ಖಾದರ್ ವಿರುದ್ಧ ವಿವಾದಾತ್ಮಕ ಹೇಳಿಕೆ, ಕಲ್ಲಡ್ಕ ಭಟ್ ವಿರುದ್ದ ಎಫ್ಐಆರ್
ಮಂಗಳೂರು, ಏಪ್ರಿಲ್ 9: ಸಚಿವ ಯು.ಟಿ. ಖಾದರ್ ಒಬ್ಬ ಕೊಳಕು ಮನುಷ್ಯ. ಗೋಮಾಂಸ ಭಕ್ಷಣೆ ಮಾಡುವಂತಹ ಆ ವ್ಯಕ್ತಿಯನ್ನು ಪವಿತ್ರ ದೇವಾಲಯ ಹಾಗು ದೈವಸ್ಥಾನಕ್ಕೆ ಕರೆಸಿ ಪ್ರಸಾದ ನೀಡುತ್ತಿರುವುದು ಎಷ್ಟುಸರಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಆರ್.ಎಸ್.ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆ ಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಬಂಟ್ವಾಳದ ಕೈರಂಗಳ ಗ್ರಾಮದ ಪುಣ್ಯಕೋಟಿ ನಗರ ಎಂಬಲ್ಲಿ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಚುನಾವಣಾ ಆಯೋಗದ ಅನುಮತಿ ಪಡೆಯದೆ ಸಭೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಕಾಂಗ್ರೆಸ್ ಮುಖಂಡರಿಂದ ದೂರು
ಜೊತೆಗೆ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಧರ್ಮ ವಿರೋಧಿ ಭಾಷಣ ಮಾಡಿ, ಚುನಾವಣಾ ಆಯೋಗ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಸಾರ್ವಜನಿಕರಲ್ಲಿ ಗೊಂದಲ ಮತ್ತು ಅನುಮಾನ ಹುಟ್ಟಿಸುವಂತೆ ಉದ್ರೇಕಕಾರಿ ಭಾಷಣ ಮಾಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಪ್ರಭಾಕರ ಭಟ್ ವಿರುದ್ಧ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153 (ಎ) ಹಾಗೂ ಆರ್.ಪಿ. ಆಕ್ಟ್ 125 ಅಡಿ ಎಫ್.ಐ.ಆರ್. ದಾಖಲಿಸಲಾಗಿದೆ.
ಬಂಟ್ವಾಳದ ಕೈರಂಗಳದಲ್ಲಿರುವ ಅಮೃತಧಾರಾ ಗೋಶಾಲೆಯಲ್ಲಿ ನಡೆದ ದನಗಳ್ಳತನವನ್ನು ಖಂಡಿಸಿ ಹಾಗೂ ಗೋಗಳ್ಳರನ್ನು ಬಂಧಿಸುವಂತೆ ಒತ್ತಾಯಸಿ ಇತ್ತೀಚೆಗೆ ಕೈಗೊಳ್ಳಲಾಗಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹ ಸಂದರ್ಭದಲ್ಲಿ ಡಾ. ಕಲ್ಲಡ್ಕ ಪ್ರಭಾಕರ ಭಟ್ ಸಚಿವ ಯು.ಟಿ ಖಾದರ್ ವಿರುದ್ದ ವಾಗ್ದಾಳಿ ನಡೆಸಿದ್ದರು
ಸಚಿವ ಯು.ಟಿ ಖಾದರ್ ಪ್ರವೇಶಿಸಿದ ದೇವಾಲಯ ಹಾಗು ದೈವಸ್ಥಾನಗಳಲ್ಲಿ ಇನ್ನೊಮ್ಮೆ ಬ್ರಹ್ಮಕಲಶ ನಡೆಸಬೇಕು ಎಂದು ಹೇಳಿದ್ದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ.
'ಖಾದರ್ ಪ್ರವೇಶಿಸಿದ ದೇವಾಲಯಕ್ಕೆ ಮತ್ತೊಮ್ಮೆ ಬ್ರಹ್ಮ ಕಲಶ ಆಗಲೇಬೇಕು'
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮುಖಂಡರು ಚುನಾವಣಾಧಿಕಾರಿಯವರಿಗೆ ದೂರು ನೀಡಿದ್ದರು.
ಜಿಲ್ಲೆಯಲ್ಲಿ ಡಾ. ಕಲ್ಲಡ್ಕ ಪ್ರಭಾಕರ ಭಟ್ ಶಾಂತಿ ಕದಡುವ ಪ್ರಯತ್ನ ನಡೆಸಿದ್ದು ಈ ಹಿನ್ನೆಲೆಯಲ್ಲಿ ಚುನಾವಣೆ ಮುಗಿಯುವವರೆಗೆ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸಬೇಕು. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಒತ್ತಾಯಿಸಿದ್ದರು.