ಕಟೀಲಿನಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಿಸಿ ಬಡವರ ಬಂಧುವಾದ ವೈದ್ಯ
ಮಂಗಳೂರು, ಮೇ.05: ಹಳ್ಳಿಯ ಪುಟ್ಟ ಶಾಲೆಯಲ್ಲಿ ಓದಿ ಪಟ್ಟಣ ಸೇರಿದ ಬಾಲಕ ನಂತರ ಖ್ಯಾತ ವೈದ್ಯನಾಗಿ ಅದೇ ಹಳ್ಳಿಗೆ ಮರಳಿ ಸುಸಜ್ಜಿತ ಆಸ್ಪತ್ರೆ ಕಟ್ಟಿಸಿದರು. ಇದನ್ನು ಕೇಳಿದಾಗ ಯಾವುದೋ ಸಿನಿಮಾ ಕಥೆ ಅನಿಸುತ್ತದೆ. ಆದರೆ ಇದು ಕಟೀಲಿನಲ್ಲಿ ನಡೆದ ನೈಜ ಘಟನೆ.
ಮುಂಬಯಿಯ ಖ್ಯಾತ ವೈದ್ಯ ಡಾ. ಸುರೇಶ್ ರಾವ್ ಮೂಲ ಶ್ರೀ ಕ್ಷೇತ್ರ ಕಟೀಲು. ಇವರು ಹುಟ್ಟಿದ್ದು, ಹೈಸ್ಕೂಲು ಕಲಿತದ್ದು ಕಟೀಲಿನಲ್ಲೇ. ನಂತರ 1970ರಲ್ಲಿ ಮುಂಬೈಗೆ ಹೋಗಿ ಎಂಬಿಬಿಎಸ್ ಕಲಿತವರು ಅಲ್ಲೇ ಆಸ್ಪತ್ರೆ ತೆರೆದರು. 50 ಬೆಡ್ ಗಳ ಸಂಜೀವಿನಿ ಆಸ್ಪತ್ರೆ ನಡೆಸುತ್ತಿರುವ ಡಾ ಸುರೇಶ್ ರಾವ್ ತನ್ನ ಹುಟ್ಟೂರಿನಲ್ಲಿಯೂ ಒಂದು ಆಸ್ಪತ್ರೆ ಕಟ್ಟಿಸುವ ಕನಸು ಕಂಡಿದ್ದರು.
ಬೆಂಗಳೂರಿನ ಆಸ್ಪತ್ರೆಗಳಲ್ಲಿ ಜೂನ್ 1ರಿಂದ ಕ್ಯಾಶ್ ಲೆಸ್ ಇನ್ಷೂರೆನ್ಸ್ ಮಾನ್ಯ ಇಲ್ಲ
ಅದರಂತೆ ಕನಸನ್ನು ಈಗ ಡಾ ರಾವ್ ಸಾಕಾರಗೊಳಿಸಿದ್ದಾರೆ. ಪುರಾಣ ಪ್ರಸಿದ್ಧ ಕಟೀಲು ದುರ್ಗಾಪರಮೇಶ್ವರಿ ದೇವರ ಹೆಸರಿನಲ್ಲಿ ಸುಮಾರು 25 ಕೋಟಿ ರೂಪಾಯಿ ವೆಚ್ಚದಲ್ಲಿ ನೂರು ಹಾಸಿಗೆಗಳ ಅತ್ಯಂತ ಸುಸಜ್ಜಿತ ಆಸ್ಪತ್ರೆಯನ್ನು ಡಾ ಸುರೇಶ್ ರಾವ್ ಕಟ್ಟಿಸಿ ಊರಿಗೆ ಅರ್ಪಿಸಿದ್ದಾರೆ.
ಈ ಹಿಂದೆ ಸುರೇಶ್ ರಾವ್ ಮುಂಬೈನಿಂದ ಕಟೀಲಿಗೆ ಬಂದು ಹೋಗುತ್ತಿದ್ದಾಗ ತನ್ನೂರಿನ, ಆಸುಪಾಸಿನ ಊರಿನವರು ಆರೋಗ್ಯ ಹದಗೆಟ್ಟು ದೂರದ ಆಸ್ಪತ್ರೆಗೆ ಹೋಗುವಾಗ ಮೃತಪಟ್ಟರು. ಅಷ್ಟೇ ಅಲ್ಲ, ಅಪಘಾತವಾದರೆ ದೂರದ ಮಂಗಳೂರಿಗೆ ಕರೆದೊಯ್ಯಬೇಕಾಗಿತ್ತು.
ಇದೆಲ್ಲಾ ನೋಡಿದಾಗ ತನ್ನೂರಿನಲ್ಲಿ ಒಂದು ಆಸ್ಪತ್ರೆ ಕಟ್ಟಬೇಕು, ಇಲ್ಲಿ ಅನಿವಾರ್ಯ ಕೂಡ ಎಂಬುದನ್ನು ಸುರೇಶ್ ರಾವ್ ಮನಗಂಡರು. ಈ ಹಿನ್ನೆಲೆಯಲ್ಲಿ ಕಟೀಲಿನಲ್ಲಿ ದುರ್ಗಾ ಸಂಜೀವಿನಿ ಆಸ್ಪತ್ರೆ ಕಟ್ಟಿಸಿದ್ದಾರೆ.
ಸಿದ್ಧಗೊಂಡ ಬೃಹತ್ ಕಟ್ಟಡ
ಡಾ ಸುರೇಶ್ ರಾವ್, ಆಸ್ಪತ್ರೆಯ ಉಪಯೋಗ ಸುತ್ತಮುತ್ತಲಿನ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳ ಜನರಿಗೆ ಆಗಬೇಕು ಎಂದು ಯೋಚಿಸಿದರು. ತನ್ನ ಆಸ್ಪತ್ರೆ ಇರುವುದು ಮುಂಬೈನಲ್ಲಿ. ಹಾಗಾಗಿ ಇಲ್ಲಿ ಆಸ್ಪತ್ರೆ ನಡೆಸಲು ದೊಡ್ಡ ಸಂಸ್ಥೆ ಅಗತ್ಯ ಎಂದು ಯೋಚಿಸಿ ವಿವಿಧ ಸಂಸ್ಥೆಗಳನ್ನು ಕಂಡರು. ಡಾ ಸುರೇಶ್ ರಾವ್ ಅವರ ಯೋಚನೆಗೆ ಸ್ಪಂದಿಸಿದ್ದು ಕೆಎಂಸಿಯವರು. ಈ ಹಿನ್ನೆಲೆಯಲ್ಲಿ ಎರಡು ವರ್ಷದ ಹಿಂದೆ ಆಸ್ಪತ್ರೆಗೆ ಶಿಲಾನ್ಯಾಸ ಮಾಡಲಾಗಿತ್ತು. ಕಾಮಗಾರಿ ಅತಿವೇಗವಾಗಿ ಸಾಗಿ ಇದೀಗ ಬೃಹತ್ ಕಟ್ಟಡ ಸಿದ್ಧಗೊಂಡಿದೆ.
ವೈದ್ಯರಿಗೂ ಮನೆ
ಈ ಆಸ್ಪತ್ರೆಯಲ್ಲಿ ಹದಿನೈದು ಬೆಡ್ ಗಳ ಐಸಿಯು, ನಾಲ್ಕು ಸರ್ಜರಿ ಥಿಯೇಟರ್, ಬ್ಲಡ್ ಬ್ಯಾಂಕ್, ಡಯಾಲಿಸಿಸ್, ಇಸಿಜಿ, ಸೋನೋಗ್ರಾಫಿ, ಸಿಟಿಸ್ಕ್ಯಾನ್ ಹೀಗೆ ಎಲ್ಲಾ ಸವಲತ್ತುಗಳಿವೆ. ಸಿಸೇರಿಯನ್ಗೂ ವ್ಯವಸ್ಥೆಯಿದೆ. ಸದಾ ವೈದ್ಯರು ಇಲ್ಲಿಯೇ ಇರಬೇಕು ಎಂದು ಅವರಿಗೂ ಒಳ್ಳೆಯ ಮನೆಗಳನ್ನೂ ಕಟ್ಟಲಾಗುತ್ತಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ವೃದ್ಧರಿಗಾಗಿಯೇ ಪ್ರತ್ಯೇಕ ವಾರ್ಡ್!
ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ
ಮಣಿಪಾಲ್ ಆರೋಗ್ಯ ಸುರಕ್ಷಾ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆಗಳ ಮೂಲಕ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಸಿಗಬೇಕು ಎಂಬುದು ಡಾ ಸುರೇಶ್ ರಾವ್ ಅವರ ಆಶಯ. ಇಂಥ ಡಾ. ಸುರೇಶ್ ರಾವ್ ತನ್ನ ಮುಂಬೈನಲ್ಲಿ ಗಳಿಸಿದ ಆದಾಯವನ್ನು ಊರಿನ ಆಸ್ಪತ್ರೆಗೆ ತಂದು ಸುರಿಯುತ್ತಿದ್ದಾರೆ.
ನವರಾತ್ರಿ ಹೊತ್ತಿಗೆ ಕಾರ್ಯಾರಂಭ
ಒಂದೂವರೆ ಎಕರೆಯಲ್ಲಿ 70 ಸಾವಿರ ಚದರ ಅಡಿಯ ಕಟ್ಟಡ ಎದ್ದು ನಿಂತಿದೆ. ಪಕ್ಕದಲ್ಲಿ ಹದಿನೈದು ವೈದ್ಯರ ವಸತಿಗೃಹಗಳು ನಿರ್ಮಾಣವಾಗಲಿದೆ. ಮೂರು ನಾಲ್ಕು ತಿಂಗಳ ಒಳಗೆ ಒಂದೊಂದು ಚಿಕಿತ್ಸೆ ಆರಂಭವಾಗಿ ನವರಾತ್ರಿ ಹೊತ್ತಿಗೆ ಪೂರ್ಣಪ್ರಮಾಣದ ಆಸ್ಪತ್ರೆ ಕಾರ್ಯಾರಂಭವಾಗಲಿದೆ. ಬಡವರಿಗೆ ಉಪಯೋಗವಾಗಬೇಕು ಎಂಬ ಉದ್ದೇಶದಿಂದ ಈ ಆಸ್ಪತ್ರೆ ನಿರ್ಮಾಣವಾಗಿದೆ.
ಕೆಎಂಸಿ ಆಸ್ಪತ್ರೆ ಆಡಳಿತ ಮಂಡಳಿಯ ಐದು ಮಂದಿ, ಸಂಜೀವಿನಿ ಟ್ರಸ್ಟ್ ನ ಇಬ್ಬರು, ಕಟೀಲು ದೇಗುಲದ ಆಡಳಿತ ಮಂಡಳಿಯ ಈರ್ವರು ಮೊಕ್ತೇಸರರು ಹಾಗೂ ಸ್ಥಳೀಯ ಗಣ್ಯರೊಬ್ಬರನ್ನು ಒಳಗೊಂಡ ಸಮಿತಿ ಈ ಆಸ್ಪತ್ರೆಯ ಉಸ್ತುವಾರಿ ನೋಡಿಕೊಳ್ಳಲಿದೆ.