ಮುಸ್ಲಿಂ ಎಂಬ ಕಾರಣಕ್ಕೆ ಪೊಲೀಸರಿಂದ ಹಲ್ಲೆ: ಡಿವೈಎಫ್ಐ ಆರೋಪ
ಮಂಗಳೂರು, ಅಕ್ಟೋಬರ್ 03: ಮುಸ್ಲಿಂ ಎಂಬ ಕಾರಣಕ್ಕೆ ಗಸ್ತಿನಲ್ಲಿದ್ದ ವೇಣೂರು ಪೊಲೀಸರು ತಮ್ಮ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಡಿವೈಎಫ್ಐ ಆರೋಪಿಸಿದೆ.
ಕಳೆದ ರಾತ್ರಿ ವೇಣೂರಿನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬೇಕರಿಯ ಬಾಗಿಲು ಮುಚ್ಚಿ ತನ್ನ ತಮ್ಮನೊಂದಿಗೆ ಬೈಕ್ ನಲ್ಲಿ ಪತ್ನಿಯ ಮನೆಗೆ ತೆರಳುತ್ತಿದ್ದ ಡಿವೈಎಫ್ಐ ಮುಖಂಡ ರಿಯಾಝ್ ಮಾಂತೂರು (25), ಅವರ ಸಹೋದರ ಇರ್ಷಾದ್ (18) ಮೇಲೆ ಪೊಲೀಸರು ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ರಿಯಾಝ್ ವಾರದ ಹಿಂದೆಯಷ್ಟೇ ಮದುವೆಯಾಗಿದ್ದು, ಮೂಡುಬಿದಿರೆ ಸಮೀಪದ ಗಂಜಿಮಠದಲ್ಲಿ ಸಹೋದರನೊಂದಿಗೆ ಬೈಕ್ ನಲ್ಲಿ ಬೆಳ್ತಂಗಡಿಯ ಕೆಳ್ತಜೆಗೆ ತೆರಳುತ್ತಿದ್ದರು ಎಂದು ಹೇಳಲಾಗಿದೆ. ಈ ಮಾರ್ಗದಲ್ಲಿ ವೇಣೂರು ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು.

ಈ ವೇಳೆ ರಿಯಾಝ್ ಚಲಾಯಿಸುತ್ತಿದ್ದ ಬೈಕ್ ನಿಲ್ಲಿಸಿದ ಪೊಲೀಸರು ವಾಹನದ ದಾಖಲೆಗಳನ್ನು ತೋರಿಸಿಲು ಸೂಚಿಸಿದ್ದಾರೆ. ಈ ವೇಳೆ ರಿಯಾಝ್ ಡ್ರೈವಿಂಗ್ ಲೈಸನ್ಸ್ ನೀಡಿ, ವಾಹನದ ಉಳಿದ ದಾಖಲೆಗಳು ಮನೆಯಲ್ಲಿದ್ದು, ಬೆಳಗ್ಗೆ ತರುವುದಾಗಿ ತಿಳಿಸಿದ್ದಾರೆ.
ಈ ವೇಳೆ ರೀಯಾಝ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದೇ ಸಂದರ್ಭ ಅದೇ ದಾರಿಯಲ್ಲಿ ಕುಟುಂಬ ಸಮೇತರಾಗಿ ಬಂದ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಘಟನೆ ಬಗ್ಗೆ ಪ್ರಶ್ನಿಸಿದ್ದಾರೆ. ನಂತರ ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಿ ಇವರಿಬ್ಬರನ್ನು ಒದ್ದು ಒಳಗೆ ಹಾಕಿ ಎಂದು ಆದೇಶಿಸಿದ್ದಾರೆ.
ನಂತರ ಪೊಲೀಸರು ರಿಯಾಝ್ ಮಾಂತೂರು ಹಾಗು ಅವರ ಸಹೋದರ ಇರ್ಷಾದ್ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಮಾರ್ಗಮಧ್ಯೆಯೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.












Click it and Unblock the Notifications