ಪೋಷಕರ ನಿರ್ಲಕ್ಷ್ಯ, ಕಾರಿನಲ್ಲಿ ಮಗು ಉಸಿರುಗಟ್ಟಿ ಸಾವು
ತಾಯಿ ಜೊತೆ ಅಜ್ಜಿ ಮನೆಗೆ ಬಂದ ಮಗುವೊಂದು ಕಾರಿನಲ್ಲೇ ಬಾಕಿಯಾಗಿ ಉಸಿರುಗಟ್ಟಿ ಸಾವನ್ನಪ್ಪಿದ ದುರ್ಘಟನೆ ಪುತ್ತೂರಿನ ಹೊರವಲಯದ ಹಾರಾಡಿಯಲ್ಲಿ ನಡೆದಿದೆ. ಉಳ್ಳಾಲದ ಇಮ್ರಾನ್ ಎಂಬವರ ಪುತ್ರಿ ರಹಮತ್ (3) ಮೃತಪಟ್ಟ ಮಗು.
ಮಂಗಳೂರು : ತಾಯಿ ಜೊತೆ ಅಜ್ಜಿ ಮನೆಗೆ ಬಂದ ಮಗುವೊಂದು ಕಾರಿನಲ್ಲೇ ಬಾಕಿಯಾಗಿ ಉಸಿರುಗಟ್ಟಿ ಸಾವನ್ನಪ್ಪಿದೆ. ಈ ದುರ್ಘಟನೆ ಪುತ್ತೂರಿನ ಹೊರವಲಯದ ಹಾರಾಡಿಯಲ್ಲಿ ನಡೆದಿದೆ. ಉಳ್ಳಾಲದ ಇಮ್ರಾನ್ ಎಂಬವರ ಪುತ್ರಿ ರಹಮತ್ (3) ಮೃತಪಟ್ಟ ಮಗು.
ಇಮ್ರಾನ್ ವಿದೇಶದಲ್ಲಿದ್ದು ಪುತ್ತೂರಿನ ಹಾರಾಡಿಯ ಸಂಶೀರ ಎಂಬವರನ್ನು ಮದುವೆಯಾಗಿದ್ದರು. ಎರಡನೇ ಹೆರಿಗೆಯಾಗಿ 20 ದಿನಗಳು ಕಳೆದಿದ್ದು ಬುಧವಾರ ಸಂಜೆ ತಾಯಿ ಮನೆಗೆ ಬಂದಿದ್ದರು. ಹಾರಾಡಿಗೆ ಬಂದ ಇಮ್ರಾನ್ ಕುಟುಂಬಸ್ಥರು ಎಲ್ಲರೂ ಕಾರಿನಿಂದ ಇಳಿದಿದ್ದರು. ಆದರೆ ಮಗುವನ್ನು ಕಾರಿನಲ್ಲೇ ಬಿಟ್ಟಿದ್ದರು.
ಸ್ವಲ್ಪ ಹೊತ್ತಿನ ಬಳಿಕ ಮಗಳು ಕಾಣತ್ತಿಲ್ಲ ಎಂದು ತಾಯಿ ಹುಡುಕಾಡಿದ್ದಾರೆ. ಆ ವೇಳೆ ಕಾರಿನಲ್ಲಿ ಮಗು ಕೂತ ಸ್ಥಿತಿಯಲ್ಲೇ ಮಲಗಿತ್ತು. ಎಬ್ಬಿಸುವ ವೇಳೆ ಮಗು ಮಾತನಾಡುತ್ತಿರಲಿಲ್ಲ. ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆ ವೇಳೆ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಾರಿನಿಂದ ಮನೆಯವರು ಇಳಿಯುವ ವೇಳೆ ಮಗು ನಿದ್ದೆ ಮಾಡಿತ್ತು. ಆ ಬಳಿಕ ಕಾರಿನ ಗ್ಲಾಸನ್ನು ಬಂದ್ ಮಡಿ ಬಾಗಿಲು ಹಾಕಿ ಎಲ್ಲರೂ ತೆರಳಿದ್ದರು. ನಿದ್ದೆಯಲ್ಲಿದ್ದ ಮಗು ಅಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದೆ ಎನ್ನಲಾಗಿದೆ.
ಕಾರು ಅಪಘಾತ -ವ್ಯಕ್ತಿ ಸಾವು
ಸ್ವಿಫ್ಟ್ ಕಾರು ಅಪಘಾತಕ್ಕೀಡಾಗಿ ವ್ಯಕ್ತಿಯೋರ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರು ಪಡೀಲು ಸಮೀಪ ಶುಕ್ರವಾರ ನಸುಕಿನ ಜಾವ ಸಂಭವಿಸಿದೆ.
ಮೃತರನ್ನು ಕಡಂಬಾರು ನಿವಾಸಿ ಯೂಸುಫ್(38) ಎಂದು ಗುರುತಿಸಲಾಗಿದೆ. ಜೊತೆಗಿದ್ದ ಮಚ್ಚಂಪಾಡಿ ನಿವಾಸಿ ಕಲೀಲ್ ಬಜಾಲ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೇ 7ರಂದು ಯೂಸುಫ್ ನ ಅಣ್ಣನ ಮಗಳ ಮದುವೆ ನಿಗದಿಯಾಗಿತ್ತು. ಇದರಂತೆ ಸಕಲೇಶಪುರದ ಸಂಬಂಧಿಕರ ಮನೆಗೆ ಆಮಂತ್ರಣ ನೀಡಲು ಮನೆಯಿಂದ ತೆರಳಿದ್ದರು. ಮದುವೆ ಆಮಂತ್ರಣ ನೀಡಿ ಹಿಂತಿರುಗುತ್ತಿದ್ದಾಗ ಈ ಕಾರು ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಅಪಘಾತದಿಂದ ಯೂಸುಫ್ ಗಂಭೀರವಾಗಿ ಗಾಯಗೊಂಡಿದ್ದು, ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಮೃತರು ಮಂಜೇಶ್ವರದಲ್ಲಿ ಉದ್ಯಮ ನಡೆಸುತ್ತಿದ್ದು, ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.