ಕ್ವಿಟ್ ಇಂಡಿಯಾ ಚಳವಳಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮಾರಾಮಾರಿ
ಮಂಗಳೂರು, ಆಗಸ್ಟ್ 9: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿನ ಒಳ ಜಗಳ ಬೀದಿಗೆ ಬಂದಿದೆ.
ಮಂಗಳೂರಿನ ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಕ್ವಿಟ್ ಇಂಡಿಯಾ ಚಳವಳಿ ಸಂಸ್ಮರಣೆಯ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ನ ಎರಡು ಗುಂಪುಗಳು ಹಿರಿಯ ನಾಯಕರ ಎದುರೇ ಪರಸ್ಪರ ಹೊಡೆದಾಡಿಕೊಂಡಿವೆ.
ಕಾಂಗ್ರೆಸ್ಸಿನ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದ್ದು, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಬೆಂಬಲಿಗನ ಮೇಲೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಹಲ್ಲೆ ನಡೆದಿದೆ.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಮತ್ತು ಐವನ್ ಡಿಸೋಜ ಬೆಂಬಲಿಗರ ಗುಂಪಿನ ಮಧ್ಯೆ ಘರ್ಷಣೆ ನಡೆದಿತ್ತು. ಎರಡೂ ಬಣಗಳ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದು ಮಾಜಿ ಸಚಿವ ರಮಾನಾಥ ರೈ ಮತ್ತು ಐವನ್ ಡಿಸೋಜ ಸಮ್ಮುಖದಲ್ಲೇ ಬಡಿದಾಡಿಕೊಂಡಿದ್ದಾರೆ.
ಐವನ್ ಡಿಸೋಜಾ ಜೊತೆಗೆ ಗುರುತಿಸಿಕೊಂಡಿದ್ದ ಯುವ ಕಾಂಗ್ರೆಸ್ ಮುಖಂಡ ಪುನೀತ್ ಶೆಟ್ಟಿ ಮೇಲೆ ಮಿಥುನ್ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ರಮಾನಾಥ ರೈ ಹಾಗೂ ಐವನ್ ಡಿಸೋಜಾ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಗಾಯಗೊಂಡಿರುವ ಪುನಿತ್ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಈ ಘಟನೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಸ್ಥಳದಲ್ಲಿ ಪೊಲೀಸರು, ಕಾಂಗ್ರೆಸ್ ಪ್ರಮುಖರು ಇರುವಂತೆಯೇ ಹಲ್ಲೆ ಕೃತ್ಯ ನಡೆದಿದೆ. ಬೆಂಬಲಿಗನ ಮೇಲೆ ಹಲ್ಲೆ ನಡೆಯುತ್ತಿರುವಾಗ ಸ್ವತಃ ಐವನ್ ಡಿಸೋಜಾ ತಮ್ಮ ಆಪ್ತನ ರಕ್ಷಣೆ ಮಾಡಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿಯಲ್ಲಿರುವ ಕಾಂಗ್ರೆಸ್ ನಲ್ಲಿ ಭುಗಿಲೆದ್ದಿರುವ ಈ ವೈರತ್ವ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕರನ್ನು ಚಿಂತೆಗೀಡುಮಾಡಿದೆ.
ದಕ್ಷಿಣ ಕನ್ನಡದ ಲೋಕಸಭಾ ಟಿಕೆಟ್ ಗಾಗಿ ಒಂದೆಡೆ ಮಿಥುನ್ ರೈ ಹಾಗು ಇನ್ನೊಂದೆಡೆ ಐವನ್ ಡಿಸೋಜಾ ಭಾರೀ ಕಸರತ್ತು ನಡೆಸುತ್ತಿದ್ದಾರೆ. ಈ ನಡುವೆ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವ ರಮಾನಾಥ ರೈ ಕೂಡ ಲೋಕಸಭಾ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಉತ್ಸುಕರಾಗಿದ್ದಾರೆ.