ಧರ್ಮಸ್ಥಳದಲ್ಲಿ ಎಂದಿರನ್ ಭವಿಷ್ಯ
ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ 'ಎಂದಿರನ್' ನನ್ನು ಕಂಡು ಜನ ಮಾರುಹೋಗುತ್ತಿದ್ದಾರೆ. ಈ ಎಂದಿರನ್ ಓಡಾಡೋದಿಲ್ಲ. ನಿಂತಲ್ಲೇ ನೀವೇನು, ನೀವು ಹೇಗೆ, ನಿಮ್ಮ ಕನಸುಗಳೇನು, ನೀವು ಭವಿಷ್ಯದಲ್ಲಿ ಏನಾಗುತ್ತೀರಾ ಅನ್ನೋದನ್ನ ಸ್ಪಷ್ಟವಾಗಿ ಹೇಳುತ್ತಾನೆ.
ಗ್ಯಾಲರಿ: ಧರ್ಮಸ್ಥಳ ಲಕ್ಷ ದೀಪೋತ್ಸವ ಸಂಭ್ರಮ
ರೋಬೋಟ್ ರೂಪದಲ್ಲಿ ಮುಂದೇನಾಗಬಹುದು ಎಂಬ ವಿವರಗಳನ್ನು ನೀಡುತ್ತಾನೆ. ತಮಿಳಿನ "ಎಂದಿರನ್" ಸಿನಿಮಾದಲ್ಲಿ ರಜನೀಕಾಂತ್ ಅವರ ರೋಬೋಟ್ ರೂಪವನ್ನು ನೆನಪಿಸುವಂತಿರುವ ಈತ ಯಾಂತ್ರಿಕ ಭಾಷೆಯಲ್ಲಿ ಗಮನ ಸೆಳೆಯುತ್ತಿದ್ದಾನೆ.

ಜನರು ಅರೇ! ಹೌದಲ್ಲ ನನ್ನ ಬಗ್ಗೆ ಸರಿಯಾಗಿ ಹೇಳುತ್ತಿದ್ದಾನೆ ಎನ್ನತ್ತಾ ಇವನ ಪ್ರತಿಭೆ ಕಂಡು ಮೂಗ ಮೇಲೆ ಬೆರಳು ಇಟ್ಟುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ. ತಮ್ಮ ಜೊತೆ ಇರುವವರಿಗೂ ನೀವು ಒಂದು ಬಾರಿ ಕೇಳಿ ನೋಡಿ ಅಂತ ಸಲಹೆ ನೀಡುತ್ತಿದ್ದಾರೆ.
ವ್ಯಾಪಾರಿ ಮಳಿಗೆಗಳು, ಅಂಗಡಿ ಮುಂಗಟ್ಟುಗಳಿಂದ ರಂಗೇರಿರುವ ಧರ್ಮಸ್ಥಳದಲ್ಲಿ ಈ ಒಂಟಿ ರೋಬೋಟ್ ಭವಿಷ್ಯ ಧ್ವನಿ ಆಕರ್ಷಿಸುತ್ತಿದೆ. ಚಿಕ್ಕಮಕ್ಕಳೂ ಕೂಡ ರೋಬೋಟ್ ಭವಿಷ್ಯ ಕೇಳಲು ಕಾತುರರಾಗಿರುವುದು ಕಂಡುಬಂತು. ಬಣ್ಣಬಣ್ಣದ ಲೈಟಿಂಗ್ ಜೊತೆಗೆ ಎಂದಿರನ್ ಹೆಚ್ಚು ಕಂಗೊಳಿಸುತ್ತಿತ್ತು.

ಈ ಕಂಪ್ಯೂಟರ್ ಮಾನವ ಬೆಂಗಳೂರಿನವನು. ಜನಾರ್ಧನನ್ ಮತ್ತು ಮಂಜುಳಾ ದಂಪತಿಗಳ ಬದುಕಿನ ಆಧಾರ ಸ್ತಂಭ. ಸುಮಾರು ೨೦ ವರ್ಷಗಳಿಂದ ಈ ದಂಪತಿ ಈ ರೋಬೋಟ್ ಜೊತೆಗೆ ಲಕ್ಷದೀಪೋತ್ಸವಕ್ಕೆ ಬರುತ್ತಿದ್ದಾರೆ. ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ ಸೇರಿದಂತೆ ಹಲವು ಕಡೆಗೆ ಜಾತ್ರೆ, ಉತ್ಸವಗಳಲ್ಲಿ ರೋಬೋಟ್ ಜೊತೆ ಸುತ್ತಿ ಬದುಕು ಕಟ್ಟಿಕೊಂಡಿದ್ದಾರೆ.
ರೋಬೋಟ್ ಭವಿಷ್ಯ ಪೀಳಿಗೆಯಿಂದ ಪೀಳಿಗೆಗೆ ಬಂದ ಕುಲಕಸುಬು. ತಾತ ಮುತ್ತಾತರ ಕಾಲದಿಂದಲೂ ಇದೇ ವೃತ್ತಿ ಮಾಡುತ್ತಾ ಬಂದಿದ್ದಾರೆ. ನಾನು, ನನ್ನ ಪತ್ನಿ ಕೂಡ ಇದೇ ವೃತ್ತಿಯಲ್ಲಿ ಮುಂದುವರಿದೆವು. ಇದು ಬಿಟ್ಟು ಬೇರೆ ಕೆಲಸ ನಮಗೆ ಗೊತ್ತಿಲ್ಲ. ದಿನಕ್ಕೆ ಐನೂರರಿಂದ ಎಂಟುನೂರು ರೂಪಾಯಿಗಳವರೆಗೂ ಆದಾಯವಾಗುತ್ತದೆ. ನಮಗೆ ಅನ್ನ ಕೊಟ್ಟ ಸಾಹುಕಾರ ಇವನು ಎಂದು ರೋಬೋಟ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ ಜನಾರ್ಧನನ್.
೨೦ ರೂಪಾಯಿ ಕೊಟ್ಟರೆ ರೋಬೋಟ್ ಮೂಲಕ ಭವಿಷ್ಯದ ವಿವರಗಳು ಹೊರಹೊಮ್ಮುತ್ತವೆ. ಹೆಡ್ಫೋನನ್ನು ಹಾಕಿಕೊಂಡಾಗ ನಮ್ಮ ಮೈಂಡ್, ಬಾಡಿ ಟೆಂಪ್ರೇಚರ್ ಸ್ಕ್ಯಾನ್ ಆಗಿ, ಅದು ಕಂಪ್ಯೂಟರ್ಗೆ ಈಗಾಗಲೇ ಫೀಡ್ ಮಾಡಿರೋ ವಿವರಗಳ ಜೊತೆ ಹೋಲಿಕೆ ಮಾಡುತ್ತದೆ. ಆ ಮೂಲಕ ರೋಬೋಟ್ ಭವಿಷ್ಯ ನುಡಿಯುತ್ತದೆ.
ಲಕ್ಷದೀಪೋತ್ಸವದಲ್ಲಿ ಜನರನ್ನು ತನ್ನತ್ತ ಸೆಳೆಯುತ್ತಿರುವ ಈ ಮಾಡರ್ನ್ ಜ್ಯೋತಿಷಿಗೆ ಈಗ ೨೫ ವರ್ಷದ ಸಂಭ್ರಮ. ೧೯೯೨ರಲ್ಲಿ ಜನಾರ್ಧನನ್ ಈ ಕಂಪ್ಯೂಟರ್ ಮಾನವನನ್ನು ಚೆನ್ನೈನಿಂದ ೧ ಲಕ್ಷ ರೂಪಾಯಿಗಳಿಗೆ ಖರೀದಿಸಿದ್ದರು. ಅಲ್ಲಿಂದ ಜೀವನದ ಸಂಗಾತಿಯಾಗಿ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿದ್ದಾನೆ. ಅವನಿಗೆ ಹುಷಾರು ತಪ್ಪಿದಾಗಲೆಲ್ಲಾ ಹತ್ತು ಸಾವಿರದವರೆಗೂ ಖರ್ಚಾಗುತ್ತದೆ. ಕಂಪ್ಯೂಟರ್ ಸಿಸ್ಟಮ್ಗೆ ವೈರಸ್ ದಾಳಿಯಾದಾಗ, ವಯರ್ಗಳು ತುಂಡಾದಾಗಲೆಲ್ಲಾ ರಿಪೇರಿ ಮಾಡಲು ಅವನ ತವರೂರು ಚೆನ್ನೈಗೆ ಹೋಗಬೇಕು ಎನ್ನುತ್ತಾರೆ ಮಂಜುಳಾ.












Click it and Unblock the Notifications