥಾನ ಈ ಸೋಮಯಾಗಕ್ಕೆ ನೀಡಲಾಗಿದೆ.

ಫೆಬ್ರವರಿ18 ರಿಂದ ಆರಂಭವಾದ ಯಾಗ 24ನೇ ತಾರೀಖಿನವರೆಗೆ ನಡೆಯುತ್ತದೆ. ಕೊಂಡೆವೂರು ಮಠದ ಸ್ವಾಮಿಗಳಾದ ಶ್ರೀ ಯೋಗಾನಂದ ಸ್ವರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಯಾಗ ನಡೆಯುತ್ತಿದೆ. ವಿಶೇಷವೇನೆಂದರೆ ಯಾಗದಲ್ಲಿ ಕುದುರೆ,ಕಪ್ಪೆ,ಆಮೆ,ಆಡು,11 ತಿಂಗಳ ಸ್ವದೇಶಿ ತಳಿಯ ಹಸುವಿನ ಹೆಣ್ಣು ಕರು ಕೂಡ ಪಾಲ್ಗೊಳ್ಳುತ್ತವೆ.
ಕೇವಲ ಸೋಮರಸ ಮಾತ್ರವಲ್ಲದೆ, ಮಳೆ ಮತ್ತು ಬಿಸಿಲು ಒಟ್ಟಿಗೆ ಬಂದಾಗ ಸಂಗ್ರಹಿಸಿದ ನೀರು, ಇಬ್ಬನಿಯ ನೀರು, ಕೆರೆಯ ಪಾಚಿ, ಎಲ್ಲಾ ಪುಣ್ಯ ನದಿಗಳ ನೀರನ್ನು ಈ ಯಾಗದಲ್ಲಿ ಉಪಯೋಗಿಸಲಾಗುತ್ತದೆ.

ಅತಿ ವಿರಳವಾಗಿ ನಡೆಯುವ ಸೋಮಯಾಗದಲ್ಲಿ ಪ್ರತಿದಿನ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಋಷಿ ಮುನಿಗಳ ಕಾಲದಲ್ಲಿ ನಡೆಯುವ ಯಾಗಗಳಂತೆಯೇ , ಆಧುನಿಕ ಕಾಲದಲ್ಲೂ ಯಾಗ ನಡೆಯುತ್ತಿದ್ದು, ಯಾಗದಲ್ಲಿ ಪಾಲ್ಗೊಂಡು ಜನ ಕೃತಾರ್ಥರಾಗುತ್ತಿದ್ದಾರೆ. ಒಟ್ಟಿನಲ್ಲಿ ಕೇರಳದ ದೇವರ ನಾಡಿನಲ್ಲಿ ಲೋಕಕಲ್ಯಾಣಕ್ಕಾಗಿ ನಾ ಭೂತೂ ನಾ ಭವಿಷ್ಯತಿ ಎಂಬಂತೆ ಮಹಾ ಯಾಗ ನಡೆದಿದ್ದು, ಹಲವು ಅಪರೂಪ ವಿಶೇಷತೆಗಳಿಗೆ ಜನ ಸಾಕ್ಷಿಯಾಗಿದ್ದಾರೆ.












Click it and Unblock the Notifications