ಪ್ರೊ.ಭಗವಾನ್ ದೇವರನ್ನು ಶತ್ರುತ್ವದಿಂದ ಒಲಿಸಿಕೊಳ್ಳುತ್ತಿದ್ದಾರೆ: ವೀರೇಂದ್ರ ಹೆಗ್ಗಡೆ
ಮಂಗಳೂರು, ಜನವರಿ 02: ಶ್ರೀರಾಮನ ಬಗ್ಗೆ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗುವ ಹಿರಿಯ ಸಾಹಿತಿ ಪ್ರೊ.ಕೆ.ಎಸ್ . ಭಗವಾನ್ ವಿರುದ್ಧ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರೊ.ಭಗವಾನ್ ಬರೆದಿರುವ, ಇತ್ತೀಚೆಗಷ್ಟೇ ಬಿಡುಗಡೆಯಾದ 'ರಾಮಮಂದಿರ ಏಕೆ ಬೇಡ' ಎಂಬ ಹೊಸ ಪುಸ್ತಕದಲ್ಲಿ ಶ್ರೀರಾಮನ ಬಗ್ಗೆ ವಿವಾದಿತ ವಿಚಾರಗಳನ್ನು ಉಲ್ಲೇಖ ಮಾಡಿದ್ದರು.
ಶ್ರೀರಾಮ ದೇವರೆ ಅಲ್ಲ ಕೊಲೆಗಡುಕ. ರಾಮ ಸತ್ಯವಂತನೂ ಅಲ್ಲ, ವೀರನೂ ಅಲ್ಲ. ರಾಮ ಸೀತೆಯ ಜೊತೆ ಮಧು ಮೈರೇಯಕಂ ಎಂಬ ಮದ್ಯಪಾನ ಮಾಡುತ್ತಿದ್ದನು, ಮಾಂಸ ತಿನ್ನುತ್ತಿದ್ದನು. ರಾಮ ಮದಿರೆ ಮಾನಿನಿಯರಲ್ಲಿ ಮೈ ಮರೆಯುತ್ತಿದ್ದನು. ಅವನು ರಾಜ್ಯಭಾರ ಮಾಡುತ್ತಿರಲಿಲ್ಲ, ಬದಲಿಗೆ ಅವನ ತಮ್ಮ ಭರತ ರಾಜ್ಯವಾಳುತ್ತಿದ್ದ ಎಂದು ರಾಮನನ್ನು ನಿಂದಿಸಿದ್ದರು.

ಪ್ರೊ.ಭಗವಾನ್ ಅವರ ಅವಹೇಳನ ವಿಚಾರವಾಗಿ ಧರ್ಮಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಾ ಡಿ ವೀರೇಂದ್ರ ಹೆಗ್ಗಡೆ , ಕೆಲವರು ದೇವರನ್ನು ನಿಂದಿಸುತ್ತಾ ಸ್ತುತಿ ಮಾಡುತ್ತಾರೆ. ಪ್ರೊ.ಭಗವಾನ್ ದೇವರನ್ನು ಶತ್ರುತ್ವದಿಂದ ಒಲಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಮೋಕ್ಷ ಸಾಧನೆಯ ಹಾದಿಯಲ್ಲಿದ್ದಾರೆಂದು ಟೀಕಿಸಿದ್ದಾರೆ.
ಪುರಾಣ ಕಾಲದಲ್ಲಿ ಜಯ-ವಿಜಯ ಎನ್ನುವ ಅಸುರರು ದೇವರ ಬಳಿ ಬರಬೇಕೆಂದು ಭಗವಂತನಲ್ಲಿ ಕೇಳಿಕೊಂಡಾಗ , ಭಗವಂತ ಎರಡು ಆಯ್ಕೆಗಳನ್ನು ಅಸುರರ ಮುಂದಿಟ್ಟಿದ್ದರು. ಒಂದು ಶತ್ರುವಾಗಿ ಮೂರು ಜನ್ಮ ಕಳೆಯುವುದು, ಇನ್ನೊಂದು ಭಕ್ತನಾಗಿ ಏಳು ಜನ್ಮ ಕಳೆಯುವುದು.
ಅಸುರರು ಶತ್ರು ಜನ್ಮದ ಆಯ್ಕೆಯನ್ನು ಒಪ್ಪಿಕೊಂಡು ಭಗವಂತನನ್ನು ಸೇರಿದ್ದರು. ಅದೇ ಪ್ರಕಾರ ಪ್ರೊ.ಭಗವಾನ್ ಕೂಡ ರಾಮನ ವಿರುದ್ಧ ಶತ್ರುತ್ವದ ಸ್ತುತಿ ಮಾಡುವ ಮೂಲಕ ಮೋಕ್ಷ ಪಡೆಯಲು ಪ್ರಯತ್ನಿಸುತ್ತಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.












Click it and Unblock the Notifications