ಡೆಂಗ್ಯೂ ಜಾಗೃತಿ ಹೆಸರಲ್ಲಿ ಬಾಲಿವುಡ್ ಹಾಡಿಗೆ ಹೆಜ್ಜೆ; ಫ್ಲ್ಯಾಶ್ ಮಾಬ್ ಗೆ ಆಕ್ರೋಶ
ಮಂಗಳೂರು, ಜುಲೈ 29: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಡೆಂಗ್ಯೂಗೆ ಈವರೆಗೆ ಮೂರು ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಡೆಂಗ್ಯೂ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಡಳಿತವೂ ಹಲವು ಕ್ರಮಗಳನ್ನು ಕೈಗೊಂಡಿದೆ.
ಡೆಂಗ್ಯೂ ಜಾಗೃತಿಗೆಂದೇ ನಿನ್ನೆಯೂ ಜಿಲ್ಲಾಡಳಿತ ಮಂಗಳೂರು ನಗರದ ಮೂರು ಮಾಲ್ ಗಳಲ್ಲಿ ಫ್ಲ್ಯಾಶ್ ಮಾಬ್ ಅಭಿಯಾನ ಹಮ್ಮಿಕೊಂಡಿದ್ದು, ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಬರಬಹುದು ನಂಗು... ನಿಂಗು... ಡೆಂಗ್ಯೂ- ವೈರಲ್ ಆಯ್ತು ಪಾಪ್ ಶೈಲಿ ಹಾಡು
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಂಗಳೂರು ಮಹಾನಗರಪಾಲಿಕೆ ಹಾಗೂ ಇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜುಲೈ 28ರ ಭಾನುವಾರ ಸಂಜೆ 4ರಿಂದ 6.30ರವರೆಗೆ ನಗರದ ಸಿಟಿ ಸೆಂಟರ್ ಮಾಲ್, ಭಾರತ್ ಮಾಲ್, ಫೋರಂ ಫಿಝಾ ಮಾಲ್ ಗಳಲ್ಲಿ ಸಾರ್ವಜನಿಕ ಸಹಿ ಅಭಿಯಾನ ಹಾಗೂ ಶ್ರೀನಿವಾಸ್ ಕಾಲೇಜು ವಿದ್ಯಾರ್ಥಿಗಳಿಂದ ಫ್ಲ್ಯಾಶ್ ಮಾಬ್ ಜಾಗೃತಿ ಕಾರ್ಯಕ್ರಮ ನಡೆಯಿತು. ಆದರೆ ಈ ಫ್ಲ್ಯಾಶ್ ಮಾಬ್ ಬಗ್ಗೆ ವಿರೋಧ ವ್ಯಕ್ತವಾಗಿದೆ.
ನಗರದ ಕೆ.ಎಸ್. ರಾವ್ ರಸ್ತೆಯ ಸಿಟಿ ಸೆಂಟರ್ ಮಾಲ್ ನಲ್ಲಿ ಸಂಜೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಕೋಸ್ಟಲ್ ವುಡ್ ಸೆಲೆಬ್ರಿಟಿಗಳಾದ ಪೃಥ್ವಿ ಅಂಬರ್ ಮತ್ತು ನವ್ಯಾ ಪೂಜಾರಿ ಉಪಸ್ಥಿತರಿದ್ದರು.
ಡೆಂಗ್ಯೂ ನಿಯಂತ್ರಣಕ್ಕೆ ಮಂಗಳೂರಿನಲ್ಲಿ ಡೆಂಗ್ಯೂ ಡ್ರೈವ್ ಡೇ
ಡೆಂಗ್ಯೂನಿಂದ ಸಾವು ಸಂಭವಿಸುತ್ತಿದ್ದು, ಇಂತಹ ಗಂಭೀರ ವಿಚಾರವನ್ನು ಜಿಲ್ಲಾಡಳಿತ ಹಗುರವಾಗಿ ಪರಿಗಣಿಸಿ ಸಂಭ್ರಮಿಸಿದ್ದು ಟೀಕೆಗೆ ಗುರಿಯಾಗಿದೆ. ಫ್ಲ್ಯಾಶ್ ಮಾಬ್ ಹೆಸರಿನಲ್ಲಿ ಶ್ರೀನಿವಾಸ್ ಕಾಲೇಜು ವಿದ್ಯಾರ್ಥಿಗಳು ಬಾಲಿವುಡ್ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಅದಲ್ಲದೇ ಕಳೆದ 2 ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಡೆಂಗ್ಯೂ ಪಾಪ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದರಿಂದ ಡೆಂಗ್ಯೂ ಬಗ್ಗೆ ಯಾವ ರೀತಿ ಜಾಗೃತಿ ಮೂಡಿಸಿದಂತಾಯಿತು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಡೆಂಗ್ಯೂ ಸಮಸ್ಯೆ ಅಥವಾ ಸ್ವಚ್ಛತೆ ಬಗ್ಗೆ ಬೀದಿ ನಾಟಕ ಪ್ರದರ್ಶಿಸಬಹುದಿತ್ತು. ಆದರೆ ಡೆಂಗ್ಯೂನಂತಹ ಅತ್ಯಂತ ಗಂಭೀರ ವಿಚಾರವನ್ನು ಜಿಲ್ಲಾಡಳಿತ ಹಗುರವಾಗಿ ತೆಗೆದುಕೊಂಡಿದೆ. ಜಾಗೃತಿ ಹೆಸರಿನಲ್ಲಿ ದುಂದುವೆಚ್ಚ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಡೆಂಗ್ಯೂ ರೋಗದ ಲಕ್ಷಣ, ಮುನ್ನೆಚ್ಚರಿಕೆ, ಚಿಕಿತ್ಸೆ ಕುರಿತು ಮಾಹಿತಿ
ಫ್ಲಾಶ್ ಮಾಬ್ ಗೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳಿಗೂ ಡೆಂಗ್ಯೂ ಗಂಭೀರತೆಯ ಅರಿವಿದ್ದಂತಿಲ್ಲ. ಡೆಂಗ್ಯೂ ಹಾವಳಿಯನ್ನು ಜಿಲ್ಲೆಯಿಂದ ನಿರ್ಮೂಲನೆ ಮಾಡಲು ಟೊಂಕ ಕಟ್ಟಿ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಈ ಫ್ಲ್ಯಾಶ್ ಮಾಬ್ ಕಾರ್ಯಕ್ರಮಕ್ಕೆ ಸಹಮತಿ ನೀಡಿದ್ದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.