ಕರಾವಳಿಯ ಆಳ ಸಮುದ್ರದಲ್ಲಿ ಮತ್ತೆ ಕಡಲ ಮಕ್ಕಳ ಕಲರವ ಆರಂಭ
ಮಂಗಳೂರು, ಆಗಸ್ಟ್ 01: ರಾಜ್ಯ ಕರಾವಳಿಯಲ್ಲಿ ಮೀನುಗಾರಿಕಾ ರಜೆ ಇಂದು ಬುಧವಾರ ಮುಕ್ತಾಯಗೊಂಡಿದೆ. ಕಳೆದ ತಡರಾತ್ರಿಯಿಂದಲೇ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಮೀನುಗಾರಿಕಾ ಚಟುವಟಿಕೆ ಮತ್ತೆ ಗರಿಗೆದರಿದೆ.
ಈಗಾಗಲೇ ಮೀನುಗಾರಿಕೆಗೆ ದೋಣಿಗಳು ಮತ್ಸ್ಯಬೇಟೆಗಾಗಿ ಬೇಕಾದ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಕಳೆದ ಮೀನುಗಾರಿಕಾ ಋತುವಿಗಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮೀನು ಬಲೆಗೆ ಬೀಳುವ ನಿರೀಕ್ಷೆಯಲ್ಲಿರುವ ಕಡಲ ಮಕ್ಕಳು, ಈ ಬಾರಿ ಹೆಚ್ಚಿನ ಲಾಭ ಬರುವ ವಿಶ್ವಾಸದೊಂದಿಗೆ ಸಮುದ್ರಕ್ಕೆ ಇಳಿದಿದ್ದಾರೆ.
ಗಂಗೊಳ್ಳಿಯ ಬಲೆಗೆ ಬಿದ್ದ ಭಾರೀ ಗಾತ್ರದ ಸ್ಟಿಂಗ್ ರೇ ಮೀನುಗಳು
ಕರಾವಳಿಯಲ್ಲಿ ಮಳೆಯ ಅಬ್ಬರ ಕುಗ್ಗಿದೆ. ಸಮುದ್ರ ರಾಜ ಕೂಡ ಶಾಂತವಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಈ ಬಾರಿ ದೀರ್ಘಾವಧಿಯ ಅಂದರೆ ಎರಡು ತಿಂಗಳ ಮೀನುಗಾರಿಕಾ ರಜೆಯ ಬಳಿಕ ಕಡಲ ಮಕ್ಕಳು ಮತ್ತೆ ಕಡಲಿಗಿಳಿದಿದ್ದಾರೆ. ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಆದೇಶದಂತೆ ಮೀನುಗಾರಿಕಾ ರಜೆ ಇಂದಿಗೆ ಕೊನೆಗೊಂಡಿದೆ.
ಕರಾವಳಿಯ ಮೀನುಗಾರಿಕಾ ಬಂದರುಗಳಲ್ಲಿ ಈಗಾಗಲೇ ಚಟುವಟಿಕೆ ಬಿರುಸುಗೊಂಡಿದೆ. ಮಂಗಳೂರು ಮೀನುಗಾರಿಕಾ ಬಂದರಿನಿಂದ ಕಳೆದ ತಡ ರಾತ್ರಿಯೇ ಹಲವಾರು ಮೀನುಗಾರಿಕಾ ದೋಣಿಗಳು ಆಳ ಸಮುದ್ರ ಮೀನುಗಾರಿಕೆಗೆ ತೆರಳಿವೆ.
ಮೀನುಗಾರಿಕಾ ಬಂದರಿನಲ್ಲಿರುವ ಇನ್ನಿತರ ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರರು ಅಗತ್ಯವಿರುವ ಮಂಜುಗಡ್ಡೆ, ಕುಡಿಯುವ ನೀರು, ಮೀನಿಗಾರಿಕೆಗೆ ಅಗತ್ಯವಿರುವ ಬಲೆಗಳನ್ನು ಬೃಹತ್ ಮೀನುಗಾರಕಾ ದೋಣಿಗಳಿಗೆ ತುಂಬಿಸುವ ಕಾರ್ಯ ಭರದಿಂದ ನಡೆಯುತ್ತಿದೆ.
ಬೃಹತ್ ಟ್ರಾಲ್ ಹಾಗೂ ಸಣ್ಣ ದೋಣಿಗಳು ಕಡಲಿಗಿಳಿಯಲಿದ್ದು, ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮೀನುಗಾರಿಕಾ ಚಟುವಟಿಕೆ ನಡೆದು ಹೆಚ್ಚಿನ ಲಾಭ ಬರುವ ವಿಶ್ವಾಸವನ್ನು ಮೀನುಗಾರರು ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಈ ಬಾರಿ 1,420 ಮೋಟರೀಕೃತ ನಾಟದೋಣಿ ಹಾಗು 1,234 ರಷ್ಟು ಯಾಂತ್ರಿಕೃತ ಮೀನುಗಾರಿಕಾ ದೋಣಿಗಳು ಲಂಗರು ಹಾಕಿದ್ದವು. ಈಗ ಒಂದೊಂದೆ ಬೋಟುಗಳು ಲಂಗರು ಬಿಚ್ಚಿ ಆಳ ಸಮುದ್ರಕ್ಕೆ ತೆರಳಲು ಸಿದ್ಧತೆ ನಡೆಸುತ್ತಿವೆ.
ಕಳೆದ 2017-18 ನೇ ಸಾಲಿನಲ್ಲಿ 1.63 ಲಕ್ಷ ಮೆಟ್ರಿಕ್ ಟನ್ ಮೀನು ಹಿಡಿಯಲಾಗಿತ್ತು. ಇದರ ಒಟ್ಟು ಮೌಲ್ಯ 163.69 ಕೋಟಿ ರೂಪಾಯಿ . ಈ ಬಾರಿ ಒಳ್ಳೆಯ ಬೇಡಿಕೆ ಇರುವ ಮೀನುಗಳು ಬಲೆಗೆ ಬೀಳುವ ನಿರೀಕ್ಷೆಯೊಂದಿಗೆ ಕಡಲ ಮಕ್ಕಳು ಮತ್ತೇ ಸಮುದ್ರಕ್ಕೆ ಇಳಿದಿದ್ದಾರೆ.
ಕಳೆದ ಸೀಸನ್ ಮೀನುಗಾರಿಕೆಗೆ ಅಷ್ಟೊಂದು ಆಶದಾಯಕವಾಗಿರಲಿಲ್ಲ ಆದರೆ ಈ ಬಾರಿ ಮಳೆರಾಯ ಅಬ್ಬರಿಸಿದ್ದಾನೆ, ಸಮುದ್ರ ರಾಜ ತನ್ನ ರೌದ್ರವತಾರ ತೋರಿದ್ದಾನೆ. ಸಮುದ್ರದಲ್ಲಿನ ತೂಫಾನ್, ಉಬ್ಬರವಿಳಿತಗಳು ಸೇರಿದಂತೆ ಮತ್ತಿತರ ಹವಮಾನಗಳಿಂದ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತ್ಸ್ಯ ಸಂಪತ್ತು ದೊರಕುವ ನಿರೀಕ್ಷೆಯಲ್ಲಿ ಮೀನುಗಾರರಿದ್ದಾರೆ.