ಮಂಗಳೂರಿನಲ್ಲಿ ಮೊಬೈಲ್ ಆ್ಯಪ್ ಆಧಾರಿತ ಜೀವರಕ್ಷಕ ಸೇವೆ
ಮಂಗಳೂರು, ಸಪ್ಟೆಂಬರ್ 17: ಯಾರಿಗಾದರೂ ಹೃದಯಾಘಾತ, ಪಾರ್ಶ್ವವಾಯು , ಅಪಘಾತ ಸಂಭವಿಸಿದ ಅತ್ಯಂತ ತುರ್ತು ಸಂದರ್ಭದಲ್ಲಿ ಮೊಬೈಲ್ ನ ಒಂದು ಬಟನ್ ಟಚ್ ನಿಂದ ಆಂಬುಲೆನ್ಸ್ ಬಂದು ನಿಮ್ಮ ಎದುರು ನಿಂತರೆ! ಇದು ಕೇವಲ ಊಹೆಯಲ್ಲ, ವಸ್ತುಶಃ ನಿಜವಾಗಿದೆ.
ಮಂಗಳೂರಿನಲ್ಲಿ 'ಸೇವಿಯರ್' ಎನ್ನುವ ಆರೋಗ್ಯ ಸೇವೆಯ ಸಮಗ್ರ ಆ್ಯಪ್ ಇದೀಗ ಸಿದ್ಧಗೊಂಡಿದೆ. ಇದೊಂದು ಆಂಬುಲೆನ್ಸ್ ಜಾಲವನ್ನೊಳಗೊಂಡ, ಆಸ್ಪತ್ರೆಗಳ ಜತೆಗೆ ಲಿಂಕ್ ಅಡಕವಾಗಿರುವ ವ್ಯವಸ್ಥೆ ಯ ಆ್ಯಪ್ . ತುರ್ತು ಪರಿಸ್ಥಿತಿ ಎದುರಾದಾಗ ಆಂಬುಲೆನ್ಸ್ಗಳ ನಂಬರ್ ಗೊತ್ತಿರಬೇಕು, ಅವರಿಗೆ ಕರೆ ಮಾಡಿದರೂ ಬರುವ ಖಾತ್ರಿ ಇಲ್ಲ . ಇಂತಹ ಸಂದರ್ಭದಲ್ಲಿ ಈ ಸೇವಿಯರ್ ಆ್ಯಪ್ ಅತ್ಯಂತ ಉಪಯುಕ್ತ. ಮೊಬೈಲ್ ನಲ್ಲಿ ಈ ಆ್ಯಪ್ ಇದ್ದಲ್ಲಿ ಹತ್ತಿರದಲ್ಲಿರುವ ಆಂಬುಲೆನ್ಸ್ ಸ್ಥಳಕ್ಕೆ ಧಾವಿಸಿಬರುತ್ತದೆ, ನೆರವಿಗೆ ಸ್ವಯಂಸೇವಕರು ಬೇಕಿದ್ದರೆ ಅವರನ್ನೂ ಕರೆಯುವ ವ್ಯವಸ್ಥೆ ಆ್ಯಪ್ನಲ್ಲೇ ಇದೆ.

ಈ ಆ್ಯಪ್ ಹೊಂದಿದವರಿಗೆ ಅಥವಾ ಬಂಧು ಮಿತ್ರರಿಗೆ ಯಾರಿಗಾದರೂ ವೈದ್ಯಕೀಯ ತುರ್ತು ಸ್ಥಿತಿ ಉಂಟಾದಲ್ಲಿ ಅವರು ಆ್ಯಪ್ ತೆರೆದು ಆಂಬುಲೆನ್ಸ್ ರಿಕ್ವೆಸ್ಟ್ ಬಟನ್ ಒತ್ತಿದ ತಕ್ಷಣ ಹತ್ತಿರದಲ್ಲಿರುವ ಎಲ್ಲ ಆಂಬುಲೆನ್ಸ್ಗಳ ಮೊಬೈಲ್ಗಳೂ ಬೀಪ್ ಆಗುತ್ತವೆ. ರಿಕ್ವೆಸ್ಟ್ ಬಂದ ಸ್ಥಳದ ಜಿಪಿಎಸ್ ವಿವರವೂ ಅದರಲ್ಲಿ ಸಿಗುತ್ತದೆ. ಅವರು ರಿಕ್ವೆಸ್ಟ್ನ್ನು ಓಕೆ ಮಾಡಿದ ಕೂಡಲೇ ಆಂಬುಲೆನ್ಸ್ ಚಾಲಕರ ಮೊಬೈಲ್ ಸಂಖ್ಯೆ ರಿಕ್ವೆಸ್ಟ್ ಕಳುಹಿಸಿದವರಿಗೆ ಸಿಗುತ್ತದೆ. ಎಷ್ಟು ಹೊತ್ತಿನಲ್ಲಿ ಅಂಬುಲೆನ್ಸ್ ಸ್ಥಳಕ್ಕೆ ಬರುತ್ತದೆ ಎಂಬುದು ಕೂಡ ರಿಯಲ್ಟೈಮ್ನಲ್ಲಿ ಗೊತ್ತಾಗುತ್ತದೆ. ಆನ್ಲೈನ್ ಟ್ಯಾಕ್ಸಿ ಬುಕಿಂಗ್ ರೀತಿಯಲ್ಲಿಯೇ ಇದು ಕಾರ್ಯವೆಸಗುತ್ತದೆ.
ಸಾಮಾಜಿಕ ಕಳಕಳಿಯುಳ್ಳ ಮಂಗಳೂರಿನ ಕೆಲ ವೈದ್ಯರು, ಸಾಫ್ಟ್ವೇರ್ ತಜ್ಞರ ತಂಡ ಈ ಆ್ಯಪ್ ಸಿದ್ದಪಡಿಸಿದೆ. ಅಪಘಾತದಲ್ಲಿ ಗಾಯಗೊಂಡು ಅಥವಾ ಹೃದಯಾಘಾತಕ್ಕೊಳಗಾದವರನ್ನು ನಿರ್ದಿಷ್ಟ ಸಮಯಕ್ಕೆ ಆಸ್ಪತ್ರೆಗೆ ಸಾಗಿಸದಿದ್ದಲ್ಲಿ ರೋಗಿಗಳು ಸಾಯುವ ಸಾಧ್ಯತೆ ಹೆಚ್ಚು. ಹಾಗಾಗಿ ಸರಿಯಾದ ಸಮಯಕ್ಕೆ ಸ್ಪಂದನೆ ನೀಡುವ ತಂತ್ರಜ್ಞಾನದ ನೆರವು ಪಡೆಯಬಹುದೇ ಎಂಬ ಚಿಂತನೆ ಕೆಎಂಸಿಯ ವೈದ್ಯರಾದ ಡಾ.ಮನೀಷ್ ರೈ ನೆಡಸಿದದರು. ಅವರ ಚಿಂತನೆಯನ್ನು ಮಿತ್ರ, ಕೋಡ್ಕ್ರಾಫ್ಟ್ ಟೆಕ್ನಾಲಜೀಸ್ನ ಸಂಸ್ಥೆಯ ಸಿಇಒ ದೀಕ್ಷಿತ್ ರೈ ಅವರಲ್ಲಿ ಹಂಚಿಕೊಂಡರು. ಈ ಚಿಂತನೆಯಲ್ಲೇ ಆಧಾರವಾಗಿಟ್ಟು ಕಳೆದ ಎರಡು ವರ್ಷದಿಂದ ಕೋಡ್ಕ್ರಾಫ್ಟ್ನ ತಂಡ ಈ 'ಸೇವಿಯರ್' ಆ್ಯಪ್ ಅಭಿವೃದ್ಧಿ ಪಡಿಸಿದೆ.

ಈ ಆ್ಯಪ್ ನ ಇನ್ನೊಂದು ವಿಶೇಷತೆ ಎಂದರೆ ಆಂಬುಲೆನ್ಸ್ ಬಳಕೆ ಮಾಡುವ ರೋಗಿ ಇದರಲ್ಲಿ ಶುಲ್ಕ ಪಾವತಿಸಬೇಕಾಗಿಲ್ಲ. ಇನ್ನೊಂದು ಅಂಶ ಎಂದರೆ ಈ ಆ್ಯಪ್ ನಲ್ಲಿ ಅಳವಡಿಸಿಕೊಳ್ಳಲಾದ ಆಂಬುಲೆನ್ಸ್ಗಳೆಲ್ಲ ಈ ಯೋಜನೆಯಲ್ಲಿ ಸೇರಿಕೊಂಡಿರುವ ಆಸ್ಪತ್ರೆಗಳಿಗೆ ಸೇರಿದ್ದು. ಹಾಗೆಂದು ರೋಗಿ ಅದೇ ಆಸ್ಪತ್ರೆಗೆ ಹೋಗಬೇಕೆಂದಿಲ್ಲ, ರೋಗಿ ಇಚ್ಛಿಸುವ ಯಾವುದೇ ಆಸ್ಪತ್ರೆಗೂ ಹೋಗಬಹುದು. ಈ ವ್ಯವಸ್ಥೆಗೆ ಎಲ್ಲ ಸದಸ್ಯ ಆಸ್ಪತ್ರೆಗಳೂ ಒಪ್ಪಿಗೆ ಸೂಚಿಸಿವೆ. ಸದ್ಯಕ್ಕೆ ಮಂಗಳೂರಿನ ಎ.ಜೆ.ಆಸ್ಪತ್ರೆ, ಕೆಎಂಸಿ, ಇಂಡಿಯಾನಾ, ಫಾದರ್ ಮುಲ್ಲರ್ಸ್, ಕೆ.ಎಸ್.ಹೆಗ್ಡೆ, ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆ ಸೇರಿದಂತೆ 13 ಆಸ್ಪತ್ರೆಯವರು ಈ ವ್ಯವಸ್ಥೆಗೆ ಸಹಭಾಗಿತ್ವ ನೀಡಿದ್ದಾರೆ. ಮುಂದೆ ಸರ್ಕಾರಿ ಆಂಬುಲೆನ್ಸ್ಗಳನ್ನೂ ಇದರಲ್ಲಿ ಸೇರಿಸಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ.












Click it and Unblock the Notifications