ಮಂಗಳೂರು; ಮೀನು ತ್ಯಾಜ್ಯ ಟ್ಯಾಂಕ್ ಒಳಗೆ ಉಸಿರುಗಟ್ಟಿ 5 ಸಾವು
ಮಂಗಳೂರು, ಏಪ್ರಿಲ್ 18; ಮಂಗಳೂರಿನ ಮೀನು ಸಂಸ್ಕರಣಾ ಘಟಕದಲ್ಲಿ ಭಾರೀ ದುರಂತ ಸಂಭವಿಸಿದೆ. ಮೀನು ತ್ಯಾಜ್ಯ ಟ್ಯಾಂಕ್ ಒಳಗೆ ಉಸಿರುಗಟ್ಟಿ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಮಂಗಳೂರು ನಗರ ಹೊರವಲಯದ ಎಸ್ಐಝಡ್ ವ್ಯಾಪ್ತಿಯ ಶ್ರೀ ಉಲ್ಕಾ ಮೀನು ಸಂಸ್ಕರಣಾ ಘಟಕದಲ್ಲಿ ಈ ದುರಂತ ಸಂಭವಿಸಿದೆ. ಉತ್ತರ ಭಾರತ ಮೂಲದ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ.
ಭಾನುವಾರ ರಾತ್ರಿ 8 ಗಂಟೆಯ ವೇಳೆಗೆ ಘಟನೆ ನಡೆದಿದ್ದು, ಸಂಸ್ಕರಣಾ ಘಟಕದ ತ್ಯಾಜ್ಯ ಟ್ಯಾಂಕ್ ಶುಚಿಗೊಳಿಸಲು ನಿಜಾಮುದ್ದೀನ್ ಎಂಬ ಕಾರ್ಮಿಕ ಟ್ಯಾಂಕ್ಗೆ ಇಳಿದಿದ್ದ. ಈ ವೇಳೆ ನಿಜಾಮುದ್ದೀನ್ ಟ್ಯಾಂಕ್ ಒಳಗೆ ಅಸ್ವಸ್ಥನಾಗಿದ್ದಾನೆ.

ನಿಜಾಮುದ್ದೀನ್ ರಕ್ಷಣೆ ಮಾಡಲು 7 ಮಂದಿ ಕಾರ್ಮಿಕರು ಟ್ಯಾಂಕ್ಗೆ ಇಳಿದಿದ್ದು, ಒಟ್ಟು ಎಂಟು ಮಂದಿ ಕಾರ್ಮಿಕರ ಪೈಕಿ 5 ಮಂದಿ ಸಾವನ್ನಪ್ಪಿದ್ದು ಮೂವರ ಸ್ಥಿತಿ ಗಂಭೀರವಾಗಿದೆ. ಬದುಕುಳಿದ ಕಾರ್ಮಿಕರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಐವರು ಕಾರ್ಮಿಕರ ಮೃತದೇಹವಿರುವ ಖಾಸಗಿ ಆಸ್ಪತ್ರೆ ಯ ಶವಾಗಾರಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿದರು. ಬಜಪೆ ಠಾಣಾ ಪೊಲೀಸರಿಂದ ಮಾಹಿತಿ ಪಡೆದ ಅವರು ಘಟನೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
"ಮುಂಬೈ ಮೂಲದ ವ್ಯಕ್ತಿಗೆ ಸೇರಿದ ಬಜ್ಪೆ ಶ್ರೀ ಉಲ್ಕಾ ಎಲ್ಎಲ್ಪಿ ಮೀನು ಸಂಸ್ಕರಣಾ ಘಟಕದಲ್ಲಿ ಘಟನೆ ನಡೆದಿದೆ. ಒಟ್ಟು 70 ಮಂದಿ ಕಾರ್ಮಿಕರು ಈ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕಂಪೆನಿ ಮಾಲೀಕನ ವಿರುದ್ಧ 304 ಸೆಕ್ಷನ್ ನಡಿ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಮೇಲ್ನೋಟಕ್ಕೆ ನಿರ್ಲಕ್ಷ್ಯ ಸಾಬೀತಾಗಿದೆ" ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

"ಮೃತ ಕಾರ್ಮಿಕರೆಲ್ಲರೂ ಉತ್ತರ ಭಾರತ ಮೂಲದವರಾಗಿದ್ದಾರೆ. ಬಹುತೇಕ ಎಲ್ಲರೂ ಮುಸ್ಲಿಂ ಧರ್ಮದವರಾಗಿದ್ದು, ಉಪವಾಸದಲ್ಲಿ ತೊಡಗಿದ್ದರು. ಭಾನುವಾರ ರಾತ್ರಿ 8 ಗಂಟೆ ವೇಳೆಗೆ ಘಟನೆ ಸಂಭವಿಸಿದೆ. ಮೀನು ತ್ಯಾಜ್ಯ ಟ್ಯಾಂಕ್ ಶುಚಿಗೊಳಿಸಲು ಕಾರ್ಮಿಕನೋರ್ವ ಇಳಿದಿದ್ದ. ಟ್ಯಾಂಕ್ ಒಳಗಡೆ ಕಾರ್ಮಿಕ ಅಸ್ವಸ್ಥನಾಗಿದ್ದಾನೆ. ಆತನನ್ನು ರಕ್ಷಣೆ ಮಾಡಲು 8 ಮಂದಿ ಕಾರ್ಮಿಕರು ಟ್ಯಾಂಕಿಗೆ ಇಳಿದಿದ್ದಾರೆ. ಈ ವೇಳೆ ಉಸಿರುಗಟ್ಟಿ ದುರಂತ ಸಂಭವಿಸಿದೆ. ಮೂರು ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಸಮಿರುಲ್ಲ ಇಸ್ಲಾಂ, ಉಮರ್ ಫಾರೂಕ್, ನಿಜಾಮುದ್ದೀನ್ ಸಾಜ್, ಮಿರಾಜುಲ್ಲ್ ಇಸ್ಲಾಂ, ಸರಾಫತ್ ಆಲಿ ಮೃತಪಟ್ಟ ಕಾರ್ಮಿಕರಾಗಿದ್ದಾರೆ. ಘಟನೆಯಲ್ಲಿ ಅಸನ್ ಆಲಿ, ಕರೀಬುಲ್ಲ, ಹಫೀಝುಲ್ಲಾ ತೀವ್ರ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆ ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಬಗ್ಗೆ ಬಜ್ಪೆ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಂಪನಿಯ ಪ್ರೊಡಕ್ಷನ್ ಮ್ಯಾನೇಜರ್ ರೂಬಿ ಜೋಸೆಫ್, ಏರಿಯಾ ಮ್ಯಾನೇಜರ್ ಕುಬೇರ್ ಗಾಡೆ, ಸೂಪರ್ ವೈಸರ್ ಮೊಹಮ್ಮದ್ ಅನ್ವರ್, ಕಾರ್ಮಿಕರನ್ನು ಸ್ಥಳೀಯವಾಗಿ ನೋಡಿ ಕೊಳ್ಳುತ್ತಿದ್ದ ಫಾರೂಕ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತ ಕುಟುಂಬಸ್ಥರಿಗೆ 2 ಲಕ್ಷ ರೂ. ಪರಿಹಾರ; ಪಶ್ಚಿಮ ಬಂಗಾಳ ಸರ್ಕಾರ
ಮಂಗಳೂರಿನ ಮೀನು ಸಂಸ್ಕರಣಾ ಘಟಕದ ಮೀನು ತ್ಯಾಜ್ಯ ಟ್ಯಾಂಕ್ ಒಳಗೆ ಉಸಿರುಗಟ್ಟಿ ಐವರು ಕಾರ್ಮಿಕರು ಸಾವನ್ನಪ್ಪಿದ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರಾದ ಸಮಿರುಲ್ಲ ಇಸ್ಲಾಂ, ಉಮರ್ ಫಾರೂಕ್, ನಿಜಾಮುದ್ದೀನ್ ಸಾಜ್, ಮಿರಾಜುಲ್ಲ್ ಇಸ್ಲಾಂ, ಸರಾಫತ್ ಆಲಿ ಕುಟುಂಬಸ್ಥರಿಗೆ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಪಶ್ಚಿಮ ಬಂಗಾಳ ಸರ್ಕಾರ ಘೋಷಿಸಿದೆ.












Click it and Unblock the Notifications