ಕರಾವಳಿಯಲ್ಲಿ ಅವಧಿಗೂ ಮುನ್ನವೇ ದಡ ಸೇರಿದ ಮೀನುಗಾರಿಕಾ ದೋಣಿಗಳು!
ಮಂಗಳೂರು, ಮೇ.21: ಹವಾಮಾನ ವೈಪರೀತ್ಯ, ಚಂಡಮಾರುತಗಳು, ಆಳ ಸಮುದ್ರದಲ್ಲಿ ಮೀನಿನ ಅಭಾವ ಹಿನ್ನೆಲೆ ಮಂಗಳೂರಿನ ಮೀನುಗಾರಿಕಾ ಬಂದರ್ನಲ್ಲಿ ಬಹುತೇಕ ಬೋಟ್ ಗಳು ಅವಧಿಗೆ ಮುನ್ನವೇ ಲಂಗಾರು ಹಾಕಿವೆ.
ಮಳೆಗಾಲ ಆರಂಭವಾಗುವ ಮುನ್ನವೇ ಮಂಗಳೂರು ಬಂದರಿನ ಬಹುತೇಕ ಯಾಂತ್ರೀಕೃತ ಬೋಟುಗಳು ದಡ ಸೇರಿವೆ. ಮೀನುಗಾರಿಕಾ ರಜೆ ಕಾಲ ಆರಂಭವಾಗಲಿದ್ದು, ಮೇ 31 ಈ ಬಾರಿ ಮೀನುಗಾರಿಕೆಗೆ ಕೊನೆಯ ದಿನವಾಗಿದೆ. ಜೂನ್ 1 ರಿಂದ ಮೀನುಗಾರಿಕಾ ರಜೆ ಆರಂಭವಾಗಲಿದೆ. ಜುಲೈ 31 ರವರೆಗೂ ಈ ರಜೆ ಇರಲಿದೆ. ಆದರೆ ಈಗಾಗಲೇ ಮೀನುಗಾರಿಕಾ ಬೋಟ್ ಗಳು ದಡ ಸೇರಿವೆ.
ಮೀನುಗಾರಿಕೆಗೆ ವಿದಾಯ : ಕರ್ನಾಟಕ ಕರಾವಳಿಯ ಪಾಲಿಗೆ ಕರಾಳ ವರ್ಷ!
ಪ್ರತಿ ವರ್ಷದಂತೆ ಈ ಬಾರಿಯೂ ಜೂನ್ ಮತ್ತು ಜುಲೈ ತಿಂಗಳು ಮೀನುಗಾರಿಕೆ ಆರಂಭವಾಗಲಿದೆ. ಆದರೆ ದೋಣಿ ಮಾಲೀಕರು ಈಗಾಗಲೇ ಮೀನುಗಾರಿಕೆ ಸ್ಥಗಿತಗೊಳಿಸಿದ್ದು, ರಜಾ ಅವಧಿ ಮುಗಿಸಿ ಆಗಸ್ಟ್ನಲ್ಲಿ ಮೀನುಗಾರಿಕೆಗೆ ಆಗಮಿಸಲು ಹೊರ ರಾಜ್ಯದ ಮೀನುಗಾರರಿಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೀನುಗಾರರು ನಷ್ಟ ಅನುಭವಿಸುವಂತಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,134 ಪಸೀನ್ ಮತ್ತು ಟ್ರಾಲ್ ಬೋಟ್, 1,396 ಗಿಲ್ನೆಟ್ ಬೋಟ್, 531 ಸಾಂಪ್ರ ದಾಯಿಕ ಬೋಟ್ಗಳಿವೆ. ಈ ಬಾರಿಯ ಮೀನುಗಾರಿಕಾ ಋತು ಮೀನುಗಾರರ ಪಾಲಿಗೆ ವರವಾಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ಮೀನು ಇಳುವರಿ ಕಡಿಮೆ. ಫಿಶ್ ಮಿಲ್ಗಳಿಗೆ ಹೋಗುವ ಕ್ಲಾತಿ ಮೀನು ಬಿಟ್ಟರೆ ಉಳಿದಂತೆ ಬೇರೆ ಮೀನುಗಳು ನಿರೀಕ್ಷಿತ ಮಟ್ಟದಲ್ಲಿ ಲಭಿಸಿಲ್ಲ. ಇದರಿಂದ ಮೀನು ಉದ್ಯಮ ಕುಸಿತ ಕಂಡಿದೆ.
ಆಳಸಮುದ್ರದಲ್ಲಿ ಈವರೆಗೂ ಪತ್ತೆಯಾಗದ ಬೋಟ್: ಮೀನುಗಾರರು ಎಲ್ಲಿಗೆ ಹೋದರು?
ಯಾಂತ್ರೀಕೃತ ಮೀನುಗಾರಿಕಾ ಬೋಟುಗಳು ಮೀನುಗಾರಿಕೆಗೆ ತೆರಳುವ ಸಂದರ್ಭ ಇಂಧನ, ಕೆಲಸಗಾರರ ವೆಚ್ಚ, ಬೋಟಿನ ತಪಾಸಣೆ ಸಹಿತ ಇನ್ನಿತರ ಖರ್ಚುಗಳು ಇರುತ್ತದೆ. ಪ್ರಸ್ತುತ ಮೀನುಗಾರಿಕೆಗೆ ತೆರಳಿದರೆ ಲಾಭಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಹಾಗಾಗಿ ಮೀನುಗಾರಿಕೆ ಮಾಡುವುದನ್ನೇ ಸ್ಥಗಿತಗೊಳಿಸಿದ್ದೇವೆ ಎಂದು ಮೀನುಗಾರಿಕಾ ದೋಣಿ ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.